ಹನೂರು: ಶಿಕ್ಷಕನ ವರ್ಗಾವಣೆ ಖಂಡಿಸಿ ಪ್ರತಿಭಟನೆ
ಹನೂರು,ಅ.22: ತಾಲೂಕಿನ ಮಾರಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಎಲ್.ದೊರೈಸ್ವಾಮಿಯವರನ್ನು ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಎಸ್ಡಿಎಂಸಿ ಸಮಿತಿ ಮತ್ತು ಗ್ರಾಮಸ್ಥರು ಸೇರಿ ಶಾಲಾ ಮುಂಭಾಗ ಪ್ರತಿಭಟಿಸಿದರು.
ನಂತರ ಮಾದ್ಯಮದ ಜೊತೆ ಎಸ್ಡಿಎಂಸಿ ಅದ್ಯಕ್ಷ ರಾಜನಾಯ್ಕ ಮಾತನಾಡಿ, ಮುಳುಗುತ್ತಿದ್ದ ಮಾರಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಜೀವ ತುಂಬಿದ ಹಾಗೂ ತಾಲೂಕಿನಲ್ಲಿ ಮಾದರಿ ಶಾಲೆಯನ್ನಾಗಿ ಮಾಡಿದ ಶಿಕ್ಷಕ ದೊರೈಸ್ವಾಮಿಯವರನ್ನು ಹೆಚ್ಚುವರಿ ಶಿಕ್ಷಕರ ಪಟ್ಟಿಯಿಂದ ಕೈ ಬಿಡುವಂತೆ ಈ ಶಾಲೆಯ ಎಸ್ಡಿಎಂಸಿ ಸಮಿತಿ ಸದಸ್ಯರು ಮತ್ತು ಮಾರಳ್ಳಿ ಗ್ರಾಮಸ್ಥರು ಶಿಕ್ಷಣ ಇಲಾಖೆಯ ಗಮನಕ್ಕೆ ತರಲಾಗಿತ್ತು. ಅಲ್ಲದೇ, ಲಿಖಿತವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ನೀಡಿದರೂ, ಮನವಿಗೆ ಕಿವಿಗೊಡದೇ ವರ್ಗಾವಣೆಗೆ ಮಾಡಿರುವುದನ್ನು ಖಂಡಿಸುತ್ತೇವೆ ಎಂದರು
ಇದೇ ಸಂದರ್ಭದಲ್ಲಿ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅನಂತರ ಶಿಕ್ಷಕ ದೊರೈಸ್ವಾಮಿ ಇದೇ ಶಾಲೆಯ ಕರ್ತವ್ಯಕ್ಕೆ ಮರು ನಿಯೋಜನೆ ಮಾಡುವ ತನಕ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪಟ್ಟು ಹಿಡಿದ ಪೋಷಕರು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋದರು.