ನ.15ರೊಳಗೆ ಸಚಿವ ಸಂಪುಟ ವಿಸ್ತರಣೆ: ಈಶ್ವರ್ ಖಂಡ್ರೆ

ಚಿಕ್ಕಮಗಳೂರು, ಅ.14: ನವಂಬರ್ 5ರಿಂದ 15ರೊಳಗೆ ಸಚಿವ ಸಂಪುಟ ವಿಸ್ತರಣೆ ಪೂರ್ಣಗೊಳ್ಳಲಿದೆ ಎಂದು ಕಾಂಗ್ರೆಸ್ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು.
ರವಿವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನ.5 ರಿಂದ 15 ರೊಳಗೆ ಸಚಿವ ಸಂಪುಟ ವಿಸ್ತರಣೆ ಜತೆಗೆ ಎಲ್ಲ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಖಚಿತಪಡಿಸಿದ ಅವರು, ಶಿವಮೊಗ್ಗ ಮತ್ತು ಮಂಡ್ಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕುವುದಿಲ್ಲ. ಅಲ್ಲಿ ಮೈತ್ರಿ ಧರ್ಮ ಪಾಲನೆ ಮಾಡುತ್ತೇವೆ. ಬಳ್ಳಾರಿಯಲ್ಲಿ ಅ.15ರಂದು ನಮ್ಮ ಅಭ್ಯರ್ಥಿ ಹೆಸರು ಘೋಷಣೆಯಾಗಲಿದೆ ಎಂದು ಖಂಡ್ರೆ ಹೇಳಿದರು.
ಜೆಡಿಎಸ್ಗೆ ಸ್ಥಾನ ಬಿಟ್ಟುಕೊಂಡಿದ್ದೇವೆ ಎಂದಾಕ್ಷಣ ಕಾಂಗ್ರೆಸ್ ಸಮರ್ಥವಾಗಿಲ್ಲ ಎಂದು ತಿಳಿಯಬೇಕಿಲ್ಲ. ನಮ್ಮ ಪಕ್ಷ ಬೇರು ಮಟ್ಟದಲ್ಲಿ ಸುಭದ್ರವಾಗಿದೆ. ಮೈತ್ರಿ ಸರಕಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಆವಶ್ಯಕ, ಅನಿವಾರ್ಯ ಕೂಡ. ಸಮಾಜ ಹಾಗೂ ಪಕ್ಷದ ಹಿತದೃಷ್ಟಿಯಿಂದ ಮೈತ್ರಿ ಮಾಡಿಕೊಂಡಿದ್ದೇವೆ. ಯಾವುದೇ ಸಮಸ್ಯೆ ಇಲ್ಲ. ಬಳ್ಳಾರಿಯಲ್ಲಿ ಇಬ್ಬರು ಅಭ್ಯರ್ಥಿಗಳ ಪೈಕಿ ನಾಳೆ ಒಬ್ಬರ ಹೆಸರು ಹೈಕಮಾಂಡ್ನಿಂದ ಅಂತಿಮ ಘೋಷಣೆಯಾಗಲಿದೆ ಎಂದರು.
ಇಂದಿರಾ ಕ್ಯಾಂಟೀನ್ ವಿಳಂಬ: ಇಂದಿರಾ ಕ್ಯಾಂಟಿನ್ ತೆರೆಯಲು ವಿಳಂಬವಾಗಿರುವುದು ನನ್ನ ಗಮನದಲ್ಲಿದೆ. ರಾಜ್ಯದ 40 ಕಡೆ ಇನ್ನೂ ತೆರೆಯಬೇಕಿದೆ. ಈ ಬಗ್ಗೆ ಇತ್ತೀಚೆಗೆ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆಯಾಗಿದ್ದು, ಸದ್ಯದಲ್ಲೇ ಎಲ್ಲ ಇಂದಿರಾ ಕ್ಯಾಂಟೀನ್ಗಳು ಕಾಯಾರಂಭ ಮಾಡಲಿವೆ ಎಂದರು.







