ರಸ್ತೆ ಗುಂಡಿ ಮುಚ್ಚುತ್ತೀರೋ, ಇಲ್ಲ ಬಿಬಿಎಂಪಿಯನ್ನೇ ಮುಚ್ಚಬೇಕಾ ?: ಹೈಕೋರ್ಟ್

ಬೆಂಗಳೂರು, ಅ.23: ರಸ್ತೆ ಗುಂಡಿ ಮುಚ್ಚಲು ನೀಡಿದ ಗಡುವು ಮುಗಿದರೂ ಇನ್ನೂ ಸಂಪೂರ್ಣವಾಗಿ ಗುಂಡಿ ಮುಚ್ಚದ ಕಾರಣ ಹೈಕೋರ್ಟ್ ಬಿಬಿಎಂಪಿ ವಿರುದ್ಧ ಗರಂ ಆಗಿದೆ. ಗುಂಡಿ ಮುಚ್ಚುತ್ತೀರೋ ಅಥವಾ ಬಿಬಿಎಂಪಿಯನ್ನೇ ಮುಚ್ಚಬೇಕೋ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರಿದ್ದ ವಿಭಾಗೀಯ ಪೀಠದಲ್ಲಿ ಮಂಗಳವಾರ ನಡೆದ ಪಿಐಎಲ್ ವಿಚಾರಣೆಯಲ್ಲಿ ಉತ್ತರಿಸಿದ ಬಿಬಿಎಂಪಿ, ಕಳೆದ 15 ದಿನಗಳಿಂದ ರಸ್ತೆಗುಂಡಿ ಮುಚ್ಚಿಲ್ಲ, 43 ಪ್ರದೇಶಗಳ ಪೈಕಿ 16 ಕಡೆ ಮುಚ್ಚಿದ್ದೇವೆಂದು ಹೇಳಿದೆ.
ಈ ಉತ್ತರಕ್ಕೆ ಕೆಂಡಾಮಂಡಲವಾದ ಪೀಠ, ನೀವು ಗುಂಡಿ ಮುಚ್ಚದಿದ್ದರೆ ನಿಮ್ಮದೇ ವೈಫಲ್ಯ ಎಂದು ಪರಿಗಣಿಸಲ್ಪಡುತ್ತದೆ. ನಿಮ್ಮಿಂದಾಗದಿದ್ದರೆ ಈ ಕಾರ್ಯವನ್ನು ಬೇರೆ ಏಜೆನ್ಸಿಗೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿತು. ಅಷ್ಟೇ ಅಲ್ಲ ನಿಷ್ಪ್ರಯೋಜಕವೆಂದು ಸಾಬೀತು ಮಾಡುತ್ತಿದ್ದೀರಾ. ನಿಮ್ಮ ಅಧಿಕಾರಿಗಳಿಗೆ ಎಷ್ಟು ಕೆಲಸವಾಗಿದೆ ಎಂಬ ಬಗ್ಗೆ ಕೂಡ ತಿಳಿದಿರುವುದಿಲ್ಲ. 43 ಪ್ರದೇಶಗಳ ರಸ್ತೆಗುಂಡಿಗಳನ್ನು ಇವತ್ತೇ ಮುಚ್ಚಬೇಕು. ಬಿಡಬ್ಲುಎಸ್ಎಸ್ಬಿಯೋ, ಬಿಬಿಎಂಪಿ ತಪ್ಪೊ ಗೊತ್ತಿಲ್ಲ ಎಂದಿತು.
ಗುಂಡಿಗಳಿಗೆ ನಾವು ಹೊಣೆಯಲ್ಲವೆಂದು ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ ವಾದಿಸಿತು. ನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ಹೈಕೋರ್ಟ್ ನೀಡಿದ್ದ ಗಡುವು ಇಂದು ಮುಗಿದಿದೆ. ಆದಾಗ್ಯೂ, ಬಹುತೇಕ ಕಡೆ ವಾಹನ ಸವಾರರ ಬಲಿಗಾಗಿ ಹೊಂಡ-ಗುಂಡಿಗಳು ಬಾಯ್ತೆರೆದು ಕುಳಿತಿವೆ.
ಸತತವಾಗಿ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ಕೂಡ ಮೂರು ಬಾರಿ ಗಡುವು ವಿಸ್ತರಿಸಿತು. ದಸರಾ ರಜೆ ಅವಧಿಯಲ್ಲಿ ನಗರದಲ್ಲಿ ವಾಹನಗಳ ದಟ್ಟಣೆ ಕಡಿಮೆ ಇರುತ್ತದೆ. ಈ ಅವಧಿಯಲ್ಲಿ ತ್ವರಿತವಾಗಿ ಗುಂಡಿ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಆದೇಶಿಸಿತ್ತು.
ಬಹುತೇಕ ರಸ್ತೆಗಳು ಗುಂಡಿ ಮುಕ್ತವಾಗಿಲ್ಲ. ಹೈಕೋರ್ಟ್, ಬಿಬಿಎಂಪಿ ಮತ್ತು ರಾಜ್ಯದ ಶಕ್ತಿಸೌಧಕ್ಕೆ ಹತ್ತಿರವಿರುವ ರಸ್ತೆಗಳಲ್ಲೆ ಗುಂಡಿಗಳನ್ನು ಮುಚ್ಚುವ ಕೆಲಸ ಆಗಿಲ್ಲ. ಈಗಾಗಲೇ ಮುಚ್ಚಿರುವ ಗುಂಡಿಗಳು ಸಹ ಮತ್ತೆ ಬಾಯ್ತೆರೆದುಕೊಂಡಿವೆ. ಕಳಪೆ ಕಾಮಗಾರಿಯಿಂದ ಡಾಂಬರು ಕಿತ್ತು ಬಂದು ಗುಂಡಿಗಳು ನಿರ್ಮಾಣವಾಗಿವೆ. ವಿಚಾರಣೆಯನ್ನು ಅ.26ಕ್ಕೆ ಮುಂದೂಡಿದೆ.







