ರೋಟರಿಯಿಂದ 50 ಸಂತ್ರಸ್ತ ಕುಟುಂಬಗಳಿಗೆ ಮನೆ ನಿರ್ಮಾಣ: ರೋಟರಿ ಜಿಲ್ಲಾ ಗವರ್ನರ್ ರೋಹಿನಾಥ್
ಕೊಡಗು ಮಳೆ ಹಾನಿ

ಮಡಿಕೇರಿ, ಅ.23: ಕೊಡಗಿನಲ್ಲಿ ನಡೆದ ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದ 50 ಕುಟುಂಬಗಳಿಗೆ ರೋಟರಿ ವತಿಯಿಂದ ಮನೆ ನಿರ್ಮಿಸಿಕೊಡುವ ಸಂಕಲ್ಪ ಮಾಡಲಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ರೋಹಿನಾಥ್ ಹೇಳಿದರು.
ಜಿಲ್ಲಾಡಳಿತ ಮನೆ ನಿರ್ಮಾಣಕ್ಕೆ ನಿವೇಶನ ಒದಗಿಸಿಕೊಟ್ಟರೆ 50 ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಲಾಗುವುದು. ಈ ಬಗ್ಗೆ ರೋಟರಿ ಸಂಸ್ಥೆ ವಿಶ್ವ ಮಟ್ಟದಲ್ಲಿ ರೋಟರಿ ಸಂಸ್ಥೆಯ ಅನುದಾನ ಕ್ರೋಢೀಕರಣಕ್ಕೆ ಮುಂದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾಡಳಿತ ಫಲಾನುಭವಿಗಳನ್ನು ಆಯ್ಕೆ ಮಾಡಿ ನಿವೇಶನ ಒದಗಿಸಿದರೆ ಸುಮಾರು ತಲಾ 9 ಲಕ್ಷ ರೂ. ಅನುದಾನದಲ್ಲಿ ಮನೆ ನಿರ್ಮಿಸಿಕೊಡುವ ಯೋಜನೆ ರೂಪಿಸಲಾಗಿದೆ. ಸರ್ಕಾರದಿಂದ ನಿರ್ಮಿಸುವ ಮನೆಗಳೊಂದಿಗೆ ರೋಟರಿ ಪಾಲು ನೀಡುವ ಉದ್ದೇಶ ಹೊಂದಿಲ್ಲ. ರೋಟರಿ ತನ್ನದೇ ಆದ ಚಿಂತನೆಯಲ್ಲಿ ಮನೆ ನಿರ್ಮಿಸಲಿದೆ. ರೋಟರಿ ಕೂಡ ಪ್ರತ್ಯೇಕವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡುವ ವಿಶೇಷ ಯೋಜನೆಯನ್ನು ಇಟ್ಟುಕೊಂಡಿದೆ. ಇದು ರೋಟರಿ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಮನೆ ನಿರ್ಮಾಣಕ್ಕಾಗಿ ರೋಟರಿಯು ವಿಶ್ವ ಮಟ್ಟದ ಅನುದಾನ ಬಳಕೆ ಮಾಡಲು ನಿರ್ಧರಿಸಿದೆ. ಕೇರಳದ 3 ಜಿಲ್ಲೆ ಸೇರಿದಂತೆ ಕೊಡಗಿನಲ್ಲಿ ಮನೆ ನಿರ್ಮಿಸಲಿದೆ. ಯೋಜನೆ ಅನುಷ್ಠಾನಕ್ಕಾಗಿ ಪ್ರತ್ಯೇಕ ಸಮಿತಿ ರಚಿಸಲಾಗಿದ್ದು, ಕೊಡಗಿನ ರೋಟರಿ ಪ್ರಮುಖರಾದ ಡಾ.ರವಿ ಅಪ್ಪಾಜಿ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಇವರೊಂದಿಗೆ ಸುರೇಶ್ ಚೆಂಗಪ್ಪ, ಡಾ. ನಾಗಾರ್ಜುನ್ ಹಾಗೂ ತಂಡ ಕಾರ್ಯೋನ್ಮುಖವಾಗಿದೆ ಎಂದರು.
ಅಂಗನವಾಡಿ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಅಂಗನವಾಡಿ ದತ್ತು ಪಡೆಯುವ ಯೋಜನೆ ಹೆಚ್ಚು ಜನಪ್ರಿಯವಾಗುತ್ತಿದೆ. ಮಕ್ಕಳಿಗೆ ಶಿಕ್ಷಣದೊಂದಿಗೆ ಸ್ವಚ್ಛತೆ, ಆರೋಗ್ಯ, ಮಾನಸಿಕ ಸ್ಥೈರ್ಯ ಹೆಚ್ಚಿಸುವ ಉದ್ದೇಶದಿಂದ ದತ್ತು ಪಡೆದು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ವಿಶ್ವಮಟ್ಟದಲ್ಲಿ ಪೋಲಿಯೋ ಮುಕ್ತ ಅಭಿಯಾನ ಯಶಸ್ವಿ ಪಡೆದುಕೊಂಡಿದೆ. ಪೋಲಿಯೋ ರೋಗಿಗಳ ಸಂಖ್ಯೆಯನ್ನು ಸಿಂಗಲ್ ಡಿಜಿಟ್ಗೆ ಇಳಿಸುವ ಸಲುವಾಗಿ ಕಾರ್ಯೋನ್ಮುಖವಾಗಿದ್ದು, ನೈಜಿರಿಯಾ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಿಂದ ಉತ್ತಮ ಬೆಂಬಲ ದೊರಕುತ್ತಿಲ್ಲ. ಈ ಕಾರಣಕ್ಕಾಗಿ ವಿಶ್ವದಲ್ಲಿ 22 ಪ್ರಕರಣಗಳು ದಾಖಲಾಗಿವೆ. ಇದನ್ನು ಸಿಂಗಲ್ ಡಿಜಿಟ್ಗೆ ಇಳಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಗೋಷ್ಠಿಯಲ್ಲಿ ಉಪ ರಾಜ್ಯಪಾಲ ಧರ್ಮಪುರಿ ನಾರಾಯಣ, ವಲಯ ಕಾರ್ಯದರ್ಶಿ ಕ್ರೆಜ್ವಲ್ ಕೋಟ್ರ್ಸ್, ಗೋಣಿಕೊಪ್ಪ ರೋಟರಿ ಅಧ್ಯಕ್ಷ ದಿಲನ್ ಚೆಂಗಪ್ಪ, ಕಾರ್ಯದರ್ಶಿ ಬೀಟಾ ಉಪಸ್ಥಿತರಿದ್ದರು.







