ಇನ್ನೊಂದು ಕೊಲೆ ಪ್ರಕರಣದಲ್ಲಿ ಸ್ವಘೋಷಿತ ದೇವಮಾನವ ರಾಂಪಾಲ್ ಗೆ ಜೀವಾವಧಿ ಶಿಕ್ಷೆ
ಹೊಸದಿಲ್ಲಿ, ಅ.17: ಸ್ವಘೋಷಿತ ದೇವಮಾನವ ರಾಂಪಾಲ್ ಹಾಗೂ ಆತನ 13 ಮಂದಿ ಅನುಯಾಯಿಗಳಿಗೆ ಹಿಸಾರ್ ನ ನ್ಯಾಯಾಲಯ ಇನ್ನೊಂದು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ. ಅಪರಾಧಿಗಳಿಗೆ ನ್ಯಾಯಾಲಯ ದಂಡವನ್ನೂ ವಿಧಿಸಿದೆ. ಇನ್ನೊಂದು ಕೊಲೆ ಪ್ರಕರಣದಲ್ಲಿ ರಾಂಪಾಲ್ ಗೆ ಜೀವಾವಧಿ ಶಿಕ್ಷೆಯನ್ನು ಘೋಷಿಸಿದ ಮರುದಿನವೇ ಈ ತೀರ್ಪು ಬಂದಿದೆ
ಗುರುವಾರ ಶಿಕ್ಷೆ ಘೋಷಿಸಲ್ಪಟ್ಟ ಪ್ರಕರಣಗಳೆರಡೂ 2014ರಲ್ಲಿ ವರದಿಯಾಗಿದ್ದವು. ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಆಜ್ಞೆಯಂತೆ ಪೊಲೀಸರು ಹಿಸಾರ್ನ ಬರ್ವಾಲ ಪಟ್ಟಣದಲ್ಲಿರುವ ರಾಂಪಾಲ್ ನ ಸತ್ಲೋಕ್ ಆಶ್ರಮಕ್ಕೆ ನವೆಂಬರ್ 18, 2014ರಂದು ದಾಳಿ ನಡೆಸಿದಾಗ ಅಲ್ಲಿ ನಾಲ್ಕು ಮಹಿಳೆಯರು ಮತ್ತು ಮಗುವೊಂದು ಸತ್ತಿರುವುದು ಕಂಡು ಬಂದಿತ್ತು. ಎರಡನೇ ಪ್ರಕರಣ ಅದೇ ವರ್ಷದ ನವೆಂಬರ್ 19ರಂದು ನಡೆದಿದ್ದು ಆ ದಿನ ಮಹಿಳೆಯೊಬ್ಬಳು ಆಶ್ರಮದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಈ ಸಂಬಂಧ ಅಕ್ರಮ ದಿಗ್ಬಂಧನ ಮತ್ತು ಕೊಲೆ ಪ್ರಕರಣ ದಾಖಲಾಗಿತ್ತು. ರಾಂಪಾಲ್ ನನ್ನು ಅದೇ ದಿನ ಬಂಧಿಸಲಾಗಿತ್ತು. ಆದರೆ ಪೊಲೀಸರು ಆತನನ್ನು ಬಂಧಿಸಲು ಅಲ್ಲಿಗೆ ಹೋದಾಗ ರಾಂಪಾಲ್ ಅನುಯಾಯಿಗಳು ಹಾಗೂ ಪೊಲೀಸರ ನಡುವೆ ದೊಡ್ಡ ಸಂಘರ್ಷವೇ ನಡೆದಿತ್ತು.
ನ್ಯಾಯಾಲಯ ಮಂಗಳವಾರ ತೀರ್ಪು ನೀಡುವ ಸಂದರ್ಭ ರಾಂಪಾಲ್ ನ ಅನುಯಾಯಿಗಳು ಅಲ್ಲಿಗೆ ಬಂದು ಸಮಸ್ಯೆ ಸೃಷ್ಟಿಸದಂತೆ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.