ದುಡಿಯಲು ಇಚ್ಛಿಸುವ ಕೈಗಳಿಗೆ ಉದ್ಯೋಗ ಕೊಡಿಸುವುದಕ್ಕಿಂತ ಶ್ರೇಷ್ಠ ಕೆಲಸ ಮತ್ತೊಂದಿಲ್ಲ: ಸಿಎಂ ಕುಮಾರಸ್ವಾಮಿ

ಬೆಂಗಳೂರು, ಸೆ. 29: ದುಡಿಯಲು ಇಚ್ಛಿಸುವ ಕೈಗಳಿಗೆ ಉದ್ಯೋಗ ಕೊಡಿಸುವುದಕ್ಕಿಂತ ಶ್ರೇಷ್ಠ ಕೆಲಸ ಮತ್ತೊಂದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶನಿವಾರ ಇಲ್ಲಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲ ಮತ್ತು ಜೀವನೋಪಾಯ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾಡಳಿತದ ಸಹಯೋಗದಲ್ಲಿ ಏರ್ಪಡಿಸಿದ್ದ ಉದ್ಯೋಗ ಮೇಳ ಉದ್ಫಾಟಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದ ಉದ್ಯೋಗಕಾಂಕ್ಷಿಗಳು ಸರಕಾರದ ಮನವಿಗೆ ಸ್ಪಂದಿಸಿ ನೂರಕ್ಕೂ ಹೆಚ್ಚು ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿವೆ. ತಾವು ನಡೆಸಿದ ಜನತಾ ದರ್ಶನದಿಂದ ಬಂದ 12 ಸಾವಿರ ಅರ್ಜಿಗಳಲ್ಲಿ 3ಸಾವಿರ ಅರ್ಜಿಗಳು ಉದ್ಯೋಗಕ್ಕೆ ಸಂಬಂಧಿಸಿದ್ದೆ ಆಗಿದೆ. 4 ತಿಂಗಳಲ್ಲಿ ಸುಮಾರು 300 ಕುಟುಂಬಗಳಿಗೆ ಉದ್ಯೋಗ ದೊರೆತಿದೆ ಎಂದು ಅವರು ಹೇಳಿದರು.
ರಾಜ್ಯದ 9 ಜಿಲ್ಲೆಗಳಲ್ಲಿ ವಿಷನ್ ಸಂಸ್ಥೆಯವರು 1ಲಕ್ಷ ಉದ್ಯೋಗ ಸೃಷ್ಟಿಸಿದ್ದಾರೆ. ಜನತಾ ದರ್ಶನದಲ್ಲಿ ಉದ್ಯೋಗ ಅರಸಿಬಂದ ಸುಮಾರು 3 ಸಾವಿರ ಜನರಿಗೆ ಇಲ್ಲಿ ಉದ್ಯೋಗ ಸಿಗುವುದರ ಜೊತೆಗೆ ಹೊಸದಾಗಿ ಉದ್ಯೋಗ ಅರಸಿ ಬಂದವರಿಗೂ ಆದ್ಯತೆ ನೀಡಲಾಗುವುದು ಎಂದು ಕುಮಾರಸ್ವಾಮಿ ನುಡಿದರು.
ಮೈತ್ರಿ ಸರಕಾರ ರೈತರ ಪರವಾಗಿದ್ದು ರೈತರ ಸಾಲಮನ್ನಾ ಕೈಗೊಂಡಿದೆ. ಸಾಲ ಪಾವತಿಗೆ ಬ್ಯಾಂಕ್ ದಲ್ಲಾಳಿಗಳ ಕಿರುಕುಳವನ್ನು ತಪ್ಪಿಸಲು ಕ್ರಮ ಕೈಗೊಂಡಿದ್ದು, ಸಣ್ಣ ವ್ಯಾಪಾರಿಗಳಿಗೆ ಮೊಬೈಲ್ ಬ್ಯಾಂಕ್ ತೆರೆದು ಬಡ್ಡಿರಹಿತ ಸಾಲ ಸೌಲಭ್ಯವನ್ನು ನೀಡುತ್ತಿದೆ ಎಂದು ಅವರು ಹೇಳಿದರು.
ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ವತಿಯಿಂದ ‘ರೋಷನಿ ಯೋಜನೆ’ಗೆ 500 ಕೋಟಿ ರೂ.ವ್ಯಯಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿರುವ ವಸತಿ ಶಾಲೆಗಳ ಬಾಡಿಗೆ ಕಟ್ಟಡ ತೆರವುಗೊಳಿಸಿ 4,500 ಕೋಟಿ ರೂ.ವೆಚ್ಚದಲ್ಲಿ ಉತ್ತಮ ಮೂಲಭೂತ ಸೌಕರ್ಯವುಳ್ಳ ಕಟ್ಟಡ ನಿರ್ಮಿಸಲು ತೀರ್ಮಾನಿಸಲಾಗಿದೆ.
