ಒಡವೆಗಳ ಆಸೆಗೆ ಕೊಡಲಿಯಿಂದ ಕೊಚ್ಚಿ ಸಾಧುವಿನ ಹತ್ಯೆ
ಜೈಪುರ,ಅ.22: ಒಡವೆಗಳ ಆಸೆಯಿಂದ ಸಾಧುವೋರ್ವ ಇನ್ನೋರ್ವ ಸಾಧುವನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ನಡೆದಿದೆ.
ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ನಿವಾಸಿಯಾದ ಆರೋಪಿ ಸಂತ ಬಾಲಕದಾಸ್ ಅಲಿಯಾಸ್ ಲಾಲಾರಾಮ ಎಂಬಾತ ಕರೌಲಿ ಜಿಲ್ಲೆಯ ಬಾಡಪುರ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಉಳಿದುಕೊಳ್ಳಲು ಬಂದಿದ್ದು,ಸಂತ ಮೌನಿಬಾಬಾ ಅಲಿಯಾಸ್ ಅಲೋಕ್ ಸಿಂಗ್ ರಾಜಪೂತ್ ಎನ್ನುವವರು ಕೆಲವು ವಾರಗಳಿಂದ ಅದೇ ದೇವಸ್ಥಾನದಲ್ಲಿ ವಾಸವಾಗಿದ್ದರು.
ಬಾಲಕದಾಸ್ ರವಿವಾರ ಮೌನಿಬಾಬಾ ಧರಿಸಿದ್ದ ಆಭರಣಗಳನ್ನು ದೋಚಲು ಅವರನ್ನು ಕೊಚ್ಚಿ ಕೊಲೆ ಮಾಡಿದ್ದು,ಚಿನ್ನದ ಉಂಗುರಗಳು,ಲಾಕೆಟ್ ಮತ್ತು ಹಣದೊಂದಿಗೆ ಪರಾರಿಯಾಗುತ್ತಿದ್ದ ಆತನನ್ನು ಗ್ರಾಮಸ್ಥರು ಮತ್ತು ದೇವಸ್ಥಾನದ ಆಶ್ರಮ ನಿವಾಸಿಗಳು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಹತ್ಯೆಗೆ ಬಳಸಿದ್ದ ಕೊಡಲಿಯನ್ನು ವಶಪಡಿಸಿಕೊಂಡಿದ್ದಾರೆ.
Next Story