ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ‘ನಿಮ್ಮ ಮನೆಗೆ ನಮ್ಮ ಪುಸ್ತಕ’ ಕಾರ್ಯಕ್ರಮ
ಬೆಂಗಳೂರು, ಅ. 27: ‘ಅಡ್ಡದಾರಿ ಹಿಡಿದಾಗಲೆಲ್ಲ ನಮ್ಮನ್ನು ಎಚ್ಚರಿಸುವ ಅಂತರಂಗದಲ್ಲಿನ ಪೊಲೀಸನ ಮಾತು ಕೇಳಿದರೆ ತಪ್ಪುಘಟಿಸುವುದಿಲ್ಲ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ, ಕೈದಿಗಳಿಗೆ ಸಲಹೆ ನೀಡಿದ್ದಾರೆ.
ಶನಿವಾರ ಕನ್ನಡ ಪುಸ್ತಕ ಪ್ರಾಧಿಕಾರ ಬೆಳ್ಳಿಹಬ್ಬದ ಪ್ರಯುಕ್ತ ಆರಂಭಿಸಿದ ‘ನಿಮ್ಮ ಮನೆಗೆ ನಮ್ಮ ಪುಸ್ತಕ’ ಕಾರ್ಯಕ್ರಮದಲ್ಲಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಪುಸ್ತಕ ವಿತರಿಸಿ ಮಾತನಾಡಿದ ಅವರು, ‘ಸ್ವಯಂ ಅಪರಾಧಕ್ಕೆ ಬದುಕನ್ನು ಬರಡು ಮಾಡಿಕೊಳ್ಳುತ್ತೇವೆ. ಪ್ರತಿಯೊಬ್ಬರೂ ತಪ್ಪನ್ನು ಮಾಡುತ್ತಾರೆ. ಆ ತಪ್ಪನ್ನು ತಿದ್ದಿಕೊಂಡು ಮುಂದೆ ಸಾಗಿದಾಗ ಮಾತ್ರ ಸುಂದರ ಬದುಕು ನಡೆಸಲು ಸಾಧ್ಯ. ಇನ್ನು ನಮ್ಮಲ್ಲಿನ ಏಕಾಂಗಿತನವನ್ನು ಹೋಗಲಾಡಿಸುವ ಪುಸ್ತಕ ಮನಃಶಾಂತಿಯನು್ನ ಒದಗಿಸುತ್ತದೆ ಎಂದು ಹೇಳಿದರು.
ಅಪರಾಧದ ಹಿನ್ನೆಲೆ ಹೊಂದಿರುವವರು ಹಾವು ಪೊರೆ ಕಳಚಿದ ಹಾಗೇ ಹೊಸ ವ್ಯಕ್ತಿಯಾಗಿ ಜೀವನ ಆರಂಭಿಸಬೇಕೆಂದ ಅವರು, ಜೈಲಿನಲ್ಲಿ ಪ್ರತಿಯೊಬ್ಬರಿಗೂ ಒಂಟಿತನ, ಹತಾಶೆ, ಕೋಪ, ಭಯ ಕಾಡುತ್ತದೆ. ಇದರಿಂದ ಜೈಲಿನಲ್ಲಿರುವ ಕೈದಿಗಳಲ್ಲಿ ಶೇ.95ಮಂದಿ ಖಿನ್ನತೆಯಿಂದ ಬಳಲುತ್ತಿದ್ದಾರೆ. ಕಾನೂನು ವ್ಯವಸ್ಥೆಯಲ್ಲಿ ಸಾಕ್ಷಾಧಾರದ ಕೊರತೆಯಿಂದ ನಿರಪರಾಧಿಗಳು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಹೀಗೆಂದು ಬದುಕಿನಲ್ಲಿ ಭರವಸೆ ಕಳೆದು ಕೊಳ್ಳಬಾರದು ಎಂದರು.
ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ಮಾತನಾಡಿ, ಜೈಲಿನಲ್ಲಿರುವಷ್ಟು ದಿನ ಸ್ನೇಹ, ಸೌಹಾರ್ದದಿಂದ ಬದುಕನ್ನು ಸಾಗಿಸಿ, ಜೀವನಕ್ಕೆ ಅರ್ಥಕಂಡುಕೊಳ್ಳಬೇಕು. ಹಸಿದರಿಗೆ ಅನ್ನ ನೀಡಿದ ಹಾಗೆ ನೊಂದವರಿಗೆ ಸಹ ಕೈದಿ ಸಮಾಧಾನ ಮಾಡುವ ಮೂಲಕ ಆತ್ಮವಿಶ್ವಾಸವನ್ನು ತುಂಬುವುದು ಅತ್ಯಗತ್ಯ. ಕೆಲವು ವ್ಯಕ್ತಿಗಳು ಮನೋರೋಗದಿಂದ ಸಹ ಅಪರಾಧ ಮಾಡುವ ಸಾಧ್ಯತೆ ಇರುತ್ತದೆ ಎಂದರು.
