ಲಂಕಾ ಬಿಕ್ಕಟ್ಟು: ಸಂಸತ್ ಅಧಿವೇಶನ ಕರೆಯಲು ಸ್ಪೀಕರ್ ನಿರ್ಧಾರ
ಕೊಲಂಬೊ, ನ. 2: ಶ್ರೀಲಂಕಾದ ಸ್ಪೀಕರ್ ಕರು ಜಯಸೂರಿಯ ಶುಕ್ರವಾರ ಅಧ್ಯಕ್ಷರ ಆದೇಶವನ್ನು ಧಿಕ್ಕರಿಸಿ, ಹದಗೆಡುತ್ತಿರುವ ಸಾಂವಿಧಾನಿಕ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಮುಂದಿನ ವಾರ ಸಂಸದರ ಸಭೆಯೊಂದನ್ನು ಕರೆದಿದ್ದಾರೆ.
ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಶ್ರೀಲಂಕಾ ಸಂಸತ್ತನ್ನು ನವೆಂಬರ್ 16ರವರೆಗೆ ಅಮಾನತಿನಲ್ಲಿಟ್ಟಿರುವುದನ್ನು ಸ್ಮರಿಸಬಹುದಾಗಿದೆ.
‘‘ಸಂಸತ್ತಿನ ಕೋಣೆಯೊಂದರಲ್ಲಿ ಹೆಚ್ಚಿನ ಸಂಖ್ಯೆಯ ಸಂಸದರನ್ನು ಸ್ಪೀಕರ್ ಭೇಟಿಯಾದರು ಹಾಗೂ ನವೆಂಬರ್ 7ರಂದು ಸಂಸತ್ತನ್ನು ತೆರೆಯು ಭರವಸೆ ನೀಡಿದರು’’ ಎಂದು ಸ್ಪೀಕರ್ರ ವಕ್ತಾರರು ತಿಳಿಸಿದರು.
ಬಿಕ್ಕಟ್ಟನ್ನು ಕೊನೆಗೊಳಿಸಲು ಸಂಸತ್ತಿನ ಅಧಿವೇಶನ ಕರೆಯುವಂತೆ 118ಕ್ಕೂ ಹೆಚ್ಚಿನ ಸಂಸದರು ಒತ್ತಾಯಿಸಿದ್ದಾರೆ, ಹಾಗಾಗಿ, ನಾನು ಅವರ ಬೇಡಿಕೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಜಯಸೂರಿಯ ಹೇಳಿದ್ದಾರೆ.
ಶ್ರೀಲಂಕಾ ಸಂಸತ್ತು 225 ಸದಸ್ಯ ಬಲ ಹೊಂದಿದೆ.
‘‘ಅಧ್ಯಕ್ಷರ ಸೂಚನೆಗಳನ್ನು ನಿರ್ಲಕ್ಷಿಸುವಂತೆ ನೀವು ಸಲ್ಲಿಸಿರುವ ಮನವಿಯನ್ನು ನೋಡಿದ್ದೇನೆ. ಮಧ್ಯಪ್ರವೇಶಿಸಿ ಬಿಕ್ಕಟ್ಟನ್ನು ಕೊನೆಗೊಳಿಸುವಂತೆ ರಾಜತಾಂತ್ರಿಕರು ಮತ್ತು ನಾಗರಿಕ ಸಮಾಜದ ಗುಂಪುಗಳು ನನಗೆ ಮನವಿ ಮಾಡಿವೆ’’ ಎಂದು ಸ್ಪೀಕರ್ ನುಡಿದರು.