ಮಾಹಿತಿ ತಂತ್ರಜ್ಞಾನದ ಸದ್ಬಳಕೆ ಅಗತ್ಯ: ಸಭಾಪತಿ ಬಸವರಾಜ ಹೊರಟ್ಟಿ

ಬೆಂಗಳೂರು, ನ. 2: ಮಾಹಿತಿ ತಂತ್ರಜ್ಞಾನದ ಅವಶ್ಯಕತೆ ಮತ್ತು ಅದರಿಂದಾಗುವ ಪ್ರಯೋಜನವನ್ನು ಅರಿತು ಅದನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸಾಮಾನ್ಯ ಜನರಿಗೆ ಉತ್ತಮ ಸೇವೆ ಒದಗಿಸಲು ಎಲ್ಲರೂ ಆಸ್ಥೆ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಕರೆ ನೀಡಿದ್ದಾರೆ.
ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ವಿಧಾನ ಮಂಡಲದ ಎಲ್ಲ ಕಾರ್ಯಗಳನ್ನು ಗಣಕೀಕರಣ-ಕಾಗದ ರಹಿತದ ದಿಸೆಯಲ್ಲಿ ಕೇಂದ್ರ ಸರಕಾರದ ‘ಒನ್ ನೇಷನ್ ಒನ್ ಅಪ್ಲಿಕೇಷನ್’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮಾಹಿತಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಹೇಗೆ ಬಳಕೆ ಮಾಡಿಕೊಳ್ಳಬೇಕೆಂಬ ಬಗ್ಗೆ ಜನಪ್ರತಿನಿಧಿಗಳಿಗೆ ತರಬೇತಿ ನೀಡಲಾಗುವುದು ಎಂದರು.
ವಿಧಾನ ಮಂಡಲದ ಅಧಿಕಾರಿ-ನೌಕರರು ಈ ನೂತನ ಯೋಜನೆಯನ್ನು ಒಂದು ಮೈಲಿಗಲ್ಲಾಗಿ ಅಭಿವೃದ್ಧಿಗೊಳಿಸಬೇಕು. ಈ ಅಪ್ಲಿಕೇಶನಲ್ಲಿ ಅಪ್ಲೋಡ್ ಮಾಡುವ ಮಾಹಿತಿಗಳು ಕೂಡಲೇ ಸಾರ್ವಜನಿಕರಿಗೆ ಸಿಗುವಂತಾಗುವುದರಿಂದ ಇದೊಂದು ಅರ್ಥಗರ್ಭಿತ ಯೋಜನೆಯಾಗುವುದರಿಂದ ಈ ಯೋಜನೆಯನ್ನು ಜಾರಿಗೆ ತರುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಬಸವರಾಜ ಹೊರಟ್ಟಿ ಸಲಹೆ ನೀಡಿದರು.
ಅತ್ಯಂತ ಚಿಕ್ಕ ರಾಜ್ಯವಾದ ಹಿಮಾಚಲಪ್ರದೇಶ ಈ ನೂತನ ಯೋಜನೆ ಜಾರಿಗೊಳಿಸಿದ್ದು, ಕರ್ನಾಟಕದಂತಹ ಅತ್ಯಂತ ದೊಡ್ಡ ರಾಜ್ಯವೂ ಈ ಯೋಜನೆ ಜಾರಿಗೊಳಿಸುವ ಮೂಲಕ ಶಾಸಕಾಂಗವನ್ನು ಕಾಗದ ರಹಿತಗೊಳಿಸಬೇಕೆಂದು ಅವರು ಸೂಚಿಸಿದರು.
ಇ-ವಿಧಾನ್ ಯೋಜನೆಯನ್ನು ಹಿಮಾಚಲ ಪ್ರದೇಶ ರಾಜ್ಯದಲ್ಲಿ ಪ್ರಪ್ರಥಮವಾಗಿ ಜಾರಿಗೆತಂದಿದ್ದು, ಸದನದ ಕಾರ್ಯ ಕಲಾಪಗಳನ್ನು ಗಣಕೀಕರಣಗೊಳಿಸಿರುತ್ತದೆ. ಇದರಿಂದ ಪ್ರೇರಿತವಾದ ಕೇಂದ್ರ ಸಂಸದೀಯ ವ್ಯವಹಾರಗಳ ಮಂತ್ರಾಲಯವು ‘ಒನ್ ನೇಷನ್ ಒನ್ ಅಪ್ಲಿಕೇಷನ್’ ಎಂಬ ಶೀರ್ಷಿಕೆಯಡಿಯಲ್ಲಿ ಲೋಕಸಭಾ, ರಾಜ್ಯಸಭಾ, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಎಲ್ಲ ರಾಜ್ಯಗಳ ಶಾಸಕಾಂಗಗಳಲ್ಲಿ ರಾಷ್ಟ್ರೀಯ ಇ-ವಿಧಾನ್ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಿದೆ ಎಂದರು.
ವಿಧಾನಸಭೆ ಉಪ ಸಭಾಧ್ಯಕ್ಷ ಕೃಷ್ಣಾರೆಡ್ಡಿ ಮಾತನಾಡಿ, ಈ ನೂತನ ಯೋಜನೆ ಜಾರಿಗೆ ಬರುವುದರಿಂದ ಕಾಗದ ರಹಿತ ತಂತ್ರಾಂಶದಿಂದ ಕಾಗದ ಬಳಕೆ ಕಡಿಮೆಯಾಗಲಿದ್ದು, ಪರಿಸರ ಸಂರಕ್ಷಣೆಗೆ ಅನುಕೂಲವಾಗಲಿದೆ ಎಂದು ಇದೇ ವೇಳೆ ಹೇಳಿದರು.
ಆರಂಭಕ್ಕೆ ಈ ಯೋಜನೆ ಜಾರಿ ಕೊಂಚ ಕಷ್ಟ ಆಗಬಹುದು. ಆದರೆ, ನಂತರದ ದಿನಗಳಲ್ಲಿ ಇದು ಅತ್ಯಂತ ಸುಲಲಿತವಾಗಲಿದೆ ಎಂದ ಅವರು, ಇದನ್ನು ಜಾರಿಗೊಳಿಸುವುದರಿಂದ ಮುಂದಿನ ಪೀಳಿಗೆಗೆ ಅನುಕೂಲಕರ. ಇದೊಂದು ಹೆಮ್ಮೆಯ ತಂತ್ರಾಶ ಎಂದು ಇದೇ ವೇಳೆ ಶ್ಲಾಘಿಸಿದರು.
ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಕೇಂದ್ರ ಸಂಸದೀಯ ವ್ಯವಹಾರಗಳ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಡಾ. ಸತ್ಯಪ್ರಕಾಶ್, ಅಧೀನ ಕಾರ್ಯದರ್ಶಿಗಳಾದ ಮುಖೇಶ್ಕುಮಾರ್, ಸುಜೀತ್ಕುಮಾರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್ಎಸ್ ಪ್ರಸಾದ್, ಕಾರ್ಯದರ್ಶಿ ದ್ವಾರಕಾನಾಥ್ ಬಾಬು ಹಾಜರಿದ್ದರು.







