ಸಹ್ಯಾದ್ರಿ ಕಾಲೇಜಿನಲ್ಲಿ ಸಿಂಚನ ಕಾರ್ಯಕ್ರಮ

ಮಂಗಳೂರು, ನ.4: ಕನ್ನಡ ನಾಡು ಒಂದು ಸಮ್ಮಿಶ್ರ ಸಂಸ್ಕೃತಿಯ ತಾಣವಾಗಿದೆ. ಕನ್ನಡಿಗರಲ್ಲಿ ಭಾಷಾ ಮಡಿವಂತಿಕೆ ಎಂಬುದು ಇಲ್ಲವೇ ಇಲ್ಲ. ಶಿಕ್ಷಣ, ಉದ್ಯೋಗ, ವ್ಯಾಪಾರ ಹೀಗೆ ಬೇರೆ ಬೇರೆ ಕಾರಣಗಳಿಂದ ಎಲ್ಲಾ ಪ್ರದೇಶದ, ಎಲ್ಲಾ ಭಾಷೆಯ ಜನರು ಇಲ್ಲಿ ನೆಲೆಸಿದ್ದಾರೆ. ಕನ್ನಡಿಗರದ್ದು ಸ್ವೀಕೃತ ಗುಣವಾದ ಕಾರಣ ಇತರರೊಂದಿಗೆ ಸೌಹಾರ್ದದಿಂದ ಬದುಕುವುದು ಅಭ್ಯಾಸವಾಗಿದೆ ಎಂದು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಹಾಗೂ ತುಳು ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ ವತಿಯಿಂದ ಅಡ್ಯಾರಿನ ಸಹ್ಯಾದ್ರಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಸಲುವಾಗಿ ಜರುಗಿದ ’ಸಿಂಚನ-2018’ ಸಾಂಸ್ಕೃತಿಕ ಸಂಭ್ರಮವನ್ನು ತುಳುನಾಡಿನ ತಾಸೆವಾದ್ಯವನ್ನು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾಭ್ಯಾಸದ ಎಲ್ಲಾ ಹಂತಗಳಲ್ಲೂ ಇಂಗ್ಲಿಷ್ ಅನಿವಾರ್ಯವಾಗಿದೆ. ಆದರೆ ಶಾಲಾ ಕಾಲೇಜುಗಳಲ್ಲಿ ನಡೆಯುವ ಪಠ್ಯೇತರ ಚಟುವಟಿಕೆಗಳಲ್ಲಿ ಕನಿಷ್ಠ ಕನ್ನಡ ನಾಡು- ನುಡಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿ ಸಮುದಾಯದಲ್ಲಿ ಕನ್ನಡ ಜಾಗೃತಿ ಮೂಡಿಸುವ ಅಗತ್ಯವಿದೆ ಭಾಸ್ಕರ ರೈ ಕುಕ್ಕುವಳ್ಳಿ ನಡಿದರು.
ಭಂಡಾರಿ ಫೌಂಡೇಶನ್ನ ಟ್ರಸ್ಟಿ ಜಗನ್ನಾಥ ಚೌಟ ಅಧ್ಯಕ್ಷತೆ ವಹಿಸಿದ್ದರು. ಕಲಾವಿಭಾಗದ ನವೀನ್ ಪಿಲಾರ್ ಮತ್ತು ಸಂಕೇತ್ ಯು. ಕುಮಾರ್ ಉಪಸ್ಥಿತರಿ ದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀನಿವಾಸ ರಾವ್ ಕುಂಟೆ ಸ್ವಾಗತಿಸಿದರು. ಉಪ ಪ್ರಾಂಶುಪಾಲ ಪ್ರೊ.ಎಸ್.ಎಸ್.ಬಾಲಕೃಷ್ಣ ವಂದಿಸಿದರು. ಪ್ರಾಧ್ಯಾಪಕಿ ಅಕ್ಷಯ ಆರ್.ಶೆಟ್ಟಿ ನಿರೂಪಿಸಿದರು.







