ಲೋಕಸಭಾ ಉಪಚುನಾವಣೆ: ಸರಕಾರಿ ನೌಕರರಿಗೆ ರಜೆ
ಉಡುಪಿ, ಅ.30: ಭಾರತೀಯ ಚುನಾವಣಾ ಆಯೋಗವು ನ.3ರಂದು ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಅರ್ಹ ಮತದಾರರಾಗಿರುವ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರಕಾರಿ ಕಚೇರಿಗಳ, ಶಾಲಾ ಕಾಲೇಜುಗಳ (ಅನುದಾನಿತ ಶಿಕ್ಷಣ ಸಂಸ್ಥೆ ಒಳಗೊಂಡಂತೆ) ಸರಕಾರಿ ನೌಕರರಿಗೆ ನ.3ರಂದು ವೇತನ ಸಹಿತ ರಜೆಯನ್ನು ಘೋಷಿಸಿದೆ.
ಉಪ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳ ವ್ಯಾಪ್ತಿಯ ಹೊರಗೆ ಕೆಲಸ ನಿರ್ವಹಿಸುತ್ತಿರುವ ಆದರೆ ಈ ಕ್ಷೇತ್ರಗಳಲ್ಲಿ ಅರ್ಹ ಮತದಾರರಾಗಿರುವ ಕೇಂದ್ರ ಮತ್ತು ರಾಜ್ಯ ಸರಕಾರಿ ಕಛೇರಿಗಳ ನೌಕರರಿಗೂ ಈ ಆದೇಶ ಅನ್ವಯ ವಾಗುತ್ತದೆ. ಈ ರಜೆಯು ತುರ್ತು ಸೇವೆಗಳ ಮೇಲೆ ಇರುವ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಕಾರ್ಮಿಕರಿಗೆ ವೇತನ ಸಹಿತ ರಜೆ: ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಎಲ್ಲಾ ಅಂಗಡಿ, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆ ಗಳಲ್ಲಿ ಕೆಲಸ ಮಾಡುತ್ತಿರುವ, ಮತಪಟ್ಟಿಯಲ್ಲಿ ಹೆಸರಿರುವ ಕಾರ್ಮಿಕರಿಗೆ ಪ್ರಜಾ ಪ್ರತಿನಿಧಿ ಕಾಯ್ದೆ ಹಾಗೂ ಕರ್ನಾಟಕ ಔದ್ಯೋಗಿಕ ಸಂಸ್ಥೆಗಳ ಪ್ರಕಾರ ಮತದಾನ ಕ್ಷೇತ್ರಗಳಲ್ಲಿ ಸಾಂವಿಧಾನಾತ್ಮಕ ಹಕ್ಕನ್ನು ಚಲಾಯಿಸಲು ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡುವಂತೆ ಎಲ್ಲಾ ಕಾರ್ಖಾನೆಗಳ ಮತ್ತು ಅಂಗಡಿ/ವಾಣಿಜ್ಯ ಸಂಸ್ಥೆಗಳ ಮಾಲೀಕರಿಗೆ/ಆಡಳಿತ ವರ್ಗದವರಿಗೆ ಸೂಚಿಸಲಾಗಿದೆ ಎಂದು ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







