ದುಬೈ: ನ.4 ರಿಂದ "ಅಂತರ್ ರಾಷ್ಟ್ರೀಯ ಹೋಲಿ ಕುರ್ ಆನ್ ಅವಾರ್ಡ್" ಸ್ಪರ್ಧೆ
ಭಾರತದ ಏಕೈಕ ಪ್ರತಿನಿಧಿಯಾಗಿ ಯು.ಟಿ.ಖಾದರ್ ಪುತ್ರಿ ಹವ್ವಾ ನಸೀಮಾ
ಹವ್ವಾ ನಸೀಮಾ
ದುಬೈ, ಅ. 31: ಇಲ್ಲಿ ನಡೆಯಲಿರುವ ಶೈಖಾ ಫಾತಿಮಾ ಬಿನ್ತ್ ಮುಬಾರಕ್ ಹೆಸರಿನ "ಅಂತರ್ ರಾಷ್ಟ್ರೀಯ ದುಬೈ ಹೋಲಿ ಕುರ್ ಆನ್ ಅವಾರ್ಡ್" ಸ್ಪರ್ಧೆಗೆ ಭಾರತದ ಏಕೈಕ ಪ್ರತಿನಿಧಿಯಾಗಿ ರಾಜ್ಯ ಸರಕಾರದ ನಗರಾಭಿವೃದ್ಧಿ, ವಸತಿ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರ ಪುತ್ರಿ ಹಾಫಿಝಾ ಹವ್ವಾ ನಸೀಮಾ ಆಯ್ಕೆಯಾಗಿದ್ದು, ನ. 4 ರಿಂದ 16ರ ತನಕ ಪವಿತ್ರ ಕುರ್ ಆನ್ ಸ್ಪರ್ಧೆಯು ದುಬೈಯ ಅಲ್ ಮಮ್ಝಾರ್ ಸೈಂಟಿಫಿಕ್ ಆ್ಯಂಡ್ ಕಲ್ಚರಲ್ ಅಸೋಸಿಯೇಶನ್ ನಲ್ಲಿ ನಡೆಯಲಿದೆ.
ಸ್ಪರ್ಧೆಗೆ ಪೂರ್ವಭಾವಿಯಾಗಿ ಆರು ತಿಂಗಳ ಕಾಲ ನಡೆದ ವಿವಿಧ ಪ್ರಕ್ರಿಯೆಗಳ ಬಳಿಕ ವಿಶ್ವದ 63 ಸ್ಪರ್ಧಾಳುಗಳ ಜೊತೆಗೆ ಭಾರತದಿಂದ ಹವ್ವಾ ಅವರನ್ನು ಯುಎಇ ಸರಕಾರ ಆಯ್ಕೆ ಮಾಡಿದೆ.
ಶೈಖಾ ಫಾತಿಮಾ ಬಿನ್ತ್ ಮುಬಾರಕ್ ಅವರು ಯುಎಇಯ ಸ್ಥಾಪಕ ಅಧ್ಯಕ್ಷ ಶೈಖ್ ಝಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಪತ್ನಿಯಾಗಿದ್ದು, "ಮದರ್ ಆಫ್ ಯುಎಇ" ಎಂಬ ಖ್ಯಾತಿ ಅವರಿಗಿದೆ. ಅವರ ಹೆಸರಲ್ಲಿ 2016 ನವಂಬರ್ ನಲ್ಲಿ ಪ್ರಾರಂಭವಾದ ಹೋಲಿ ಕುರ್ ಆನ್ ಅವಾರ್ಡ್ ಗೆ ವಿಶ್ವದ ನಾನಾ ದೇಶದ ಕುರ್ ಆನ್ ಕಂಠಪಾಠ ಮಾಡಿರುವ ಮಹಿಳಾ ಸ್ಪರ್ಧಾಳುಗಳು ಭಾಗವಹಿಸುತ್ತಾರೆ.
