57 ಕೆಜಿ ಚಿನ್ನ ಪಡೆದ ಆರೋಪ: ಜನಾರ್ದನ ರೆಡ್ಡಿ ಬಂಧನಕ್ಕೆ ಶೋಧ

ಬೆಂಗಳೂರು, ನ.7: ಅ್ಯಂಬಿಡೆಂಟ್ ಮಾರ್ಕೆಟಿಂಗ್ ಪ್ರೈ. ಲಿಮಿಟೆಡ್ ಕಂಪೆನಿ ವಿರುದ್ಧ ಜಾರಿ ನಿರ್ದೇಶನಾಲಯದಲ್ಲಿ(ಇಡಿ) ದಾಖಲಾಗಿದ್ದ ಪ್ರಕರಣದಲ್ಲಿ ಸಹಕರಿಸಲು ಬರೋಬ್ಬರಿ 57 ಕೆಜಿ ಚಿನ್ನ ಪಡೆದಿರುವ ಆರೋಪ ಪ್ರಕರಣ ಸಂಬಂಧ ಮಾಜಿ ಸಚಿವ ಜನಾರ್ದನ ರೆಡ್ಡಿ ಬಂಧನಕ್ಕೆ ಸಿಸಿಬಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಬೆಂಗಳೂರು, ಬಳ್ಳಾರಿ, ಹೈದರಾಬಾದ್ ಸೇರಿದಂತೆ ನಾನಾ ಕಡೆ ಸಿಸಿಬಿ ತನಿಖಾಧಿಕಾರಿಗಳು, ಜನಾರ್ದನ ರೆಡ್ಡಿ ಅನ್ನು ವಶಕ್ಕೆ ಪಡೆಯಲು ಶೋಧ ಕಾರ್ಯ ಮುಂದುವರೆಸಿದ್ದಾರೆ. ಬೆಂಗಳೂರಿನ ಪಾರಿಜಾತ ಅಪಾರ್ಟ್ಮೆಂಟ್ನ ಜನಾರ್ದನ ರೆಡ್ಡಿ ನಿವಾಸದ ಬಾಗಿಲು ತೆರೆದು ಒಳನುಗ್ಗಿದ ತನಿಖಾಧಿಕಾರಿಗಳು, ಸಿಸಿ ಟಿವಿಯ ದೃಶ್ಯಗಳ ಕಡತ ಸೇರಿದಂತೆ ಇನ್ನಿತರೆ ದಾಖಲಾತಿಗಳನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಬೆಂಗಳೂರಿನ ಕನಕನಗರದ ವ್ಯಾಪ್ತಿಯಲ್ಲಿ ಅ್ಯಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೈಟ್ ಲಿಮಿಟೆಡ್ ಎಂಬ ಸಂಸ್ಥೆಯನ್ನು ಸೈಯದ್ ಅಹ್ಮದ್ ಫರೀದ್ ಎಂಬಾತ ನಡೆಸುತ್ತಿದ್ದು, ಈತ ಸಾರ್ವಜನಿಕರಿಗೆ 4 ತಿಂಗಳ ಅವಧಿಗೆ ಶೇಕಡ 40 ರಿಂದ 50ರಷ್ಟು ಬಡ್ಡಿ ಹಣ ನೀಡುವುದಾಗಿ ನಂಬಿಸಿ 15 ಸಾವಿರ ಜನರಿಂದ ಬರೋಬ್ಬರಿ 600 ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ್ದ ಎಂದರು. ಈತನಿಂದ ವಂಚನೆಗೊಳಗಾದವರ ಪೈಕಿ ಸರ್ಫರಾಜ್ ಆಲಂ ತಬ್ರೇಝ್ ಎಂಬುವರು ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ವಂಚನೆ ಆರೋಪದಡಿ ದೂರು ನೀಡಿದ್ದರು. ಈ ಗಂಭೀರ ಪ್ರಕರಣದ ತನಿಖೆ ಅನ್ನು ಸಿಸಿಬಿಗೆ ವಹಿಸಲಾಗಿತ್ತು.
