ಪ್ರವಾಹದ ಸಂದರ್ಭ ನೂರಾರು ಜನರ ಪ್ರಾಣ ಉಳಿಸಿದ್ದ ಯುವಕ ಅಪಘಾತಕ್ಕೆ ಬಲಿ
ಮೀನುಗಾರನ ಸಾವಿಗೆ ಕಂಬನಿ ಮಿಡಿದ ಕೇರಳ
ತಿರುವನಂತಪುರ, ಅ.1: ಕೇರಳದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹದ ವೇಳೆ ಹಲವು ಮಂದಿಯ ಜೀವರಕ್ಷಣೆ ಮಾಡಿದ್ದ ಮೀನುಗಾರರೊಬ್ಬರು ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ.
ಅಪಘಾತದಿಂದ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಜಿನೇಶ್ (24) ಮೃತಪಟ್ಟಿದ್ದಾರೆ. ಕಳೆದ ವಾರ ಬೈಕ್ ನಿಂದ ಬಿದ್ದು ಲಾರಿಯಡಿ ಸಿಲುಕಿದ್ದ ಜಿನೇಶ್ ಗಂಭೀರ ಸ್ಥಿತಿಯಲ್ಲಿದ್ದರು.
ಕೇರಳ ಪ್ರವಾಹ ಸಂದರ್ಭದಲ್ಲಿ ಸಾವಿರಾರು ಮಂದಿಯ ಜೀವ ಉಳಿಸಿದ್ದ ಮೀನುಗಾರರ ಪೈಕಿ ಜಿನೇಶ್ ಕೂಡಾ ಒಬ್ಬರು. ಪ್ರವಾಹದ ಸುದ್ದಿ ತಿಳಿಯುತ್ತಿದ್ದಂತೆ ಸ್ವಯಂಪ್ರೇರಿತರಾಗಿ ಅಲಪ್ಪುಳದ ಚೆಂಗನೂರು ಪ್ರದೇಶದಲ್ಲಿ ರಕ್ಷಣಾ ಕಾರ್ಯಕ್ಕೆ ಧುಮುಕಿದ್ದರು. ತಮ್ಮ ಜೀವ ಪಣಕ್ಕಿಟ್ಟು ಸಾವಿರಾರು ಮಂದಿಯ ಜೀವ ಉಳಿಸಿದ ಮೀನುಗಾರರ ಶ್ರಮಕ್ಕೆ ದೇಶಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.
ವಿಕೋಪ ಪರಿಹಾರ ಪಡೆ ಮತ್ತು ಸೇನಾ ಯೋಧರು ಪರಿಹಾರ ಕಾರ್ಯಕ್ಕೆ ನಿಯೋಜಿತರಾಗುವ ಮುನ್ನವೇ ಇವರು ಸುಮಾರು 65 ಸಾವಿರ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸಾಗಿಸಿದ್ದರು. ರಾಜ್ಯ ಸರ್ಕಾರ ಕೂಡಾ ಇವರ ಸೇವಾ ಮನೋಭಾವವನ್ನು ಶ್ಲಾಘಿಸಿ, ಮೀನುಗಾರರ ಕಲ್ಯಾಣ ಕ್ರಮಗಳನ್ನು ಘೋಷಿಸಿತ್ತು.