ಫೇಸ್ಬುಕ್ನಲ್ಲಿ ವಂಚನೆ, ಹಣ ಸುಲಿಗೆ ಪ್ರಕರಣ: ಬೆಂಗಳೂರಿನಲ್ಲಿ ಆರೋಪಿಗಳ ಸೆರೆ
ಉರ್ವ ಪೊಲೀಸರ ಕಾರ್ಯಾಚರಣೆ

ಮಂಗಳೂರು, ಅ.3: ಫೇಸ್ಬುಕ್ನಲ್ಲಿ ಮಹಿಳೆಯ ಹೆಸರಿನಲ್ಲಿ ಪರಿಚಯ ಮಾಡಿಕೊಂಡು ಫೋಟೊ ಪಡೆದು ಬ್ಲಾಕ್ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉರ್ವ ಪೊಲೀಸರು ಬೆಂಗಳೂರಿನಲ್ಲಿ ಮಂಗಳವಾರ ಬಂಧಿಸಿದ್ದಾರೆ.
ಬೆಂಗಳೂರು ಯಶವಂತಪುರ ಬಳಿಯ ಸುಭೇದಾರ ಪಾಳ್ಯದ ತ್ರಿವೇಣಿ ಕ್ರಾಸ್ ನಿವಾಸಿ ಆದಿತ್ಯ ಯಾನೆ ಅಶ್ವಿನಿ (19) ಹಾಗೂ ಕನಕಪುರ ಬಸವೇಶ್ವರ ನಗರ ಹಳೇ ಸೈಂಟ್ ಮೈಕಲ್ ಶಾಲೆ ಸಮೀಪದ ನಿವಾಸಿ ಅರುಣ್ ಎಚ್.ಎಸ್. (27) ಎಂಬವರನ್ನು ಬಂಧಿಸಿ ಮಂಗಳೂರಿಗೆ ಕರೆ ತಂದಿದ್ದಾರೆ.
ಬೆಂಗಳೂರು ಮೂಲದ ಆರಾಧ್ಯ ಎಂಬ ಮಹಿಳೆಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಆರೋಪಿಗಳು ಮಂಗಳೂರಿನ ವ್ಯಕ್ತಿಯೊಬ್ಬರನ್ನು ಪರಿಚಯ ಮಾಡಿಕೊಂಡಿದ್ದರು. ಆರೋಪಿಗಳ ಬೇಡಿಕೆಯಂತೆ ದೂರುದಾರರು ತಮ್ಮ ಭಾವಚಿತ್ರವನ್ನು ಕಳುಹಿಸಿ ಕೊಟ್ಟಿದ್ದರು. ಈ ಭಾವಚಿತ್ರವನ್ನು ಪಡೆದುಕೊಂಡ ಆರೋಪಿಗಳು ಪೊಲೀಸರಿಗೆ ದೂರು ನೀಡಿ ಜೈಲಿಗೆ ಕಳುಹಿಸುವುದಾಗಿ ಬ್ಲ್ಯಾಕ್ ಮೇಲ್ ಮಾಡಿ 65 ಸಾವಿರ ರೂ.ನ್ನು ಬೆಂಗಳೂರಿನ ಯಶವಂತಪುರದಲ್ಲಿ ಪಡೆದುಕೊಂಡಿದ್ದರು.
ಆ ಬಳಿಕ ಆಗಾಗ ಫೋನ್ ಮಾಡಿ ಹೆಚ್ಚಿನ ಹಣಕ್ಕಾಗಿ ಪೀಡಿಸುತ್ತಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುವ ಸಮಯ ಆರೋಪಿಗಳು ದೂರು ನೀಡಿದವರಿಗೆ ಹಿರಿಯ ಪೊಲೀಸ್ ಅಧಿಕಾರಿಗಳ ಹಾಗೂ ರಾಜಕಾರಣಿಗಳ ಹೆಸರಿನಲ್ಲಿ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದರು.
ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಉರ್ವ ಪೊಲೀಸರು ಬೆಂಗಳೂರಿನ ಕೊಲಂಬಿಯಾ ಆಸ್ಪತ್ರೆ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಮುಖ್ಯ ಆರೋಪಿ ಆರಾಧ್ಯ ಎಂಬ ಹೆಸರಿನಲ್ಲಿ ಪರಿಚಯ ಮಾಡಿಕೊಂಡಿದ್ದಾಕೆ ಪುರುಷ ವ್ಯಕ್ತಿ ಎಂಬುದು ದಸ್ತಗಿರಿ ಸಂದರ್ಭ ತಿಳಿದು ಬಂದಿದ್ದು, ಮಹಿಳೆಯ ವೇಷ ಧರಿಸಿ ದೂರುದಾರರನ್ನು ನಂಬಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್, ಡಿಸಿಪಿ ಉಮಾ ಪ್ರಶಾಂತ್, ಕೇಂದ್ರ ಉಪವಿಭಾಗದ ಎಸಿಪಿ ಉದಯ ನಾಯಕ್ ಮಾರ್ಗದರ್ಶನ ದಲ್ಲಿ ಉರ್ವ ಠಾಣೆ ಇನ್ಸ್ಪೆಕ್ಟರ್ ರವೀಶ್ ನಾಯಕ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.







