ಚಲುವರಾಯಸ್ವಾಮಿ ಬೆಂಬಲಿಗರು ಬಿಜೆಪಿ ಬೆಂಬಲಿಸಿ: ಯಡಿಯೂರಪ್ಪ
ಮಂಡ್ಯ ಉಪಚುನಾವಣೆ: ಬಿಜೆಪಿ ಬಹಿರಂಗ ಸಭೆ

ನಾಗಮಂಗಲ, ಅ.26: ಸಿದ್ದರಾಮಯ್ಯನವರ ಆಪ್ತ ಬೆಂಬಲಿಗರು ಹಾಗೂ ಮಂಡ್ಯ ಜಿಲ್ಲೆಯ ಪ್ರಬಲ ಕಾಂಗ್ರೆಸ್ ನಾಯಕರು ಆದ ಎನ್.ಚಲುವರಾಯಸ್ವಾಮಿ ರಾಜಕೀಯ ಭವಿಷ್ಯಕ್ಕಾಗಿ ಅವರ ಬೆಂಬಲಿಗರು ಹಿತೈಷಿಗಳು ಬಿಜೆಪಿಗೆ ಮತಹಾಕುವಂತೆ ವಿನಂತಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಪಟ್ಟಣದಲ್ಲಿ ನಡೆದ ಮಂಡ್ಯ ಲೋಕಸಭಾ ಉಪಚುನಾವಣೆಯ ಬಿಜೆಪಿ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಚಲುವರಾಯಸ್ವಾಮಿ ಬೆಂಬಲಿಗರು ಎದುರಾಳಿ ಜೆಡಿಎಸ್ಗೆ ಮತಹಾಕಲು ಸಾದ್ಯವಿಲ್ಲ. ಚಲುವರಾಯಸ್ವಾಮಿಯನ್ನು ಬಹಳ ಹಗುರವಾಗಿ ಮತ್ತು ಕೆಟ್ಟದಾಗಿ ತೆಗಳಿದ್ದಾರೆ. ಅಪಮಾನ ಮಾಡಿದಾರೆ. ಹಾಗಾಗಿ ಅವರ ಅಭಿಮಾನಿಗಳು ಜೆಡಿಎಸ್ಗೆ ಮತಹಾಕಬೇಡಿ. ನೀವು ಬಿಜೆಪಿಗೆ ಮತಹಾಕುವುದದರಿಂದ ಅವರಿಗಾದ ಅಪಮಾನಕ್ಕೆ ತಕ್ಕಪಾಠಕಲಿಸಿದಂತಾಗುತ್ತದೆ ಎಂದರು.
ಮಂಡ್ಯ ಮತದಾರರಿಂದ ಅಚ್ಚರಿ ಫಲಿತಾಂಶ: ಸಭೆಯ ಮಾತಿನುದ್ದಕ್ಕೂ ಕಾಂಗ್ರೆಸ್ನ ಚಲುವರಾಯಸ್ವಾಮಿಯನ್ನೆ ಜಪಿಸಿದ ಯಡಿಯೂರಪ್ಪ, ಮಂಡ್ಯದಲ್ಲಿ ಇದುವರೆಗೂ ಯಾವುದೇ ಚುನಾವಣೆಯಲ್ಲೂ ಬಿಜೆಪಿ ಗೆಲ್ಲಲಿಲ್ಲವಲ್ಲ ಎಂಬ ನೋವಿದೆ. ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ವಿರೋಧಿ ಅಲೆಯಿದೆ. ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಎಲ್ಲ ರೀತಿಯಲ್ಲೂ ಸಮರ್ಥರಿದ್ದಾರೆ. ಮಂಡ್ಯ ಜಿಲ್ಲೆ ಮತದಾರರು ಈ ಬಾರಿ ಬಿಜೆಪಿ ಪರ ಅಚ್ಚರಿಯ ಫಲಿತಾಂಶ ನೀಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಹುಲ್ಗಾಂಧಿ ಪ್ರಧಾನಮಂತ್ರಿ ಅಭ್ಯರ್ಥಿಯಲ್ಲ ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಹೇಳಿದ್ದಾರೆ. ಇನ್ನು ಬಿಎಸ್ಪಿ ವರಿಷ್ಠೆ ಮಾಯಾವತಿ ಕೂಡ ಕಾಂಗ್ರೆಸ್ನಿಂದ ದೂರವೇ ಉಳಿದಿದ್ದಾರೆ. ರಾಜ್ಯದಲ್ಲಿನ ಮೈತ್ರಿ ಸರಕಾರ ರೈತರ ಎಲ್ಲಾ ಸಾಲಮನ್ನಾ ಮಾಡಿದ್ದೇವೆ ಎಂದು ಹೇಳಿದ್ದು ಯಾವ ರೈತರ ಸಾಲಮನ್ನಾವಾಗಿಲ್ಲ. ಹಣಬಲದ ಮೇಲೆ ಜಾತಿ ವಿಷ ಬೀಜ ಬಿತ್ತುವ ಪಕ್ಷ ನಮ್ಮದಲ್ಲ. ನಾನು ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆಯನ್ನು ಮೈತ್ರಿ ಸರಕಾರ ಕಡೆಗಣಿಸಿದೆ ಎಂದು ಅವರು ಟೀಕಿಸಿದರು.
