ಪ್ರೇಮ ವಿವಾಹವನ್ನು ಪ್ರೋತ್ಸಾಹಿಸಿದ್ದೇ ತಪ್ಪಾಯಿತು !
ಶ್ರೀರಂಗಪಟ್ಟಣದ 5 ಕುಟುಂಬಗಳಿಗೆ ಗ್ರಾಮಸ್ಥರಿಂದ ಸಾಮಾಜಿಕ ಬಹಿಷ್ಕಾರ

ಸಾಂದರ್ಭಿಕ ಚಿತ್ರ
ಮಂಡ್ಯ, ಅ.6: ಪ್ರೇಮ ವಿವಾಹ ಪ್ರೋತ್ಸಾಹಿಸಿದ ಕುಟುಂಬಗಳಿಗೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಶ್ರೀರಂಗಪಟ್ಟಣ ತಾಲೂಕು ನಗುವನಹಳ್ಳಿಯಲ್ಲಿ ನಡೆದಿದೆ.
ಪ್ರೀತಿಸಿ ಮುದುವೆಯಾದ ಅದೇ ಗ್ರಾಮದ ಮನೋಜ್ ಮತ್ತು ಸ್ಫೂರ್ತಿ ಕುಟುಂಬ ಸೇರಿದಂತೆ ಸಂಬಂಧಿಕರ 5 ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿದೆ ಎಂದು ವರದಿಯಾಗಿದೆ.
ಒಂದೇ ಸಮುದಾಯದ ಮನೋಜ್ ಮತ್ತು ಸ್ಪೂರ್ತಿ ಪರಸ್ಪರ ಪ್ರೀತಿಸುತ್ತಿದ್ದು, ಎರಡೂ ಕುಟುಂಬಗಳೂ ಒಪ್ಪಿ ಮದುವೆ ಮಾಡಿರುವುದು ಗ್ರಾಮದ ಮುಖಂಡರ ಕೆಂಗಣ್ಣಿಗೆ ಕಾರಣವಾಗಿದೆ. 30 ಸಾವಿರ ರೂ. ದಂಡ ವಿಧಿಸಿರುವುದಲ್ಲದೆ, ಆ ಕುಟುಂಬದವರು ಗ್ರಾಮದ ದೇವಸ್ಥಾನಗಳಿಗೆ ಹೋಗದಂತೆ, ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳದಂತೆ ಹಾಗೂ ಊರಿನ ಜನರೊಂದಿಗೆ ಸಂಪರ್ಕದಲ್ಲಿರದಂತೆ ನಿರ್ಬಂಧ ಹೇರಲಾಗಿದೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಯುವ ದಂಪತಿ ಮನೋಜ್ ಮತ್ತು ಸ್ಪೂರ್ತಿ ಶ್ರೀರಂಗಪಟ್ಟಣ ಪೊಲೀಸರಿಗೆ ದೂರು ನೀಡಿದ್ದು, ತಮ್ಮ ಕುಟುಂಬಗಳಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
Next Story