ಇಡೀ ರಾಷ್ಟ್ರದಲ್ಲಿ ಅತಿ ಕಡಿಮೆ ಪೆಟ್ರೋಲ್ ದರ ಹೊಂದಿರುವ ರಾಜ್ಯ ನಮ್ಮದು. ಕರ್ನಾಟಕ ಸರಕಾರ ಪೆಟ್ರೋಲ್ ಮೇಲಿನ ಸೆಸ್ ಅನ್ನು ಶೇ 3.25ರಷ್ಟು ಕಡಿಮೆಗೊಳಿಸಿದೆ ಎಂದ ಅವರು, ಮೈತ್ರಿ ಸರಕಾರ ಅತ್ಯಂತ ಸುಭದ್ರವಾಗಿದೆ ಎಂದು ವಿಪಕ್ಷಗಳಿಗೆ ಇದೇ ವೇಳೆ ತಿರುಗೇಟು ನೀಡಿದರು.
ಕಂದಾಯ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಸಿಎಂ ಜನತಾ ದರ್ಶನದಿಂದ ಬಂದ ಅರ್ಜಿಗಳ ವಿಲೇವಾರಿ ಈ ಉದ್ಯೋಗ ಮೇಳದಿಂದ ಆಗುತ್ತದೆ ಎಂದರು.
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ಸಹಯೋಗದಲ್ಲಿ ನೂರಾರು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದು, ಹಲವು ಮಂದಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ ಎಂದ ಅವರು, 21ನೆ ಶತಮಾನ ಬಹುದೊಡ್ಡ ಸವಾಲು ಎಂದರೆ ಮಾನವ ಸಂಪನ್ಮೂಲ ನಿರ್ಮಾಣ ಮಾಡುವುದೇ ಆಗಿದೆ ಎಂದರು.
ಕೇಂದ್ರ ಸರಕಾರವು 6ಕೋಟಿ ಜನರಿಗೆ ಉದ್ಯೋಗ ಸೃಷ್ಟಿಸಲು ಕಾರ್ಯಕ್ರಮ ಹಾಕಿಕೊಂಡಿದೆ. ಇದೀಗ ವಿಜ್ಞಾನ-ತಂತ್ರಜ್ಞಾನದಲ್ಲಿ ಬೆಳವಣಿಗೆಯಾಗಿದ್ದರೂ ನಿರುದ್ಯೋಗಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಮುಂಬರುವ ವರ್ಷಗಳಲ್ಲಿ 1.88 ಕೋಟಿ ಯುವಕ-ಯುವತಿಯರಿಗೆ ಉದ್ಯೋಗ ತರಬೇತಿ ನೀಲು ಸರಕಾರ ಉದ್ದೇಶಿಸಿದೆ ಎಂದರು.
ಅಂಗವಿಕಲರಿಗೆ ಅವರ ಮನೆಬಾಗಿಲಿಗೆ ತರಬೇತಿ ನೀಡುವ ಕಾರ್ಯಕ್ರಮ, ಅಪ್ರೆಂಟಿಸ್ ತರಬೇತಿ ಸೇರಿದಂತೆ ಇನ್ನಿತರ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ನೀಡುವುದು ನಮ್ಮ ಸರಕಾರದ ಆದ್ಯತೆ ಎಂದರು.
ಸಂಸದ ಡಾ.ಎಂ.ವೀರಪ್ಪ ಮೊಯ್ಲಿ, ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್, ಪರಿಷತ್ ಸದಸ್ಯ ಟಿ.ಎ.ಶರವಣ, ಶಾಸಕಿ ಸೌಮ್ಯರೆಡ್ಡಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯಾಶಂಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಮೇಳದಲ್ಲಿ ಪಾಲ್ಗೊಂಡಿದ್ದರು.
‘ಮೇಳದಲ್ಲಿ 6 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದು, ಜನತಾ ದರ್ಶನದಲ್ಲಿ ಅರ್ಜಿ ಸಲ್ಲಿಸಿದವರಿಗೆ ಪ್ರತ್ಯೇಕ ತರಬೇತಿ ನೀಡಲಾಗುವುದಲ್ಲದೆ, ಸ್ಥಳದಲ್ಲೇ ನೋಂದಣಿ ವ್ಯವಸ್ಥೆ ಕಲ್ಪಿಸಲಾಗಿದೆ. ಆರು ಮೊಬೈಲ್ ಇಂದಿರಾ ಕ್ಯಾಂಟೀನ್, 20 ಶೌಚಾಲಯಗಳು, ಪ್ರಥಮ ಚಿಕಿತ್ಸಾ ಕೇಂದ್ರ ಹಾಗೂ ಸಹಾಯ ಕೇಂದ್ರ ಸ್ಥಾಪಿಸಲಾಗಿದೆ’
-ಆರ್.ವಿ.ದೇಶಪಾಂಡೆ, ಕೌಶಲ್ಯಾಭಿವೃದ್ಧಿ ಸಚಿವ







