ಆವೆಮಣ್ಣಿನಲ್ಲಿ ವಿಶಿಷ್ಟ ಹಣತೆಯಲ್ಲಿ ದೀಪಾವಳಿ ಆಚರಣೆ

ಉಡುಪಿ, ನ.5: ಪರ್ಕಳ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ನ.6ರ ನರಕ ಚರ್ತುದಶಿಯಂದು ಸಂಜೆ 7 ಗಂಟೆಗೆ ಆವೆಮಣ್ಣಿ ನಲ್ಲಿ ರಚಿತವಾದ ವಿಶಿಷ್ಟ ಹಣತೆಯಿಂದ ದೀಪಾವಳಿ ಆಚರಣೆ ನಡೆಯಲಿದೆ.
ಈ ಹಣತೆಯಲ್ಲಿ ಅಂದಾಜು ಸುಮಾರು ಒಂದು ಡಬ್ಬಿ ಗಾತ್ರದ ಎಣ್ಣೆ ತುಂಬಿಸಲು ಅವಕಾಶವಿದ್ದು, ತಂದೆ ತಾಯಿ ಮಗನ ಕೈಗಳು ಹಣತೆಯನ್ನು ಎತ್ತಿ ಹಿಡಿಯುವಂತೆ ಹಾಗೂ ದೀಪದ ಕೆಳಗಡೆ ಆಮೆಯನ್ನು ರಚಿಸಲಾಗಿದೆ. ಆತ್ರಾಡಿಯ ಹಂಚಿನ ಕಾರ್ಖಾನೆಯಿಂದ ತರಲಾದ ಸುಮಾರು 16 ಹೆಂಚು ಗಳನ್ನು ತಯಾರಿಸುವ ಆವೆಮಣ್ಣನ್ನು ಉಪಯೋಗಿಸಿ ಈ ಹಣತೆಯನ್ನು ರಚಿಸ ಲಾಗಿದೆ. ಇದನ್ನು ಪರ್ಕಳದ ಸಣ್ಣಕ್ಕಿಬೆಟ್ಟುವಿನ ಕಲಾವಿದ ದೇವರಾಜ್ ನಾಯಕ್ ರಚಿಸಿದ್ದಾರೆ.
ಈ ಹಣತೆಯಲ್ಲಿ ದೀಪಾವಳಿ ಆಚರಣೆ ನಡೆಸುವುದರ ಜೊತೆಗೆ ಹಳೆ ಕಾಲದ ಬಿದಿರಿನಲ್ಲಿ ರಚಿತವಾದ ಪರಿಸರ ಸ್ನೇಹಿ ಬಿದಿರು ಪಟಾಕಿಯನ್ನು ಸಿಡಿಸಲಾಗು ವುದು. ಈ ಬಿದಿರು ಪಟಾಕಿಗೆ ಸತೀಶ ನಾಯ್ಕ ಕೋಡಿ ಬಿದಿರು ನೀಡಿದ್ದು ಈ ಬಿದಿರು ಪಟಾಕಿ ರಚನೆಯಲ್ಲಿ ಸ್ಥಳೀಯರು ಸಹಕರಿಸಿದ್ದಾರೆ. ಅಲ್ಲದೆ ಸರಳೇಬೆಟ್ಟು ವಿಜಯನಗರದ ಸತೀಶ್ ನಾಯ್ಕ ರಚಿಸಿರುವ ಬೃಹತ್ ಗೂಡುದೀಪ ಪ್ರದರ್ಶನ ನಡೆಯಲಿದೆ ಎಂದು ಕಾರ್ಯಕ್ರಮ ಸಂಘಟಕ ಗಣೀಶ್ರಾಜ್ ಸರಳೇಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





