ಯಲ್ಲಾಪುರದ ತಳ್ಳಿಕೇರಿಯಲ್ಲಿ ಕಾಮಾಲೆ ರೋಗದಿಂದ ಬಳಲುತ್ತಿರುವ 18 ಮಂದಿ

ಯಲ್ಲಾಪುರ,ಅ.23 : ಯಲ್ಲಾಪುರ ಪಟ್ಟಣ ಪಂಚಾಯತ್ ವ್ಯಾಪ್ತಿಯ ತಳ್ಳಿಕೇರಿ ವಾರ್ಡ್ನ ತಳ್ಳಿಕೇರಿಯಲ್ಲಿ ಕಾಮಾಲೆ ರೋಗದಿಂದ ಬಳಲುತ್ತಿದ್ದ ಬಾಲಕಿಯೋರ್ವಳು ಇತ್ತೀಚೆಗೆ ಸಾವನ್ನಪ್ಪಿದ್ದು, ಇನ್ನೂ 18 ಜನ ರೋಗದಿಂದ ಬಳಲುತ್ತಿದ್ದಾರೆ. ಕೆಲವರು ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇನ್ನೂ ಕೆಲವರು ಈಗಲೂ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಳ್ಳೆಕೇರಿಯ ಜನಸಂಖ್ಯೆ ಅಂದಾಜು 350 ರಷ್ಟಿದ್ದು, ಸುಮಾರು 150 ಮನೆಗಳಿವೆ. ಇಲ್ಲಿ ಎರಡು ಬೋರ್ವೆಲ್ ಗಳನ್ನು ನಿರ್ಮಿಸಿ ಅದರಿಂದ ನೀರು ಪೂರೈಸಲಾಗುತ್ತಿತ್ತು. ಶಾಲೆಯ ಸಮೀಪ ಇರುವ ಕೊಳವೆ ಬಾವಿ ಆಗಾಗ ಕೈಕೊಡುತ್ತಿದ್ದು, ಬಿಸಗೋಡ ರಸ್ತೆಯ ಅಂಚಿನಲ್ಲಿ ಇರುವ ಕೊಳವೆ ಬಾವಿಯಿಂದ ನೀರು ಪೂರೈಕೆ ಮಾಡಲಾಗುತ್ತಿತ್ತು. ಈ ಕೊಳವೆ ಬಾವಿಯಲ್ಲಿ ಕೊಳಚೆ ನೀರು ಬಂದಿದ್ದರಿಂದ ಈ ಭಾಗದ ಜನ ಶಾಸಕರು, ಸಂಸದರು, ಅಧಿಕಾರಿಗಳ ಎದುರು ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದರು.
ಕಳೆದ ಒಂದು ತಿಂಗಳ ಹಿಂದೆ ಕೊಳಚೆ ನೀರು ಪೂರೈಕೆ ಮಾಡುತ್ತಿರುವ ಕೊಳವೆ ಬಾವಿಯನ್ನು ಸ್ಥಗಿತಗೊಳಿಸಲಾಗಿದ್ದು. ಈ ಹಿಂದೆ ಇದೇ ಕೊಳವೆ ಬಾವಿಯಿಂದ ಪೂರೈಕೆಯಾದ ನೀರನ್ನು ಕುಡಿದ ಅನೇಕ ಜನ ಕಾಮಾಲೆಗೆ ತುತ್ತಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ತಿಂಗಳ ಹಿಂದೆ ಈ ಭಾಗದ 18ಕ್ಕೂ ಹೆಚ್ಚು ಜನರಿಗೆ ಕಾಮಾಲೆ ರೋಗ ಕಾಣಿಸಿಕೊಂಡಿದೆ. ಕಾಮಾಲೆ ರೋಗ ಪೀಡಿತಳಾಗಿದ್ದ ಪಟ್ಟಣದ ಕೆಜಿಎಸ್ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಐತೀಶ ಶಾಮಸುಭಾ ಶೌಕತ್ಅಲಿ ಮುಲ್ಲಾ(8) ಕಾಮಾಲೆ ರೋಗಕ್ಕೆ ತುತ್ತಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಅ.1 ರಂದು ಮೃತಪಟ್ಟಿದ್ದಾಳೆ.
ಯಲ್ಲಾಪುರದಿಂದ ಗಲ್ಫ್ ಬಹರೈನ್ ದೇಶಕ್ಕೆ ಕೆಲಸಕ್ಕೆ ತೆರಳಿದ್ದ ಯುವಕನೋರ್ವ ಕಾಮಾಲೆ ರೋಗ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆತನನ್ನು ಬಹರೈನ್ ನಿಂದ ಮರಳಿ ಭಾರತಕ್ಕೆ ಕಳಿಸಲಾಗಿದೆ.
