ಗ್ರಾಮ ಪಂಚಾಯತ್ ನೌಕರರ ಖಾಯಂಗೆ ಒತ್ತಾಯ
ಬೆಂಗಳೂರು, ಅ.6: ಗ್ರಾಮ ಪಂಚಾಯತ್ ನೌಕರರನ್ನು ಖಾಯಂ ಮಾಡಬೇಕು, ಎಲ್ಲರಿಗೂ ಭವಿಷ್ಯನಿಧಿ, ನಿವೃತ್ತಿ ವೇತನ ಹಾಗೂ ವೈದ್ಯಕೀಯ ಸೇವೆಗಳನ್ನು ನೀಡಬೇಕು ಎಂದು ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ ಒತ್ತಾಯಿಸಿದೆ.
ಶನಿವಾರ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಗ್ರಾಮ ಪಂಚಾಯತ್ ನೌಕರರ ಸಂಘದ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ನೌಕರರ ಸಮಾವೇಶದಲ್ಲಿ ಸರಕಾರ ಎಲ್ಲ ನೌಕರರನ್ನು ಖಾಯಂ ಮಾಡುವ ತೀರ್ಮಾನ ಕೈಗೊಳ್ಳಬೇಕು ಎಂಬ ನಿರ್ಣಯವನ್ನು ಮಂಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನೌಕರರ ಸಂಘಟನೆಯ ರಾಜ್ಯ ಅಧ್ಯಕ್ಷ ಮಾರುತಿ ಮಾನ್ಪಡೆ, ಮಾಸಿಕ ವೇತನದ ನೌಕರರು 1994 ರಲ್ಲಿ ಮಂಜೂರಾದ ಐದು ಹುದ್ದೆಗಳಿಗೆ ಅನುಮೋದನೆ ನೀಡಿರುವುದು ಸ್ವಾಗತಾರ್ಹ. ಆದರೆ, ಹೊಸ ಹುದ್ದೆಗಳ ಸೃಷ್ಟಿ, ಉಳಿದ ಸಿಬ್ಬಂದಿಗಳಾದ ಕರ ವಸೂಲಿಗಾರ, ಗಣಕಯಂತ್ರ ಸಹಾಯಕರು, ನೀರಗಂಟಿ, ಸಿಪಾಯಿ, ಸ್ವಚ್ಛತಾಗಾರರಿಗೆ ಅನುಮೋದನೆ ನೀಡದೇ ಬಾಕಿ ಉಳಿಸಿಕೊಂಡಿರುವುದು ಸರಿಯಾದ ನಿರ್ಧಾರವಲ್ಲ ಎಂದರು.
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ನಿರ್ದೇಶನಾಲಯ ಗ್ರಾಮ ಪಂಚಾಯತ್ ನೌಕರರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿರುವುದು ಎದ್ದು ಕಾಣುತ್ತಿದೆ. ಪಂಚಾಯತ್ ರಾಜ್ ನಿರ್ದೇಶನಾಲಯವು ಸರಕಾರಿ ಕಚೇರಿಯಾಗಿ ಕೆಲಸ ಮಾಡದೆ ಪಟ್ಟಭದ್ರ ಹಿತಾಸಕ್ತಿಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಸರಕಾರ ನಿಗದಿಪಡಿಸಿದ ಕನಿಷ್ಠ ವೇತನ ಹಾಗೂ ತುಟ್ಟಿಭತ್ತೆ ಗ್ರಾಮ ಪಂಚಾಯತ್ಗಳಲ್ಲಿ ಕೊಡದೇ ಸತಾಯಿಸುತ್ತಿದ್ದಾರೆ. ವೇತನ ಕೊಡದೇ ದುಡಿಸಿಕೊಳ್ಳುವ ಅನಾಗರಿಕ ಪದ್ಧತಿ ಗ್ರಾಮ ಪಂಚಾಯತ್ಗಳಲ್ಲಿದೆ. ಹೀಗಾಗಿ, ಕೂಡಲೇ ಸರಕಾರ ಪಂಚಾಯತ್ ಆಡಳಿತ ವಿಭಾಗವನ್ನು ಸರಿ ದಾರಿಗೆ ತರಬೇಕಾಗಿದೆ ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯತ್ಗಳಲ್ಲಿ ಕಸ ಗುಡಿಸುವವರನ್ನು ಅನಾಗರಿಕರಂತೆ ದುಡಿಸಿಕೊಳ್ಳುತ್ತಿದ್ದಾರೆ. 2014, ಸೆ.10 ರಂದು ಸರಕಾರ ಹೊರಡಿಸಿರುವ ಆದೇಶ ಕಂಟಕ ಪ್ರಾಯವಾಗಿದ್ದು, ಭಡ್ತಿ, ಗ್ಯಾಚುಯಿಟಿ ನಿಂತು ಹೋಗಿದೆ. ನಿವೃತ್ತಿ ವೇತನ ನೀಡುವ ಆದೇಶ ಜಾರಿಯಾಗಿ 20 ತಿಂಗಳಿಗೂ ಅಧಿಕವಾಗಿದ್ದರೂ, ಇದುವರೆಗೂ ಅದನ್ನು ಅನುಷ್ಠಾನ ಮಾಡಿಲ್ಲ ಎಂದು ದೂರಿದರು.
