ಕುದ್ರೋಳಿ ಕಸಾಯಿಖಾನೆ ವಿವಾದ: ಆಡು, ಕುರಿ ವ್ಯಾಪಾರಸ್ಥರ ಸಂಘ ಖಂಡನೆ
ಮಂಗಳೂರು, ಅ.13: ಸ್ಮಾರ್ಟ್ ಸಿಟಿ ಯೋಜನೆ ಹಾಗೂ ಸ್ವಚ್ಛ ಭಾರತ ಅಭಿಯಾನದಡಿ ಕುದ್ರೋಳಿ ಕಸಾಯಿಖಾನೆಯ ಅಭಿವೃದ್ಧಿಗೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ನೀಡಿದ ಸಲಹೆಯನ್ನು ಸ್ವಾಗತಿಸಿರುವ ಮಂಗಳೂರಿನ ಆಡು ಮತ್ತು ಕುರಿ ವ್ಯಾಪಾರಸ್ಥರ ಸಂಘವು ಬಿಜೆಪಿ ಮತ್ತು ಸಂಘಪರಿವಾರವು ಇದನ್ನು ರಾಜಕೀಯಕ್ಕೆ ಬಳಸುವ ಕೃತ್ಯವನ್ನು ಖಂಡಿಸಿದೆ.
ಸುಸಜ್ಜಿತ ಮತ್ತು ವೈಜ್ಞಾನಿಕ ನೆಲೆಯಲ್ಲಿ ಉತ್ತಮವಾದ ಕಸಾಯಿಖಾನೆಯನ್ನು ಅಭಿವೃದ್ಧಿಪಡಿಸುವುದು ಸ್ವಚ್ಛಭಾರತದ ಒಂದು ಭಾಗವಾಗಿದೆ. ಇದಕ್ಕೆ ಎಲ್ಲಾ ವರ್ಗದವರೂ ಸಹಕರಿಸಬೇಕಿದೆ. ಪ್ರಧಾನಿ ಮೋದಿಯ ಕನಸಿಗೆ ಸಹಕರಿಸಬೇಕಾದ ಬಿಜೆಪಿಗರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ವಿಪರ್ಯಾಸವಾಗಿದೆ. ಕಸಾಯಿಖಾನೆಯು ಒಂದು ಸಮುದಾಯಕ್ಕೆ ಸೀಮಿತವಾದುದಲ್ಲ. ಅದು ಸರಕಾರದ ಭಾಗವಾಗಿದೆ. ಅದನ್ನು ಬಿಜೆಪಿ ಮತ್ತು ಸಂಘಪರಿವಾರವು ಅರ್ಥ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿರುವ ಸಂಘವು, ಸಚಿವ ಯು.ಟಿ.ಖಾದರ್ ಯಾವ ವಿರೋಧವನ್ನೂ ಲೆಕ್ಕಿಸದೆ ಯೋಜನೆಯ ಅನುಷ್ಠಾನಕ್ಕೆ ಸೂಕ್ತ ಕ್ರಮ ಜರಗಿಸಬೇಕು ಎಂದು ಅಲ್ ಹರಮೈನ್ ಆಡು ಮತ್ತು ಕುರಿ ವ್ಯಾಪಾರಸ್ಥರ ಸಂಘದ ಮುಖಂಡರಾದ ಮೊಯ್ದಿನ್ ಮೋನು, ನೂರ್ ಮುಹಮ್ಮದ್, ಅಬ್ದುಲ್ ಹಮೀದ್, ಆಸೀಫ್ ಮಟನ್ ಒತ್ತಾಯಿಸಿದ್ದಾರೆ.