ಫಲಾನುಭವಿಗಳು ಮಧ್ಯವರ್ತಿಗಳ ಮಾತಿಗೆ ಮೋಸ ಹೋಗಬೇಡಿ: ಶಾಸಕ ನರೇಂದ್ರ
ಹನೂರು,ಅ.10: ಗಂಗಾ ಕಲ್ಯಾಣ ಯೋಜನೆಯ ಅನುಕೂಲವನ್ನು ಪಡೆಯುವ ಅರ್ಹ ಫಲಾನುಭವಿಗಳು ಮಧ್ಯವರ್ತಿಗಳ ಮಾತಿಗೆ ಮೋಸ ಹೋಗಬೇಡಿ ಎಂದು ಶಾಸಕ ಆರ್.ನರೇಂದ್ರರಾಜುಗೌಡ ತಿಳಿಸಿದರು.
ಹನೂರು ಪಟ್ಟಣದ ಲೋಕೋಪಯೋಗಿ ವಸತಿ ಗೃಹದಲ್ಲಿ ಚಾಮರಾಜನಗರ ಜಿಲ್ಲಾ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಏರ್ಪಡಿಸಲಾಗಿದ್ದ ಗಂಗ ಕಲ್ಯಾಣ ಯೋಜನೆಯ 32 ಫಲಾನುಭವಿಗಳಿಗೆ ಪಂಪು ಮೋಟಾರು ಹಾಗೂ ಇನ್ನಿತರೆ ಸಾಮಾಗ್ರಿಗಳನ್ನು ವಿತರಿಸಿ ನಂತರ ಮಾತನಾಡಿದರು.
ಶಾಸಕರ ನೇತೃತ್ವದಲ್ಲಿ ನಡೆಯುವ ಕಮಿಟಿಯಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಕಮಿಟಿಯಲ್ಲಿ ಆಯ್ಕೆಯಾದ ಫಲಾನುಭವಿಗಳನ್ನು ತೆಗೆದು ಹಾಕುವ ಅಧಿಕಾರ ಯಾವ ಅಧಿಕಾರಿಗೂ ಇಲ್ಲ. ಹಾಗಾಗಿ ಅಧಿಕಾರಿಗಳ ಹೆಸರಿನಲ್ಲಿ ಮೋಸ ಮಾಡಲು ಯತ್ನಿಸುವ ಮಧ್ಯವರ್ತಿಗಳಿಂದ ದೂರವಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ಜಿಲ್ಲಾ ವ್ಯವಸ್ಥಾಪಕ ಆರ್.ಕೆ.ಮಹಾದೇವಸ್ವಾಮಿ ಪ್ರಸ್ತಾವಿಕ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಮೈಸೂರು ವಿಭಾಗದ ಅಧಿಕಾರಿ ರಾಜೇಶ್ಗೌಡ, ಜಿ.ಪಂ.ಅಧ್ಯಕ್ಷೆ ಶಿವಮ್ಮಕೃಷ್ಣ, ಪ.ಪಂ.ಉಪಾಧ್ಯಕ್ಷ ಬಸವರಾಜು ಹಾಗೂ ಇನ್ನಿತರರು ಇದ್ದರು.