ಕೂಡ್ಲು ಬ್ಯಾಂಕ್ ದರೋಡೆ ಪ್ರಕರಣ: ಇಬ್ಬರು ಆರೋಪಿಗಳಿಗೆ ನ್ಯಾಯಾಲಯದಿಂದ ಆರೆಸ್ಟ್ ವಾರಂಟ್

ಕಾಸರಗೋಡು, ನ.7: ಕೂಡ್ಲು ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ವಿಚಾರಣೆಗೆ ಹಾಜರಾಗದ ಇಬ್ಬರು ಆರೋಪಿಗಳಿಗೆ ಕಾಸರಗೋಡು ನ್ಯಾಯಾಲಯ ಆರೆಸ್ಟ್ ವಾರಂಟ್ ಹೊರಡಿಸಿದೆ.
ತಮಿಳುನಾಡು ಪಳನಿಯ ದಿಲ್ಸಾಂತ್ (24), ಸುಮಾ(35) ವಿರುದ್ಧ ವಾರಂಟ್ ಹೊರಡಿಸಲಾಗಿದೆ. ಇವರಿಬ್ಬರು ತಲೆಮರೆಸಿಕೊಂಡಿರುವುದರಿಂದ ಬಂಧಿಸಲು ಸಾಧ್ಯವಾಗಿಲ್ಲ ಎಂಬ ಪೊಲೀಸ್ ವರದಿ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧದ ವಿಚಾರಣೆ ಮುಂದೂಡಲಾಗಿದೆ .
ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇನ್ನೋರ್ವ ಆರೋಪಿ ಉಳಿಯತ್ತಡ್ಕದ ಹರ್ಷಾದ್ ಪುಳ್ಕೂರು(24) ವಾರದ ಹಿಂದೆ ನ್ಯಾಯಾಲಯಕ್ಕೆ ಶರಣಾಗಿದ್ದನು. ಹತ್ತಕ್ಕೂ ಅಧಿಕ ಆರೋಪಿಗಳು ಈ ಪ್ರಕರಣದಲ್ಲಿದ್ದಾರೆ.
2017ರ ಸೆಪ್ಟಂಬರ್ ಏಳರಂದು ಎರಿಯಾಲ್ ನಲ್ಲಿರುವ ಕೂಡ್ಲು ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ದರೋಡೆ ನಡೆದಿತ್ತು.
17.5 ಕಿಲೋ ಚಿನ್ನಾಭರಣ, 12 ಲಕ್ಷ ರೂ. ನಗದನ್ನು ದರೋಡೆ ಮಾಡಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಈಗ ನ್ಯಾಯಾಂಗ ಬಂಧನ ಹಾಗೂ ಜಾಮೀನಿನಲ್ಲಿ ಬಿಡುಗಡೆಗೊಂಡಿರುವ ಆರೋಪಿಗಳು ನವಂಬರ್ 14ರಂದು ಹಾಜರಾಗುವಂತೆ ನ್ಯಾಯಾಲಯ ಆದೇಶ ನೀಡಿದೆ.