ಸಂಘದ ಜಿಲ್ಲಾಧ್ಯಕ್ಷ ಗೋಪಾಲಕೃಷ್ಣ ಅರಳಿಹಳ್ಳಿ ಮಾತನಾಡಿ, ಸರಕಾರ ನಿಗದಿ ಪಡಿಸಿದ ಕನಿಷ್ಠ ವೇತನವನ್ನು ಸಮರ್ಪಕವಾಗಿ ಜಾರಿ ಮಾಡಬೇಕು. ಎಲ್ಲ ನೌಕರರಿಗೂ ಕಡ್ಡಾಯವಾಗಿ ಭವಿಷ್ಯ ನಿಧಿ ಅಡಿಯಲ್ಲಿ ಸೇರ್ಪಡೆ ಮಾಡಬೇಕು ಹಾಗೂ ವೈದ್ಯಕೀಯ ಸೇವೆಗಳು ಲಭಿಸುವಂತೆ ಮಾಡಬೇಕು ಎಂದು ಮನವಿ ಮಾಡಿದರು.
ಹಿಂದಿನ ಸರಕಾರ ಗ್ರಾಮ ಪಂಚಾಯತ್ಗಳ ಎಲ್ಲ ನೌಕರರನ್ನು ಖಾಯಂ ಮಾಡುವ ಸಲುವಾಗಿ ಅಪರ ಕಾರ್ಯದರ್ಶಿ ಎಂ.ಎಸ್.ಸ್ವಾಮಿ ಆಯೋಗ ರಚನೆ ಮಾಡಲಾಗಿತ್ತು. ಅಲ್ಲದೆ, ಸಮಿತಿ ಸಲ್ಲಿಸಿದ್ದ ವರದಿಯನ್ನು ಜಾರಿ ಮಾಡುವ ಭರವಸೆಯನ್ನೂ ನೀಡಲಾಗಿತ್ತು. ಆದರೆ, ಒಂದು ವರ್ಷ ಕಳೆದರೂ ವರದಿ ಬಗ್ಗೆ ಗಮನ ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಎಂ.ಎಸ್.ಅರ್ಚನಾ ಮಾತನಾಡಿ, ರಾಜ್ಯ ಸರಕಾರ ಎಲ್ಲರಿಗೂ ಕನಿಷ್ಠ ವೇತನ ನೀಡುವ ಭರವಸೆಯನ್ನು ನೀಡಿದೆ. ಇದು ಪಂಚಾಯತ್ ನೌಕರರ ಆರ್ಥಿಕ ಭದ್ರತೆಗೆ ಮುನ್ನುಡಿಯಾಗಿದೆ. ಪಂಚಾಯತ್ ರಾಜ್ ವ್ಯವಸ್ಥೆಯೊಳಗೆ ಪಂಚಾಯತ್ಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಅದರಿಂದಾಗಿ ಬೇಡಿಕೆಗಳನ್ನು ಪೂರೈಸಲು ನಿಧಾನವಾಗುತ್ತಿದೆ ಎಂದು ಹೇಳಿದರು.
ಗ್ರಾಮ ಪಂಚಾಯತ್ ನೌಕರರು ತಮ್ಮ ಕೆಲಸದಿಂದ ಪ್ರಾಮಾಣಿಕತೆ ಹಾಗೂ ನಿಷ್ಠೆಯನ್ನು ತೋರಬೇಕು. ಪ್ರಾಮಾಣಿಕ ಸೇವೆಯಿಂದ ಗ್ರಾಮ ಅಭಿವೃದ್ಧಿಯಾಗುತ್ತದೆ. ಗ್ರಾಮ ಉದ್ಧಾರವಾದರೆ ದೇಶ ಅಭಿವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಅಶ್ವಥನಾರಾಯಣ, ಸಂಘಟನಾ ಕಾರ್ಯದರ್ಶಿ ನರಸಿಂಹಮೂರ್ತಿ, ಗಣಪತಿ ಹೆಗಡೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಬೇಡಿಕೆಗಳು:
- ಸರಕಾರ ನಿಗದಿ ಪಡಿಸಿದ ವೇತನ ಹಾಗೂ ತುಟ್ಟಿಭತ್ತೆಯನ್ನು ಪ್ರತಿ ತಿಂಗಳು ನೀಡುವಂತಾಗಬೇಕು.
- ನಿವೃತ್ತಿ ವೇತನ ಹಾಗೂ ಗ್ರಾಚುಯಿಟಿಗಾಗಿ ಒಂದು ಟ್ರಸ್ಟ್ ರಚನೆ ಮಾಡಿ ನೌಕರರಿಗೆ ಸೌಲಭ್ಯ ಸಿಗುವಂತಾಗಬೇಕು.
- ಎಂ.ಎಸ್.ಸ್ವಾಮಿ ಹಾಗೂ ಐ.ಪಿ.ಡಿ. ಸಾಲಪ್ಪವರದಿ ಶಿಫಾರಸ್ಸಿನಂತೆ ಕಸ ಗುಡಿಸುವವರ ಹುದ್ದೆಗಳನ್ನು ಸೃಷ್ಟಿಸಿ ಈಗಿರುವ ಎಲ್ಲ ಸಿಬ್ಬಂದಿಗೆ ಅನುಮೋದನೆ ನೀಡಬೇಕು.







