ದಾವಣಗೆರೆ: ಅನಾಥ ಶವ ಪತ್ತೆ ಪ್ರಕರಣಕ್ಕೆ ಹೊಸ ತಿರುವು; ಮೂವರು ಆರೋಪಿಗಳ ಬಂಧನ

ದಾವಣಗೆರೆ,ಅ.23: ಇತ್ತೀಚೆಗೆ ಶಿರಮಗೊಂಡನ ಹಳ್ಳಿ ಚಾನಲ್ನಲ್ಲಿ ಸಿಕ್ಕ ಅನಾಥ ಶವ ಪ್ರಕರಣಕ್ಕೆ ಹೊಸ ತಿರುವ ಸಿಕ್ಕಿದ್ದು, ಇದಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ಚನ್ನಗಿರಿ ತಾಲೂಕಿನ ತೋಪೆನಹಳ್ಳಿ ಗ್ರಾಮದ ಟಿ.ಎಚ್.ರಂಗಸ್ವಾಮಿ, ಟಿ.ಎನ್ ಹನುಮಂತಪ್ಪ ಹಾಗೂ ತಿಪ್ಪೇಶ್ ಬಂಧಿತರು. ಇತ್ತೀಚೆಗೆ ಶಿರಮಗೊಂಡನಹಳ್ಳಿ ಚಾನೆಲ್ನಲ್ಲಿ ಹಗ್ಗದಿಂದ ಕೈಕಾಲು ಕಟ್ಟಿದ ಸ್ಥಿತಿಯಲ್ಲಿದ್ದ ಮೃತದೇಹವೊಂದು ಪತ್ತೆಯಾಗಿತ್ತು. ಈ ಕುರಿತು ತನಿಖೆ ಕೈಗೊಂಡು ಪೊಲೀಸರು ಎರಡ್ಮೂರು ದಿನಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತೋಪೆನಹಳ್ಳಿ ಗ್ರಾಮದ ಕೊಲೆಯಾದ ಜಗದೀಶ್ ಪ್ರತಿದಿನ ಮದ್ಯಸೇವಿಸಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಇದರಿಂದ ಬೇಸತ್ತ ಆತನ ಸಂಬಂಧಿಕರೇ ಅ.3ರಂದು ಬೆಳಗಿನ ಜಾವ ಹಗ್ಗದಿಂದ ಜಗದೀಶನ ಕತ್ತನ್ನು ಬಿಗಿದು ಕೊಲೆಗೈದು ತೋಪನಹಳ್ಳಿ ಗ್ರಾಮದ ಚಾನೆಲ್ಗೆ ಮೃತದೇಹ ಬಿಸಾಕಿದ್ದರು ಎನ್ನಲಾಗಿದೆ.
ಮೃತದೇಹ 17 ದಿನಗಳ ನಂತರ ಶಿರಮಗೊಂಡನಹಳ್ಳಿ ಬಳಿಯ ಚಾನೆಲ್ನಲ್ಲಿ ಪತ್ತೆಯಾಗಿದೆ. ಮೃತದೇಹ ಸಂಪೂರ್ಣ ಗುರುತು ಸಿಗದಂತಾಗಿತ್ತು. ಆದರೆ, ಮೃತನ ಕೈಮೇಲಿದ್ದ ಅಚ್ಚೆ ಹೆಸರಿನ ಆಧಾರದ ಮೇಲೆ ತೀವ್ರ ತನಿಖೆ ನಡೆಸಿದಾಗ ಸಂಬಂಧಿಕರೇ ಕೊಲೆಗೈದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಕುರಿತು ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಶೀಘ್ರ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಸಿಬ್ಬಂದಿಗೆ ಎಸ್ಪಿ ಆರ್. ಚೇತನ್ ಅಭಿನಂದಿಸಿದ್ದಾರೆ.







