ಮಾರ್ಬಲ್ ಬಿದ್ದು ಕಾರ್ಮಿಕನಿಗೆ ಗಂಭೀರ ಗಾಯ
ಮಂಗಳೂರು, ಅ.16: ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣಾ ಕಾಮಗಾರಿಗೆ ತಂದಿದ್ದ ಮಾರ್ಬಲ್ಗಳನ್ನು ಲಾರಿಯಿಂದ ಕೆಳಗಿಳಿಸುತ್ತಿದ್ದ ವೇಳೆ ಕಾರ್ಮಿಕನ ಮೇಲೆಯೇ ಬಿದ್ದ ಘಟನೆ ವರದಿಯಾಗಿದೆ. ಇದರಿಂದ ಕಾರ್ಮಿಕನೋರ್ವನ ಕಾಲಿಗೆ ಗಂಭೀರ ಗಾಯಗಳಾಗಿವೆ.
ಮಾರ್ಬಲ್ನ ದೊಡ್ಡ ತುಂಡೊಂದು ಕಾಲಿನ ಮೇಲೆ ಬಿದ್ದ ಪರಿಣಾಮ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿತ್ತು. ಇದರಿಂದ ಒದ್ದಾಡುತ್ತಿದ್ದ ಕಾರ್ಮಿಕನನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗದೆ ಸ್ಥಳದಲ್ಲಿ ಸೇರಿದ್ದ ಕೆಲವರು ಮೊಬೈಲ್ ಫೋನ್ ಮೂಲಕ ಚಿತ್ರೀಕರಿಸುತ್ತಿದ್ದರೆನ್ನಲಾಗಿದೆ. ಅಲ್ಲದೆ ವಿಮಾನ ನಿಲ್ದಾಣದ ಆ್ಯಂಬುಲೆನ್ಸ್ ಚಾಲಕ ಕೂಡಾ ನೆರವಿಗೆ ಬಂದಿಲ್ಲ ಎಂದು ಆರೋಪಿಸಲಾಗಿದೆ. ಈ ವೇಳೆ ಸ್ಥಳಕ್ಕಾಗಮಿಸಿದ ಕ್ಯಾಬ್ ಚಾಲಕ ಮಹೇಶ ಎಂಬವರು ಕಾರ್ಮಿಕನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದರು.
ಮಂಗಳೂರಿನಿಂದ ವಿಮಾನ ಪ್ರಯಾಣಿಕರೊಬ್ಬರನ್ನು ಕರೆತರಲು ಹೋಗಿದ್ದ ಮಹೇಶ್ ಗಂಭೀರ ಗಾಯಗೊಂಡು ಒದ್ದಾಡುತ್ತಿದ್ದ ಕಾರ್ಮಿಕನನ್ನು ಕೂಡಲೇ ತನ್ನ ಕಾರಲ್ಲಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಿದರು.
ಮಾನವೀಯತೆ ಮೆರೆದ ಆನ್ ಲೈನ್ ಕ್ಯಾಬ್ ಚಾಲಕ ಮಹೇಶರಿಗೆ ದ.ಕ. ಜಿಲ್ಲಾ ಆನ್ ಲೈನ್ ಚಾಲಕ-ಮಾಲಕರ ಸಂಘ ಅಭಿನಂದಿಸಿದೆ.