ಅಡ್ಯಾರ್ ಗ್ರಾಪಂ ನೂತನ ಕಟ್ಟಡ ಉದ್ಘಾಟನೆ
ಮಂಗಳೂರು, ಅ.12: ಗ್ರಾಮ ಪಂಚಾಯತ್ ವ್ಯವಸ್ಥೆಯು ಪ್ರಭಾವಿ ಆಡಳಿತ ಸ್ತರವಾಗಿದ್ದು, ಸರಕಾರದ ಸವಲತ್ತು ಜನರ ಮನೆಬಾಗಿಲಿಗೆ ತಲುಪಿಸುವ ಮಹತ್ತರವಾದ ಕೆಲಸವನ್ನು ಪಂಚಾಯತ್ಗಳು ಮಾಡುತ್ತದೆ. ಈ ವಿಷಯದಲ್ಲಿ ಯಾರೂ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅಡ್ಯಾರ್ ಗ್ರಾಪಂ ರಾಜೀವ್ ಗಾಂಧಿ ಸೇವಾ ಕೇಂದ್ರ ಹಾಗೂ ಸಭಾಂಗಣ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸತ್ ಕಡತದಲ್ಲಿ ವಿರೋಧ ಪಕ್ಷ ಎನ್ನುವ ಉಲ್ಲೇಖವೇ ಇಲ್ಲ. ಆಡಳಿತಗಾರರು ಒಳ್ಳೆಯ ಕೆಲಸ ಮಾಡಿದಾಗ ಕೈಜೋಡಿಸುವುದು, ಅಡ್ಡದಾರಿ ಹೋದಾಗ ತಪ್ಪುಗಳನ್ನು ಎತ್ತಿ ಹಿಡಿದು ಸರಿಪಡಿಸುವುದರಲ್ಲಿ ವಿಪಕ್ಷ ಮುಖ್ಯ ಪಾತ್ರ ವಹಿಸಬೇಕು. ಅಡ್ಯಾರ್ ಗ್ರಾಪಂನಲ್ಲಿ ಎಲ್ಲ ಸದಸ್ಯರು ಜೊತೆಯಾಗಿ ಕಾರ್ಯ ನಿರ್ವಹಿಸಿದ್ದರಿಂದ ಉತ್ತಮ ಕಟ್ಟಡ ನಿರ್ಮಾಣಗೊಳ್ಳುವಂತಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.
ಶಾಸಕ ಡಾ.ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ದ.ಕ.ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಪಂ ಸದಸ್ಯ ಅಬ್ದುಲ್ ಸಮದ್, ತಾಪಂ ಇಒ ಸುಧಾಕರ್, ಗ್ರಾಪಂ ಉಪಾಧ್ಯಕ್ಷೆ ಆಶಾ ಭಾಗವಹಿಸಿದ್ದರು.
ಅಡ್ಯಾರ್ ಗ್ರಾಪಂ ಅಧ್ಯಕ್ಷೆ ಪ್ರತಿಭಾ ಸ್ವಾಗತಿಸಿದರು. ಪಿಡಿಒ ಕೃಷ್ಣ ನಾಯಕ್ ವಂದಿಸಿದರು.