ಮಹಿಳೆಯರು 2ರಿಂದ 4 ಲಕ್ಷ ರೂ. ಪಡೆದು ಪುರುಷರನ್ನು ಟಾರ್ಗೆಟ್ ಮಾಡುತ್ತಾರೆ ಎಂದ ಬಿಜೆಪಿ ಸಂಸದ!
#ಮೀಟೂ ಅಭಿಯಾನವನ್ನು ಟೀಕಿಸಿದ ಉದಿತ್ ರಾಜ್
ಹೊಸದಿಲ್ಲಿ, ಅ.9: ದೇಶದಲ್ಲಿ #ಮೀಟೂ ಆಂದೋಲನ ಆರಂಭವಾಗಿರುವುದು ಒಂದು ತಪ್ಪಾದ ಪದ್ಧತಿಯಾಗಿದ್ದು, ಮಹಿಳೆಯರು “ಅಭ್ಯಾಸಬಲದಂತೆ'' ಎರಡರಿಂದ ನಾಲ್ಕು ಲಕ್ಷ ಹಣ ಪಡೆದು ಪುರುಷರ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿ ಸಂಸದ ಉದಿತ್ ರಾಜ್ ಹೇಳಿಕೆ ನೀಡಿದ್ದು ವಿವಾದ ಸೃಷ್ಟಿಸಿದ್ದಾರೆ.
ನಟಿ ತನುಶ್ರೀ ದತ್ತಾಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ನಟ ನಾನಾ ಪಾಟೇಕರ್ ಅವರ ಬೆಂಬಲಕ್ಕೆ ನಿಂತು ಹಲವಾರು ಟ್ವೀಟ್ ಮಾಡಿದ ಉದಿತ್ ರಾಜ್ “ಈ #ಮೀಟೂ ಅಭಿಯಾನ ಅಗತ್ಯ. ಆದರೆ ಒಬ್ಬ ವ್ಯಕ್ತಿಯ ವಿರುದ್ಧ 10 ವರ್ಷಗಳ ನಂತರ ಲೈಂಗಿಕ ಕಿರುಕುಳ ಆರೋಪ ಹೊರಿಸುವುದರಲ್ಲಿ ಅರ್ಥವೇನಿದೆ ?, ಹತ್ತು ವರ್ಷಗಳಾದ ಮೇಲೆ ಸಾಕ್ಷ್ಯಗಳನ್ನು ಹೇಗೆ ದೃಢೀಕರಿಸುವುದು ?, ಇದು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನೇ ಹಾಳು ಮಾಡುತ್ತದೆ ಎಂದು ಗಮನದಲ್ಲಿರಿಸಬೇಕು. ಇದು ತಪ್ಪಾದ ಪದ್ಧತಿಯ ಆರಂಭ'' ಎಂದು ವಾಯುವ್ಯ ದಿಲ್ಲಿಯ ಸಂಸದ ಉದಿತ್ ರಾಜ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ನಂತರ ಸುದ್ದಿಗಾರರೊಡನೆ ಮಾತನಾಡಿದ ಅವರು ``ಅಭ್ಯಾಸಬಲದಂತೆ ಮಹಿಳೆಯರು ಎರಡರಿಂದ ನಾಲ್ಕು ಲಕ್ಷ ಪಡೆದು ಒಬ್ಬರ ಮೇಲೆ ಆರೋಪ ಹೊರಿಸಿ ನಂತರ ಇನ್ನೊಬ್ಬ ವ್ಯಕ್ತಿಯನ್ನು ಆಯ್ದುಕೊಳ್ಳುತ್ತಾರೆ. ಮಹಿಳೆಯರೂ ಪರ್ಫೆಕ್ಟ್ ಆಗಿದ್ದಾರೇನು ?'' ಎಂದು ಅವರು ಪ್ರಶ್ನಿಸಿದರು.