25 ವರ್ಷದೊಳಗಿನ ಮಹಿಳೆಯರಿಗೆ ಇದರಲ್ಲಿ ಅವಕಾಶವಿದೆ. ಪ್ರಥಮ ಬಹುಮಾನವಾಗಿ ಎರಡೂವರೆ ಲಕ್ಷ ದಿರ್ಹಮ್ (ಸುಮಾರು 50 ಲಕ್ಷ ರೂ.) ಮತ್ತು ಹೋಲಿ ಕುರ್ ಆನ್ ಪ್ರಶಸ್ತಿಯನ್ನು ಯುಎಇ ಸರಕಾರ ನೀಡುತ್ತದೆ. ಈ ವರ್ಷ 3ನೇ ಎಡಿಶನ್ ಆಗಿದ್ದು, 70 ರಾಷ್ಟ್ರಗಳ ಸ್ಪರ್ಧಾಳುಗಳು ಈಗಾಗಲೇ ಆಯ್ಕೆಯಾಗಿದ್ದಾರೆ. ಈ ಪೈಕಿ ಭಾರತದಿಂದ ಸಚಿವ ಯು.ಟಿ.ಖಾದರ್ ಮತ್ತು ಲಾಮಿಸ್ ದಂಪತಿ ಪುತ್ರಿ ಹಾಫಿಝಾ ಹವ್ವಾ ನಸೀಮಾ ಆಯ್ಕೆಯಾಗಿದ್ದಾರೆ.
ಹವ್ವಾ ನಸೀಮಾ ಹಾಗೂ ಯು.ಟಿ.ಖಾದರ್ ಅವರಿಗೆ ಈಗಾಗಲೇ ಯುಎಇ ಸರಕಾರ ವೀಸಾ ಹಾಗೂ ವಿಮಾನ ಟಿಕೆಟ್ ಕಳುಹಿಸಿಕೊಟ್ಟಿದ್ದು, ನ. 3 ರಂದು ಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣ ಮೂಲಕ ಹೊರಡಲಿದ್ದಾರೆ. ಅಲ್ಲಿನ ತಂಗುವ ವ್ಯವಸ್ಥೆ, ಊಟೋಪಚಾರ ಹಾಗೂ ಇನ್ನಿತರ ಖರ್ಚನ್ನು ಯುಎಇ ಸರಕಾರ ಭರಿಸಲಿದೆ.
ಹೋಲಿ ಕುರ್ ಆನ್ ಅವಾರ್ಡ್ ಕಾರ್ಯಕ್ರಮವನ್ನು ಯುಎಇ ಉಪಾಧ್ಯಕ್ಷರು ಹಾಗೂ ಪ್ರಧಾನ ಮಂತ್ರಿ ಶೈಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಖ್ತೂಮ್ ಪ್ರಾಯೋಜಿಸುವರು. ಕಾರ್ಯಕ್ರಮದ ನೇರಪ್ರಸಾರವು ದುಬೈ ಮಾಧ್ಯಮ ಕಂಪೆನಿಯ ಅರಬ್ ಸ್ಯಾಟ್ ಮತ್ತು ನೈಲ್ ಸ್ಯಾಟ್ ನಲ್ಲಿ ಹಾಗೂ ಇನ್ನಿತರ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರವಾಗಲಿದೆ.
ಸ್ಪರ್ಧಾಳುಗಳ ಸ್ವಾಗತಕ್ಕೆ ದುಬೈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತರಬೇತಿ ಪಡೆದ ಮಹಿಳಾ ಸ್ವಯಂ ಸೇವಕರನ್ನು ನೇಮಿಸಲಾಗಿದೆ ಎಂದು ದುಬೈ ಆಡಳಿತಾಧಿಕಾರಿಯ ಸಂಸ್ಕೃತಿ ಮತ್ತು ಮಾನವೀಯ ವ್ಯವಹಾರಗಳ ಸಲಹೆಗಾರರಾದ ಇಬ್ರಾಹಿಂ ಮುಹಮ್ಮದ್ ಬುಮೆಲ್ಹಾ ಅವರು ತಿಳಿಸಿದ್ದಾರೆ.
ಪುರುಷರ ಅಂತರ್ ರಾಷ್ಟ್ರೀಯ ಹೋಲಿ ಕುರ್ ಆನ್ ಸ್ಪರ್ಧೆಯು ದುಬೈಯಲ್ಲಿ ಕಳೆದ 23 ವರ್ಷಗಳಿಂದ ರಮಝಾನ್ ತಿಂಗಳಲ್ಲಿ ನಡೆಯುತ್ತಿದೆ. ಮಹಿಳೆಯರ ಸ್ಪರ್ಧೆ ಕಳೆದ 2 ವರ್ಷಗಳ ಹಿಂದೆ ಪ್ರಾರಂಭವಾಗಿದ್ದು, ಇದು 3ನೇ ಎಡಿಶನ್.
ಕೆಲ ವರ್ಷಗಳ ಹಿಂದೆ ಯು.ಟಿ.ಖಾದರ್ ದಂಪತಿ ಪವಿತ್ರ ಮಕ್ಕಾ ಯಾತ್ರೆ ತೆರಳಿದ್ದರು. ಈ ಸಂದರ್ಭ ಹವ್ವಾ ನಸೀಮಾ ಸಣ್ಣ ಬಾಲಕಿ. ಮಕ್ಕಾದಲ್ಲಿ ಕಅಬಾ ಆರಾಧನಾಲಯ ಸುತ್ತಾಟದ (ತವಾಫ್) ವೇಳೆ ಜನಜಂಗುಳಿ ಮಧ್ಯೆ ಪುತ್ರಿ ಹವ್ವಾ ನಸೀಮಾ ಪೋಷಕರ ಕೈತಪ್ಪಿ ಕಣ್ಮರೆಯಾದರು. ಇಡೀ ದಿನ ಹುಡುಕಾಡಿದರೂ ಸಿಗದೇ ಇದ್ದಾಗ ಯು.ಟಿ.ಖಾದರ್ ದಂಪತಿ ಕಅಬಾಲಯದಲ್ಲಿ ಪ್ರಾರ್ಥಿಸುತ್ತಾ ಕಣ್ಮರೆಯಾದ ಮಗಳು ಸಿಕ್ಕರೆ ಆಕೆಗೆ ಕುರ್ ಆನ್ ಕಂಠಪಾಠ ಮಾಡಿಸುವ ಹರಕೆ ಹೊತ್ತರು. ಇದಾದ ಕೆಲವೇ ಕ್ಷಣಗಳಲ್ಲಿ ಒಬ್ಬ ವಯಸ್ಕರೊಂದಿಗೆ ಹವ್ವಾ ಪ್ರತ್ಯಕ್ಷರಾದರು. ಈ ಘಟನೆ ನಡೆದ ನಂತರ ಹವ್ವಾ ನಸೀಮಾ ಅವರು ತನ್ನ ಶಾಲಾ ವಿದ್ಯಾಭ್ಯಾಸವನ್ನು ತಾತ್ಕಾಲಿಕವಾಗಿ ನಿಲ್ಲಿಸಿ 3 ವರ್ಷಗಳ ಪವಿತ್ರ ಕುರ್ ಆನ್ ಕಂಠ ಪಾಠಕ್ಕಾಗಿ ಕಾಸರಗೋಡಿನ ಅಡ್ಕತ್ತಬೈಲ್ ಹಾಗೂ ದೇರಳಕಟ್ಟೆಯ ಮದ್ರಸುತ್ತಿಬಿಯಾನ್ ಧಾರ್ಮಿಕ ವಿದ್ಯಾಸಂಸ್ಥೆಗೆ ಸೇರಿದರು.
ಅಲ್ಲಿ "ಹಾಫಿಝಾ" ಬಿರುದುದಾರಿಯಾಗಿ ಹೊರಬಂದರು. ಇನ್ನೂ ಹೆಚ್ಚಿನ ಧಾರ್ಮಿಕ ವಿದ್ಯೆಯೊಂದಿಗೆ ಶಾಲಾ ವಿದ್ಯಾಭ್ಯಾಸವನ್ನೂ ಮುಂದುವರೆಸುವ ಸಲುವಾಗಿ ಹವ್ವಾ ನಸೀಮಾ ಅವರು ಕಳೆದ ಎರಡು ವರ್ಷಗಳಿಂದ ಕೇರಳದ ಮಲಪ್ಪುರಂನಲ್ಲಿರುವ ಕಡಲುಂಡಿ ಖಲೀಲ್ ತಂಙಳ್ ಅವರ ನೇತೃತ್ವದ ಮಅದಿನ್ "ಕ್ಯೂಲ್ಯಾಂಡ್" ಸಂಸ್ಥೆಯಲ್ಲಿ ದಾಖಲಾಗಿದ್ದಾರೆ. ಪ್ರಸ್ತುತ ಅಲ್ಲಿ ಹೆಚ್ಚಿನ ವಿದ್ಯಾರ್ಜನೆ ಪಡೆಯುತ್ತಾ ಮಕ್ಕಳಿಗೆ ಕುರ್ ಆನ್ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದರ ಜೊತೆಗೆ ಹತ್ತಿರದ ಮಂಜೇರಿ ಸರಕಾರಿ ಪ್ರೌಢಶಾಲೆಯಲ್ಲಿ 9 ನೇ ತರಗತಿಯಲ್ಲಿ ಕಲಿಯುತಿದ್ದಾರೆ.