ವಿಜಯ ದಶಮಿ ಮೆರವಣಿಗೆಗೆ ದಿನಗಣನೆ: ಅರಮನೆ ಆವರಣದಲ್ಲಿ ಅಂತಿಮ ಹಂತದ ತಾಲೀಮು
ಮೈಸೂರು,ಅ.16: ವಿಶ್ವವಿಖ್ಯಾತ ದಸರಾ ಮಹೋತ್ಸವ 2018ರ ವಿಜಯ ದಶಮಿ ಮೆರವಣಿಗೆಗೆ ದಿನಗಣನೆ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಅಂತಿಮ ಹಂತದ ತಾಲೀಮು ನಡೆಯುತ್ತಿದೆ.
ಪೊಲೀಸರು ಮತ್ತು ಆನೆಗಳಿಗೆ ಮಂಗಳವಾರ ಅಂತಿಮ ಸುತ್ತಿನ ತಾಲೀಮು ನಡೆಸಲಾಗಿದ್ದು, ಜಂಬೂ ಸವಾರಿ ಮೆರವಣಿಗೆಯನ್ನು ಶಿಸ್ತುಬದ್ಧವಾಗಿ ನಡೆಸಲು ಪೊಲೀಸರಿಗೆ ಪರೇಡ್ ಅಭ್ಯಾಸ ಮಾಡಿಸಲಾಗಿದೆ. ಪೊಲಿಸರು ಶಸ್ತ್ರಾಸ್ತ್ರ ಹಿಡಿದು ಪಥ ಸಂಚಲನ ನಡೆಸಿದರು. ಕೆಎಸ್ಆರ್ಪಿ, ಸಿಎಆರ್, ಡಿಎಆರ್, ಅಶ್ವಾರೋಹಿ ದಳ, ಹೋಂ ಗಾರ್ಡ್ ಸೇರಿದಂತೆ ಹಲವು ಪೊಲೀಸ್ ತುಕಡಿಗಳು ಪಥ ಸಂಚಲನ ತಾಲೀಮಿನಲ್ಲಿ ಭಾಗಿಯಾಗಿದ್ದವು.
ಅಂಬಾರಿ ಆನೆ ಅರ್ಜುನ ಸೇರಿದಂತೆ ಮೊದಲ ತಂಡದ ಆನೆಗಳಿಗೂ ತಾಲೀಮು ನಡೆಸಲಾಗಿದೆ. ಅಂಬಾರಿ ಕಟ್ಟುವ ಜಾಗದಿಂದ ಗಂಭೀರ ನಡಿಗೆ ಆರಂಭಿಸಿದ ಅರ್ಜುನನಿಗೆ ಪೊಲೀಸ್ ಹಿರಿಯ ಅಧಿಕಾರಿಗಳು ಪುಷ್ಪಾರ್ಚನೆ ನೆರವೇರಿಸಿದರು. ಅಂಬಾರಿ ಹೊತ್ತ ಅರ್ಜುನ ಮತ್ತು ತಂಡಕ್ಕೆ ಪೊಲೀಸರು ಗಾಡ್ ಆಫ್ ಹಾನರ್ ಸಲ್ಲಿಸಿದರು. ನಂತರ ಗಣ್ಯರು ಅಂಬಾರಿಗೆ ಪುಷ್ಪಾರ್ಚನೆಗೈದರು. ಈ ಸಂದರ್ಭದಲ್ಲಿ ಅರಮನೆಯ ಸಿಬ್ಬಂದಿಗಳು ಭಾಗವಹಿಸಿದ್ದರು.