ಮಧ್ಯಪ್ರದೇಶ: ರಾಹುಲ್ ಗಾಂಧಿ ರೋಡ್ ಶೋನಲ್ಲಿ ಬೆಂಕಿ ಅವಘಡ
ಭೋಪಾಲ, ಅ. 7: ಮಧ್ಯಪ್ರದೇಶದ ಜಬಲ್ಪುರದಲ್ಲಿ ಶನಿವಾರ ನಡೆದ ರ್ಯಾಲಿ ಸಂದರ್ಭ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ನವೆಂಬರ್ 28ರಂದು ವಿಧಾನ ಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದಲ್ಲಿ 8 ಕಿ. ಮೀ. ರೋಡ್ ಶೋ ಆಯೋಜಿಸಿದ್ದರು. ರ್ಯಾಲಿಯಲ್ಲಿ ಉತ್ಸಾಹಿತ ಬೆಂಬಲಿಗರು ರಾಹುಲ್ ಗಾಂಧಿ ಅವರಿಗೆ ಆರತಿ ಎತ್ತಲು ದೊಡ್ಡ ದೀಪ ತಂದಿದ್ದರು. ಅದು ಮೇಲಿದ್ದ ಗ್ಯಾಸ್ ಬಲೂನ್ಗೆ ತಗುಲಿ ಬೆಂಕಿ ಹತ್ತಿಕೊಂಡಿತು. ಬೆಂಕಿ ಕ್ಷಣದಲ್ಲಿ ನಂದಿ ಹೋಯಿತು. ಆದರೆ, ಅದು ಜನರಲ್ಲಿ ಆತಂಕ ಉಂಟು ಮಾಡಿತು. ಈ ದುರ್ಘಟನೆ ನಡೆದ ಕೆಲವು ಮೀಟರ್ ದೂರದಲ್ಲಿ ತೆರೆದ ಜೀಪ್ನಲ್ಲಿ ರಾಹುಲ್ ಗಾಂಧಿ, ಅವರ ಪಕ್ಷದ ಸಹೋದ್ಯೋಗಿಗಳಾದ ಕಮಲ್ನಾಥ್ ಹಾಗೂ ಜ್ಯೋತಿರಾದಿತ್ಯ ಸಿಂಧ್ಯ ಇದ್ದರು. ಆದರೆ, ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ರೋಡ್ಶೋನಲ್ಲಿ ಭದ್ರತಾ ಲೋಪ ಉಂಟಾಗಿದೆ ಎಂಬ ಆರೋಪವನ್ನು ಪೊಲೀಸ್ ಅಧೀಕ್ಷಕ ಅಮಿತ್ ಸಿಂಗ್ ನಿರಾಕರಿಸಿದ್ದಾರೆ.