ಕೈದಿಗಳಿಗೆ ಕಥಾ ಕಮ್ಮಟ: 300ಕ್ಕೂ ಅಧಿಕ ಪುಸ್ತಕವನ್ನು ಕೇಂದ್ರ ಕಾರಾಗೃಹದ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಜೈಲಿನಲ್ಲಿರುವ ಕೈದಿಗಳಲ್ಲಿ ಒಂಟಿತನ, ಹತಾಶ ಭಾವ ಹೋಗಲಾಡಿಸಲು ಪುಸ್ತಕ ಸಹಾಯಕ. ಹೀಗಾಗಿ ನಿಮ್ಮ ಮನೆಗೆ ನಮ್ಮ ಪುಸ್ತಕ ಕಾರ್ಯಕ್ರಮವನ್ನು ಕೇಂದ್ರ ಕಾರಾಗೃಹದಲ್ಲಿ ಹಮ್ಮಿಕೊಂಡಿದ್ದು, ಶೀಘ್ರದಲ್ಲಿಯೇ ಬರಹ-ಓದಿನಲ್ಲಿ ಆಸಕ್ತಿ ಇರುವ ಕೈದಿಗಳಿಗೆ ಕಥಾ ಕಮ್ಮಟ ಏರ್ಪಡಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಸಿದ್ಧಲಿಂಗಯ್ಯ, ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಎಂ.ಸೋಮಶೇಖರ್, ಅಧೀಕ್ಷಕ ಪಿ.ಎಸ್.ರಮೇಶ್, ಪ್ರಾಧಿಕಾರದ ಆಡಳಿತಾಧಿಕಾರಿ ಸೌಭಾಗ್ಯ, ಕೇಂದ್ರ ಕಾರಾಗೃಹದ ಗ್ರಂಥಾಲಯದ ಶಿಕ್ಷಕ ಸಿ.ಸಿದ್ದಪ್ಪ ಉಪಸ್ಥಿತರಿದ್ದರು.
‘ಕೈದಿಗಳಿಗೆ ಕಾರಾಗೃಹ ಪರಿವರ್ತನೆಯ ಕೇಂದ್ರವಾಗಬೇಕು. ಇರುವಷ್ಟು ದಿನ ಕೈದಿಗಳು ಅರ್ಥಪೂರ್ಣವಾಗಿ ಜೀವಿಸಿ, ಉತ್ತಮ ವ್ಯಕ್ತಿಯಾಗಿ ಹೊರಹೋಗಬೇಕು. ನೆಹರೂ, ಸಾವರ್ಕರ್, ಬಾಲಗಂಗಾಧರ ತಿಲಕ್ ಸೇರಿದಂತೆ ಹಲವು ಮಂದಿ ಜೈಲಿನಲ್ಲಿಯೇ ಪುಸ್ತಕ ಬರೆದಿದ್ದಾರೆ. ಪುಸ್ತಕ ಓದುವ ಹವ್ಯಾಸ ರೂಢಿಸಿಕೊಂಡರೆ ಜೈಲು ವಾಸವೂ ವರವಾಗುತ್ತದೆ’
-ಡಾ.ಸಿದ್ಧಲಿಂಗಯ್ಯ ಹಿರಿಯ ಸಾಹಿತಿ
‘ಕಾರಾಗೃಹದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿ ಈ ರೀತಿ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯುತ್ತಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಗ್ರಂಥಾಲಯದಲ್ಲಿ 50 ಸಾವಿರ ಪುಸ್ತಕಗಳಿದ್ದು, ಸಾಹಿತ್ಯ, ಕಲೆಯಲ್ಲಿ ಆಸಕ್ತಿ ಇರುವವರಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಪುಸ್ತಕ ಓದುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ’
-ಪಿ.ಎಸ್.ರಮೇಶ್ಕೇಂದ್ರ ಕಾರಾಗೃಹದ ಅಧೀಕ್ಷಕ