ತನಿಖೆ ಕೈಗೊಂಡು, ಆರೋಪಿ ಸೈಯದ್ ಅಹ್ಮದ್ ಫರೀದ್ ಅನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಈತ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣವನ್ನು ಸಂಗ್ರಹಿಸಿ ಹಲವಾರು ಜನರ ಬಳಿ ಹೂಡಿಕೆ ಮಾಡಿರುವುದು ಮತ್ತು ಅಕ್ರಮ ಹಣಕಾಸಿನ ವ್ಯವಹಾರದಲ್ಲಿ ತೊಡಗಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
ಬಹುಕೋಟಿ ಹಗರಣ ಬೆಳಕಿಗೆ ಬಂದ ಹಿನ್ನೆಲೆ, ಕಚೇರಿ ಮತ್ತು ಮನೆಗಳ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ದಾಳಿ ನಡೆಸಿ, ಆರೋಪಿ ಸೈಯದ್ ಅಹ್ಮದ್ ಫರೀದ್ ಬ್ಯಾಂಕ್ನ ಹಣಕಾಸಿನ ವ್ಯವಹಾರಗಳನ್ನು ಸ್ಥಗಿತ ಮಾಡಿದ್ದರು ಎಂದು ಆಯುಕ್ತರು ಹೇಳಿದರು.
ಬಂಧನ: ಮಾಹಿತಿ ಆಧಾರದ ಮೇಲೆ ಬಳ್ಳಾರಿಯ ರಾಜ್ಮಹಲ್ ಫ್ಯಾನ್ಸಿ ಜುವೆಲರ್ಸ್ನ ರಮೇಶ್ ಎಂಬಾತನನ್ನು ಬಂಧಿಸಿ ಮಹತ್ವದ ದಾಖಲಾತಿಗಳನ್ನು ಜಪ್ತಿ ಮಾಡಲಾಗಿದ್ದು, ಈ ಪ್ರಕರಣದ ತನಿಖೆಯನ್ನು ಸಿಸಿಬಿ ಅಪರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಡಿಸಿಪಿ ಗಿರೀಶ್ ಎಸ್. ಅವರ ನೇರ ಮಾರ್ಗದರ್ಶನದಲ್ಲಿ ಡಾ.ಎಚ್.ಎನ್.ವೆಂಕಟೇಶ ಪ್ರಸನ್ನ ನೇತೃತ್ವದ ತಂಡ ತನಿಖೆ ಮುಂದುವರೆಸಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.
ರೆಡ್ಡಿ ಪತ್ತೆಗೆ ನಾಲ್ಕು ವಿಶೇಷ ತಂಡ
ಅಕ್ರಮ ವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪದಡಿ ಮಾಜಿ ಸಚಿವ ಜನಾದರ್ನರೆಡ್ಡಿ ಪತ್ತೆ ಕಾರ್ಯ ಮುಂದುವರೆದಿದ್ದು, ಇದಕ್ಕಾಗಿ ಸಿಸಿಬಿ ಘಟಕದ ಎಸಿಪಿಗಳಾದ ಪಿ.ಟಿ.ಸುಬ್ರಮಣ್ಯ, ಮರಿಯಪ್ಪ, ಮೋಹನ್ಕುಮಾರ್, ಮಂಜುನಾಥ ಚೌಧರಿ ನೇತೃತ್ವದ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ.
-ಟಿ.ಸುನೀಲ್ ಕುಮಾರ್, ನಗರ ಪೊಲೀಸ್ ಆಯುಕ್ತಸತ್ಯಕ್ಕೆ ಹತ್ತಿರ ರೆಡ್ಡಿ ಪ್ರಕರಣ
ಆರೋಪಿಗಳ ಸಹಾಯಕ್ಕೆ ಜನಾರ್ದನ ರೆಡ್ಡಿ ಮುಂದಾಗಿದ್ದು, ಅದರಂತೆ ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಭೇಟಿಯಾಗಿ, ಹಣ ಪಡೆದುಕೊಂಡಿರುವ ಬಗ್ಗೆ ಆರೋಪಿ ಸೈಯದ್ ಅಹ್ಮದ್ ಫರೀದ್ ತಿಳಿಸಿರುವುದು ಸತ್ಯಕ್ಕೆ ಹತ್ತಿರವಾಗಿದೆ. ಈಗಾಗಲೇ ಖಾಸಗಿ ಹೊಟೇಲ್ ತಾಜ್ ವೆಸ್ಟ್ ಎಂಡ್ನಲ್ಲಿ ಪಂಚನಾಮೆ ಆಗಿದೆ. ಆಲಿಖಾನ್ ಹೇಳಿದ ದಿನಾಂಕದಲ್ಲಿ ಜನಾರ್ದನ ರೆಡ್ಡಿ ಹೊಟೇಲಿನಲ್ಲಿ ಹಾಜರಿದ್ದ ಸಂಗತಿ ದಾಖಲೆ ಸಮೇತ ನಿಜವಾಗಿದೆ.-ಅಲೋಕ್ ಕುಮಾರ್, ಅಪರ ಪೊಲೀಸ್ ಆಯುಕ್ತ
ಸಿಸಿಬಿ ಮಾಧ್ಯಮದವರ ಮೇಲೆ ದಬ್ಬಾಳಿಕೆ?
