ಟಿಎಂಸಿಗೆ ಬೆಂಬಲ ಘೋಷಿಸಿದ ಪ್ರಧಾನಿ ಸೋದರ ಪ್ರಹ್ಲಾದ್ ಮೋದಿ
ಕೊಲ್ಕತ್ತಾ, ಅ. 31: ಪ್ರಧಾನಿ ನರೇಂದ್ರ ಮೋದಿಯ ಸಹೋದರ ಪ್ರಹ್ಲಾದ್ ಮೋದಿ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ (ಎಐಟಿಎಂಸಿ) ಪಕ್ಷಕ್ಕೆ ತಮ್ಮ ಬೆಂಬಲ ಘೋಷಿಸಿದ್ದಾರೆ.
ನ್ಯಾಯಬೆಲೆ ಅಂಗಡಿ ಮಾಲಕರ ಫೆಡರೇಶನ್ ಅಧ್ಯಕ್ಷರಾಗಿರುವ ಪ್ರಹ್ಲಾದ್ ತಮ್ಮ ಸಂಘಟನೆಯ ಬೆಂಬಲವನ್ನೂ ಟಿಎಂಸಿಗೆ ಘೋಷಿಸಿದ್ದಾರೆ. ಪಶ್ಚಿಮ ಬಂಗಾಳ ಸರಕಾರದ ಖಾದ್ಯ ಸಾಥೀ ಯೋಜನೆ ಕುರಿತಂತೆ ಚರ್ಚೆಗೆ ಡಮ್ ಡಮ್ ಇಲ್ಲಿನ ರಬೀಂದ್ರ ಭವನ್ನಲ್ಲಿ ಆಯೋಜಿಸಲಾದ ಸಭೆಯಲ್ಲಿ ಮೇಲಿನ ಘೋಷಣೆ ಮಾಡಲಾಗಿದೆ.
ರಾಜ್ಯ ಆಹಾರ ಸಚಿವ ಜ್ಯೋತಿ ಪ್ರಿಯೊ ಮಲ್ಲಿಕ್ ಹಾಗೂ ಸ್ಥಳೀಯ ಸಂಸದೆ ಸೌಗತ ರಾಯ್ ಕೂಡ ಈ ಸಭೆಯಲ್ಲಿ ಹಾಜರಿದ್ದರು.
ತಮ್ಮ ಫೆಡರೇಶನ್ ಸದಸ್ಯರು ದೇಶಾದ್ಯಂತ ನರೇಂದ್ರ ಮೋದಿ ವಿರೋಧಿ ಅಭಿಯಾನವನ್ನು ನೇರವಾಗಿ ಆರಂಭಿಸುವುದಾಗಿ ನ್ಯಾಯ ಬೆಲೆ ಅಂಗಡಿ ಮಾಲಕರ ಫೆಡರೇಶನ್ ಕಾರ್ಯದರ್ಶಿ ಬಿಸ್ವಾಂಬರ್ ಬಸು ಹೇಳಿದ್ದಾರೆ. ಕೇಂದ್ರದ ಬಿಜೆಪಿ ಸರಕಾರವನ್ನು ಕೆಳಗಿಳಿಸಲು ತಮ್ಮ ಸಂಘಟನೆ ಟಿಎಂಸಿಯನ್ನು ಬೆಂಬಲಿಸುತ್ತಿರುವುದಾಗಿ ಅವರು ತಿಳಿಸಿದರು.
ಫೆಡರೇಶನ್ ಸದಸ್ಯರು ಸದ್ಯದಲ್ಲಿಯೇ ವಾರಣಾಸಿಗೆ ತೆರಳಿ ನಮೋ ವಿರೋದಿ ಅಭಿಯಾನ ಆರಂಭಿಸಲಿದ್ದು ಈ ಸಂದರ್ಭ ಪ್ರಹ್ಲಾದ್ ಮೋದಿ ಕೂಡ ಹಾಜರಿರಲಿದ್ದಾರೆ.
ಖಾದ್ಯ ಸಾಥಿ ಯೋಜನೆ ಯಶಸ್ಸು ಕಂಡಿದ್ದಕ್ಕಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಫೆಡರೇಶನ್ ಸನ್ಮಾನಿಸಲು ತೀರ್ಮಾನಿಸಿದೆ.