ಮಚ್ಚಿಗಲ್ಲಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿರುವ ಶೈನಾಜ್ ಮೆಹಬೂಬ್ ಶೇಖ್(11) ಕೂಡ ಕಾಮಾಲೆ ರೋಗದಿಂದ ಬಳಲುತ್ತಿದ್ದ ಇದೀಗ ಚೇತರಿಸಿಕೊಳ್ಳುತ್ತಿದ್ದಾಳೆ. ಪಟ್ಟಣದ ಟಿ ಎಸ್ ಪಿಯು ಕಾಲೇಜಿನ ಕಾಮರ್ಸ್ ವಿದ್ಯಾರ್ಥಿ ತಳ್ಳಿಕೇರಿ ನಿವಾಸಿ ನೀಹಾ ಸಯ್ಯದ್ ಆದಂ(18), ಪರವಿನ್ ಆದಂ ಶೇಖ್(19) ಈಕೆಯ ಕುಟುಂಬದ ಸಹೋದರರಾದ ಮಕ್ಮಲ್ ಆದಂ ಶೇಖ್, ಷರೀಫ್ ಆದಂ ಶೇಖ್, ತೈಹಿಸಿನ್ ಹಮೀದ ಶೇಖ್, ಸೈನಾದ ಮೆಹಬೂಬ್, ಮುರ್ತುಜಾ ಇಬ್ರಾಹಿಂ ಮುಲ್ಲಾ, ವಹೀದ ಇಬ್ರಾಹಿಂ ಮುಲ್ಲಾ, ಮಹೇಬ ಇಬ್ರಾಹಿಂ ಮುಲ್ಲಾ ಸೇರಿದಂತೆ ಇನ್ನು ಹತ್ತಾರು ಮಂದಿ ಕಾಮಾಲೆ ರೋಗದಿಂದ ಬಳಲಿದ್ದಾರೆ.
ಯಲ್ಲಾಪುರದ ಖಾಸಗಿ ಆಸ್ಪತ್ರೆ ಸೇರಿದಂತೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆ, ಕಾರವಾರದ ಸರಕಾರಿ ಆಸ್ಪತ್ರೆ ಇನ್ನು ಬೇರೆ ಬೇರೆ ನಗರಗಳಲ್ಲಿ ಕೆಲವು ಜನ ಇನ್ನೂ ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಬಹುಶಃ ಇಲ್ಲಿ ಪೂರೈಕೆಯಾಗುತ್ತಿರುವ ನೀರಿನ ಕಾರಣದಿಂದ ಇಲ್ಲಿ ಕಾಮಾಲೆ ರೋಗ ಬಂದಿರಬಹುದಾದ ಸಾಧ್ಯತೆಯಿದೆ. ಪಟ್ಟಣ ಪಂಚಾಯಿತಿ ತಳ್ಳಿಕೇರಿ ಭಾಗಕ್ಕೆ ಉತ್ತಮವಾದ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಬೇಕು. ಅಲ್ಲದೆ ಇಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಬೇಕು. ಈ ಕುರಿತು ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯಿತಿ ಹಾಗೂ ಸರ್ಕಾರವನ್ನು ಒತ್ತಾಯಿಸಲಾಗುವುದು.
-ಕಲ್ಪನಾ ಗಜಾನನ ನಾಯ್ಕ ( ಪ.ಪಂ ತಳ್ಳಿಕೇರಿ ವಾರ್ಡ್ ನೂತನ ಸದಸ್ಯೆ)
ಕಳೆದ ಒಂದು ತಿಂಗಳ ಹಿಂದೆ ಈ ಭಾಗದಲ್ಲಿ ಕಾಮಾಲೆ ರೋಗ ಬಾಧಿಸಿ ಬಹಳಷ್ಟು ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರಲ್ಲಿ ಕೆಲವು ಮಂದಿ ಚೇತರಿಸಿಕೊಂಡಿದ್ದು, ಓರ್ವ ಬಾಲಕಿ ಮೃತಪಟ್ಟಿದ್ದಾಳೆ. ಈ ಭಾಗದಲ್ಲಿ ಪೂರೈಕೆಯಾಗುತ್ತಿದ್ದ ಕೊಳವೆ ಬಾವಿಯಿಂದ ಮಣ್ಣು ಮಿಶ್ರಿತ ಕೊಳಕು ನೀರು ರೋಗಕ್ಕೆ ಕಾರಣವಾಗಿರಬಹುದು. ಇದೀಗ ಪೂರೈಕೆ ಮಾಡಲಾಗುತ್ತಿರುವ ನೀರನ್ನು ಪರೀಕ್ಷಿಸಿ ಯಾವುದೇ ರೋಗ ಲಕ್ಷಣಗಳು ಕಂಡು ಬಾರದೆ ಇದ್ದರೇ ಅದನ್ನು ಮನೆಗಳಿಗೆ ಪೂರೈಕೆ ಮಾಡಬೇಕು ಅಲ್ಲಿಯವರೆಗೂ ಟ್ಯಾಕ್ಟರ್ ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಮಾಡಬೇಕು.
-ಯಾಸೀನ್ ಶೇಖ್ (ತಳ್ಳೀಕೇರಿ ನಿವಾಸಿ)







