ಬೆಂಗಳೂರು: ಜೂಜಾಡುತ್ತಿದ್ದ 8 ಜನರ ಬಂಧನ; ನಗದು ಜಪ್ತಿ
ಬೆಂಗಳೂರು, ಅ.9: ಹಣ ಪಣವಾಗಿ ಕಟ್ಟಿಕೊಂಡು ಜೂಜಾಟದ ಆಡುತ್ತಿದ್ದ ಆರೋಪದ ಮೇಲೆ 8 ಜನರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 82 ಸಾವಿರ ರೂ. ನಗದು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪಾಪರೆಡ್ಡಿ ಪಾಳ್ಯದ ನಿವಾಸಿ ರಾಜೇಶ್ (31), ಅವೆನ್ಯೂ ರಸ್ತೆಯ ಬಿ.ಟಿ. ಸ್ಟ್ರೀಟ್ 2ನೆ ಮಹಡಿ ಅಂಚೆ ಪೇಟೆ ನಿವಾಸಿ ಕಲ್ಪೇಶ್ (25), ಆಕಾಶ್ಕುಂಜ್ ಬಿಲ್ದಿಂಗ್ ಒಂದನೆ ಮಹಡಿ, ಜೋದ್ಪುರ ಸ್ವೀಟ್, ಆರ್.ಟಿ.ಬೀದಿ ನಿವಾಸಿ ಗೌತಮ್ (25), ವಾಲ್ಮೀಕಿನಗರದ ದೀಪಕ್ (25) ಹಾಗೂ ಶೇಷಾದ್ರಿಪುರಂ ಶಿರೂರು ಪಾರ್ಕ್ ರಸ್ತೆ ನಿವಾಸಿ ಹರೀಶ್ (38) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಆಟ ಆಡಿಸುತ್ತಿದ್ದ ಆರೋಪದಲ್ಲಿ ಸಂಜಯನಗರ ಕೆಇಬಿ ಲೇಔಟ್ ಮೇಘನಾ ಮೆಡೋಸ್ ನಿವಾಸಿ ರಮೇಶ್ (42), ಗಂಗಾನಗರ 4ನೆ ಕ್ರಾಸ್ ನಿವಾಸಿಗಳಾದ ಪ್ರಸಾದ್ (32) ಹಾಗೂ ಸುನೀಲ್ ಕುಮಾರ್ (29) ಬಂಧಿತರಾಗಿದ್ದಾರೆ ಎಂದು ಸಿಸಿಬಿ ತಿಳಿಸಿದೆ.
ಬಂಧಿತರು ನಗರದ ಸ್ವಿಸ್ ಕಾಂಪ್ಲೆಕ್ಸ್ನ ನಾಯಕ ಅಸೋಸಿಯೇಟ್ಸ್ನಲ್ಲಿ ಅದೃಷ್ಟದ ಆಟ ಆಡುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಇವರಿಂದ ನಗದು ಜಪ್ತಿ ಮಾಡಿ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.