ಸರಯೂ ನದಿತಟದಲ್ಲಿ ಶ್ರೀರಾಮನ ಬೃಹತ್ ಪ್ರತಿಮೆ ಸ್ಥಾಪನೆ: ಬಿಜೆಪಿ ನಾಯಕ

ಲಕ್ನೋ,ನ.3: ಗುಜರಾತಿನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಬೃಹತ್ ಪ್ರತಿಮೆ ಸ್ಥಾಪನೆಗೊಂಡ ಬಳಿಕ ಅದಕ್ಕಾಗಿ ಆಗಿರುವ ಬೃಹತ್ ವೆಚ್ಚದ ಬಗ್ಗೆ ಟೀಕೆಗಳ ನಡುವೆಯೇ,ಅಯೋಧ್ಯೆಯ ಸರಯೂ ನದಿ ತೀರದಲ್ಲಿ ಶ್ರೀರಾಮನ ಬೃಹತ್ ಪ್ರತಿಮೆಯ ಸ್ಥಾಪನೆಗಾಗಿ ಯೋಜನೆಯು ಸಿದ್ಧಗೊಳ್ಳುತ್ತಿದೆ ಎಂದು ಉತ್ತರ ಪ್ರದೇಶದ ಬಿಜೆಪಿ ನಾಯಕರು ತಿಳಿಸಿದ್ದಾರೆ.
ಶನಿವಾರ ಇಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅಯೋಧ್ಯಾ ಮಹಾನಗರ ಪಾಲಿಕೆಯ ಮೇಯರ್ ರಿಷಿಕೇಶ ಉಪಾಧ್ಯಾಯ ಅವರು,ಸರಯೂ ನದಿ ತೀರದಲ್ಲಿ 151 ಮೀ.ಎತ್ತರದ ಶ್ರೀರಾಮನ ಪ್ರತಿಮೆಯನ್ನು ಸ್ಥಾಪಿಸುವ ಪ್ರಸ್ತಾವವಿದೆ. ಮುಖ್ಯಮಂತ್ರಿ ಆದಿತ್ಯನಾಥ್ ಅವರು ದೀಪಾವಳಿ ಸಂದರ್ಭದಲ್ಲಿ ಈ ಬಗ್ಗೆ ಪ್ರಕಟಿಸಬಹುದು ಎಂದು ತಿಳಿಸಿದರು.
ಮಣ್ಣಿನ ಪರೀಕ್ಷೆಯ ಬಳಿಕ ಪ್ರತಿಮೆ ಸ್ಥಾಪನೆಯ ಸ್ಥಳವನ್ನು ಅಂತಿಮಗೊಳಿಸಲಾಗುವುದು. ಪ್ರತಿಮೆಯು ಸಂತ ತುಲಸಿದಾಸ್ ಘಾಟ್ ಸಮೀಪ ತಲೆಯೆತ್ತುವ ಸಾಧ್ಯತೆಯಿದೆ. ಅಧಿಕಾರಿಗಳು 2-3 ನಿವೇಶನಗಳನ್ನು ಪರಿಶೀಲಿಸುತ್ತಿದ್ದಾರೆ ಎಂದರು. ಆದಿತ್ಯನಾಥರು ಗೋರಕ್ಷನಾಥ ಮಠದ ಪೀಠಾಧ್ಯಕ್ಷರು ಮತ್ತು ಸಂತರೂ ಆಗಿದ್ದಾರೆ, ಅವರು ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯ ಬಗ್ಗೆ ಯೋಜನೆಗಳನ್ನು ಹೊಂದಿರಬಹುದು. ದೀಪಾವಳಿಯ ಸಂದರ್ಭದಲ್ಲಿ ನಿಮಗೆ ಶುಭಸುದ್ದಿ ದೊರೆಯಲಿದೆ ಎಂದು ಉ.ಪ್ರ.ಬಿಜೆಪಿ ಅಧ್ಯಕ್ಷ ಮಹೇಂದ್ರನಾಥ ಪಾಂಡೆ ಅವರು ಸುದ್ದಿಗಾರರಿಗೆ ತಿಳಿಸಿದರು.