ಆರ್ಟಿ ನಗರದಲ್ಲಿರುವ ಜನಾರ್ದನ ರೆಡ್ಡಿ ಆಪ್ತ ಆಲಿಖಾನ್ ನಿವಾಸದಲ್ಲಿ ಸಿಸಿಬಿ ತನಿಖಾಧಿಕಾರಿಗಳು ದಾಖಲಾತಿಗಳ ಶೋಧ ನಡೆಸುತ್ತಿದ್ದ ವೇಳೆ ಚಿತ್ರೀಕರಣಕ್ಕೆ ತೆರಳಿದ್ದ ಸುದ್ದಿ ವಾಹಿನಿಗಳ ಪತ್ರಿನಿಧಿಗಳ ಮೇಲೆ ಆಲಿಖಾನ್ ತಂದೆ ದಬ್ಬಾಳಿಕೆ ಮಾಡಿದ್ದಲ್ಲದೆ, ಕ್ಯಾಮೆರಾ ಕಸಿದುಕೊಳ್ಳಲು ಯತ್ನಿಸಿದರು ಎಂದು ವರದಿಯಾಗಿದೆ.
ಹೈದಾರಬಾದ್ನಲ್ಲಿ ಜನಾರ್ದನ ರೆಡ್ಡಿ?
ಪ್ರಕರಣ ಬೆಳಕಿಗೆ ಬಂದ ಬೆನ್ನಲೇ ತಲೆಮರೆಸಿಕೊಂಡಿದ್ದಾರೆ ಎನ್ನಲಾದ ಮಾಜಿ ಸಚಿವ ಜನಾರ್ದನ ರೆಡ್ಡಿ, ನೆರೆ ರಾಜ್ಯ ತೆಲಂಗಾಣ ರಾಜಧಾನಿ ಹೈದರಾಬಾದ್ನ ಉದ್ಯಮಿ ಪರ್ವತ್ ಅವರೊಂದಿಗೆ ನೆಲೆಸಿದ್ದಾರೆ ಎಂದು ಹೇಳಲಾಗುತ್ತಿದ್ದು, ತನಿಖಾ ತಂಡ ಹೈದಾರಬಾದ್ಗೆ ದೌಡಾಯಿಸಿದೆ ಎನ್ನಲಾಗಿದೆ.
ಇಡಿ ಅಧಿಕಾರಿಗೆ ಕೋಟಿ ನೀಡಿದ್ದ ರೆಡ್ಡಿ?
ಮಾರ್ಚ್ನಲ್ಲಿ ತಾಜ್ ವೆಸ್ಟೆಂಡ್ನ ಹೊಟೇಲ್ನಲ್ಲಿ ಇಡಿ ಅಧಿಕಾರಿಯೊಬ್ಬರನ್ನು ಜನಾರ್ದನ ರೆಡ್ಡಿ ಭೇಟಿಯಾಗಿ ಡೀಲ್ ಬಗ್ಗೆ ಮಾತುಕತೆ ನಡೆಸಿದ್ದು, ಮುಂಗಡವಾಗಿ ಹಣ ನೀಡಿದ್ದರು ಎನ್ನಲಾಗಿದೆ. ರೆಡ್ಡಿ ಹಣವನ್ನು ಬ್ಲಾಕ್ ಮನಿಯಾಗಿ ನೀಡುವಂತೆ ಬೇಡಿಕೆ ಇಟ್ಟಿದ್ದರೂ, ಅ್ಯಂಬಿಂಡೆಟ್ ಕಂಪೆನಿ ಮಾಲಕ ಸೈಯದ್ ಅಹ್ಮದ್ ಫರೀದ್ ಮಾತ್ರ ವೈಟ್ ಹಣವಾಗೇ ನೀಡಿದ್ದರು. ಹಾಗಾಗಿ, ಜನಾರ್ದನ ರೆಡ್ಡಿ ಅದನ್ನು ಎನೇಬಲ್ ಕಂಪೆನಿಗೆ ಆರ್ಟಿಜಿಎಸ್ ಮಾಡಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.