ಜೆಡಿಎಸ್ ಗೋಸುಂಬೆ ಇದ್ದಂತೆ:ಸಿ.ಟಿ.ರವಿ
ಸಭೆಯಲ್ಲಿ ಮಾತನಾಡಿದ ಶಾಸಕ ಸಿ.ಟಿ.ರವಿ ಜೆಡಿಎಸ್ ಪಕ್ಷ ಗೊಸುಂಬೆ ರೀತಿಯಲ್ಲಿ ಬಣ್ಣ ಬದಲಾಯಿಸುತ್ತೆ. ಮೋದಿ ಪ್ರಧಾನಿಯಾದರೆ ದೇಶವನ್ನೇ ಬಿಟ್ಟು ಹೋಗ್ತಿನಿ ಎಂದು ಹೇಳಿ, ಅತಿ ಹೆಚ್ಚು ಭಾರಿ ಮೋದಿಯನ್ನು ಭೇಟಿ ಮಾಡಿದವರು ದೇವೇಗೌಡರೇ ಆಗಿದ್ದಾರೆ. ಅಲ್ಲದೆ ಈಗ ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಬಂದ್ ಮಾಡುತ್ತೇನೆ ಎಂದು ಹೇಳಿರುವ ದೇವೇಗೌಡರು ದಕ್ಷಿಣ ಭಾರತದ ಜನರನ್ನು ಗುತ್ತಿಗೆ ಪಡೆದಿದ್ದಾರಾ ಎಂದರು.
ಕಾಂಗ್ರೆಸ್ ನಾಯಕನಿಗೆ ಜೈಕಾರ: ಬಿಜೆಪಿ ಚುನಾವಣಾ ಪ್ರಚಾರ ಸಭೆಗೆ ಕಾಂಗ್ರೇಸ್ ನಾಯಕ ಚಲುವರಾಯಸ್ವಾಮಿ ಬೆಂಬಲಿಗರೇ ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿದ್ದರು ಎನ್ನಲಾಗಿದ್ದು, ಯಡಿಯೂರಪ್ಪನವರು ಮಾತು ಮಾತಿಗೂ ಚಲುವರಾಯಸ್ವಾಮಿಯನ್ನೇ ಜಪಿಸುತ್ತಿದ್ದರಿಂದ ಸಭೆಯಲ್ಲಿ ಜೋರು ಚಪ್ಪಾಳೆ, ಸಿಳ್ಳೆ, ಜೈಕಾರಗಳು ಮೊಳಗಿದ್ದು ವಿಶೇಷವಾಗಿತ್ತು.
ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ, ಮಾಜಿ ಡಿಸಿಎಂ ಆರ್.ಅಶೋಕ್, ಮಾಜಿ ಶಾಸಕ ಸುರೇಶ್ಗೌಡ, ನಟಿ ತಾರಾ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ನಾಗಣ್ಣಗೌಡ, ತಾಲೂಕು ಅಧ್ಯಕ್ಷ ನರಸಿಂಹಮೂರ್ತಿ, ತೊಳಲಿ ಕೃಷ್ಣಮೂರ್ತಿ, ವಿಷ್ಣುಮೂರ್ತಿ ಭಟ್, ಇತರ ಮುಖಂಡರು ಉಪಸ್ಥಿತರಿದ್ದರು.







