ಅ.28: ಆರ್ಎಸ್ಬಿ ಕೊಂಕಣಿ ಚಲನಚಿತ್ರ ಬಾಯೋ ಮುಹೂರ್ತ
ಉಡುಪಿ, ಅ.25: ಆರ್ಎಸ್ಬಿ ಸಮುದಾಯದ ಕೊಂಕಣಿ ಭಾಷೆಯಲ್ಲಿ ಪ್ರಥಮ ಬಾರಿಗೆ ನಿರ್ಮಾಣವಾಗುತ್ತಿರುವ ‘ಬಾಯೋ’ ಚಲನಚಿತ್ರದ ಮೂಹೂರ್ತ ಸಮಾರಂಭವು ಅ.28ರಂದು ಬೆಳಗ್ಗೆ 9:30ಕ್ಕೆ ಮಣಿಪಾಲದ ಆರ್ಎಸ್ಬಿ ಸಭಾಭವನದಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ರಮಾನಂದ್ ನಾಯಕ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳ್ಳಿಯ ಮುಗ್ಧ ಹೆಣ್ಣಿನ ಜೀವನದ ಎಡರು ತೊಡರುಗಳು, ಕುಟುಂಬದ ಗೌರವಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟು, ತನ್ನವರ ಲಾಲನೆ ಪಾಲನೆ ಗಾಗಿ ತನ್ನ ಸರ್ವಸ್ವವನ್ನೇ ತ್ಯಾಗ ಮಾಡುವ ನೈಜ ಕಥೆಯನ್ನು ಆಧರಿಸಿ ಈ ಚಿತ್ರ ವನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಈ ಚಿತ್ರಕ್ಕೆ ಸಂಗೀತ, ನಿರ್ದೇಶನ, ಪರಿಕಲ್ಪನೆ, ತಾರಾಗಣ, ರಂಗಸಜ್ಜಿಕೆ, ಛಾಯಾಗ್ರಹಣ ಹಾಗೂ ಎಲ್ಲಾ ರೀತಿಯ ಸಹಕಾರವನ್ನು ಆರ್ಎಸ್ಬಿ ಸಮು ದಾಯದವರೇ ನೀಡಿರುವುದು ವಿಶೇಷವಾಗಿದೆ. ಸುಮಾರು 15 ದಿನಗಳ ಕಾಲ ಉಡುಪಿ, ಮಂಗಳೂರು, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಭಾಷಾ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಚಿತ್ರ ಒಂದು ಚೊಚ್ಚಲ ಪ್ರಯತ್ನವಾಗಿದೆ ಎಂದರು.
ಮುಹೂರ್ತವನ್ನು ಗೌಡಪಾದಚಾರ್ಯ ಕೈವಲ್ಯ ಮಠಾಧೀಶ ಶಿವಾನಂದ ಸರಸ್ವತೀ ಸ್ವಾಮೀಜಿ ನೇರವೇರಿಸಲಿರುವರು. ಅಧ್ಯಕ್ಷತೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಯುಕ್ತ ಎಂ.ಗೋಕುಲ್ದಾಸ್ ನಾಯಕ್ ವಹಿಸಲಿರುವರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿ.ನಾಗೇಂದ್ರ ಕಾಮತ್, ಅರುಣ್ ಕಿರಣ್, ಪುಂಡ ಲೀಕ ಮರಾಠೆ, ಮಂಜುನಾಥ ಉಪಸ್ಥಿತರಿದ್ದರು.







