ಹಲ್ಲೆ ಪ್ರಕರಣ: ಆರೋಪಿಗಳಿಬ್ಬರಿಗೆ ಮೂರುವರೆ ವರ್ಷ ಜೈಲುಶಿಕ್ಷೆ
ಉಡುಪಿ, ಅ.29: ಆರು ವರ್ಷಗಳ ಹಿಂದೆ ಕುತ್ಯಾರು ಗ್ರಾಮದ ಭತ್ತಗೇಣಿ ಎಂಬಲ್ಲಿ ನಡೆದ ಹಲ್ಲೆ ಪ್ರಕರಣದ ಆರೋಪಿಗಳಿಬ್ಬರಿಗೆ ಉಡುಪಿ ಮೂರನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯವು 3 ವರ್ಷ 6 ತಿಂಗಳು ಜೈಲುಶಿಕ್ಷೆ ಮತ್ತು 15,000ರೂ. ದಂ ವಿಧಿಸಿ ಅ.22ರಂದು ತೀರ್ಪು ನೀಡಿದೆ.
ವಿಲಿಯಂ ಡಿ ಆಲ್ಮೇಡ ಹಾಗೂ ಚಾಲ್ಸ್ ಡಿಆಲ್ಮೇಡ ಶಿಕ್ಷೆಗೆ ಗುರಿಯಾದ ಆರೋಪಿಗಳು. ಇವರು 2012ರ ಎ.21ರಂದು ಸೆಲೆಸ್ಟಿನ್ ನೋರೋನ್ಹ ಎಂಬ ವರ ಮನೆಯ ಅಂಗಳಕ್ಕೆ ಪ್ರವೇಶ ಮಾಡಿ, ಮೇರಿ ಪಿಂಟೋ ಎಂಬವರಿಗೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದು, ಇದನ್ನು ತಪ್ಪಿಸಲು ಹೋದ ಮೇರಿ ಪಿಂಟೋರ ಗಂಡ ಸ್ಟ್ಯಾನಿ ಪಿಂಟೋಗೆ ಕತ್ತಿಯಿಂದ ಹಲ್ಲೆ ಮಾಡಿ ಗಾಯಗೊಳಿಸಲಾಗಿದೆ. ಗಲಾಟೆಯನ್ನು ತಪ್ಪಿಸಲು ಬಂದ ಸೆಲೆಸ್ಟಿನ್ ನೋರೋನ್ಹ ಇವರನ್ನು ದೂಡಿ ಹಾಕಿದ ಆರೋಪಿಗಳು ಜೀವ ಬೆದರಿಕೆ ಹಾಕಿರುವುದಾಗಿ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆಗೆ ನಡೆಸಿದ ಆಗಿನ ಪೊಲೀಸ್ ಉಪನಿರೀಕ್ಷಕ ಕಮಲಾಕರ್ ಆರ್.ನಾಕ್ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಪ್ರಕರಣ ದ ವಿಚಾರಣೆ ನಡೆಸಿದ ಉಡುಪಿ 3ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾ ಲಯದ ನ್ಯಾಯಾಧೀಶ ಪ್ರಶಾಂತ್ ರಾವ್, ಆರೋಪಿತರ ವಿರುದ್ಧ ಪ್ರಕರಣ ಸಾಬೀತಾಗಿದೆ ಎಂದು ತೀರ್ಮಾನಿಸಿ, ಆರೋಪಿಗಳಿಗೆ ಭಾ.ದಂ.ಸಂ ಕಲಂ 323, 324, 506 ಸ.ವಾ.34ರಡಿಯಲ್ಲಿ 3 ವರ್ಷ 6 ತಿಂಗಳು ಶಿಕ್ಷೆ ಮತ್ತು ಒಟ್ಟು 15,000 ರೂ. ದಂಡ ವಿಧಿಸಿ ತೀರ್ಪು ನೀಡಿದರು. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಜಯಂತಿ ಕೆ. ವಾದ ಮಂಡಿಸಿ ದ್ದರು.







