ನಮ್ಮನ್ನು ಜೈಲಿಗೆ ಹಾಕಿದರೂ ಹೆದರುವುದಿಲ್ಲ: ಸಂಸದ ಡಿ.ಕೆ.ಸುರೇಶ್

ಬೆಂಗಳೂರು, ನ.7: ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ ಹಾಗೂ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು, ಪ್ರತಿಪಕ್ಷಗಳನ್ನು ಬೆದರಿಸುವ ಕೆಲಸಕ್ಕೆ ಕೈ ಹಾಕಿದೆ ಎಂದು ಕಾಂಗ್ರೆಸ್ ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದಲ್ಲಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಬಿಜೆಪಿಯ ಶ್ರೀರಾಮುಲು ಈ ಹಿಂದೆ 'ಜೆ.ಶಾಂತಾ ಸಂಸತ್ತಿಗೆ, ಸಚಿವ ಡಿ.ಕೆ.ಶಿವಕುಮಾರ್ ಜೈಲಿಗೆ' ಎಂದು ಹೇಳಿಕೆ ನೀಡಿದ್ದರು. ಈಗ ನ.7ರಂದು ಅವರ ಹೇಳಿಕೆ ನಿಜವಾಗುತ್ತಿದೆ ಎಂದರು.
ಜಾರಿ ನಿರ್ದೇಶನಾಲಯವು ನಮ್ಮ ವಿರುದ್ಧ ಸೆಕ್ಷನ್ 120 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸುವುದಾಗಿ ಶ್ರೀರಾಮುಲು ನೀಡಿದ್ದ ಹೇಳಿಕೆ ಅವರ ಬಾಯಿಂದ ಬಂದದ್ದಲ್ಲ. ಅವರ ಕೇಂದ್ರದ ನಾಯಕರ ಹೇಳಿಕೆ ಅದಾಗಿತ್ತು ಎಂದು ಸುರೇಶ್ ಆರೋಪಿಸಿದರು.
ವಿರೋಧ ಪಕ್ಷದಲ್ಲಿ ಪ್ರಬಲರಾಗಿರುವವರ ಮೇಲೆ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯವನ್ನು ಬಳಕೆ ಮಾಡಿ ಒತ್ತಡ ಹೇರಲಾಗುತ್ತಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಎನ್ಡಿಎ ಸಖ್ಯ ತೊರೆದು ಹೊರಗೆ ಬರುತ್ತಿದ್ದಂತೆ ಅವರ ಪಕ್ಷದ ಸಂಸದರ ಮನೆ ಮೇಲೆ ದಾಳಿ ಮಾಡಿಸಿದ್ದಾರೆ ಎಂದು ಅವರು ಟೀಕಿಸಿದರು.
ಸಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡು ಪ್ರಬಲರನ್ನು ಬಗ್ಗು ಬಡಿಯುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಮೇಲೂ ಅವರ ಕಣ್ಣು ಬಿದ್ದಿದೆ. ಅವರನ್ನು ಜೈಲಿಗೆ ಕಳುಹಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಸುರೇಶ್ ವಾಗ್ದಾಳಿ ನಡೆಸಿದರು.
ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ. ಒಂದು ರಾಜಕೀಯ ಪಕ್ಷದ ಆದೇಶದ ಮೇಲೆ ಐಟಿ, ಇಡಿ, ಸಿಬಿಐ ಅಧಿಕಾರಿಗಳು ಕೆಲಸ ಮಾಡುವುದು ಸರಿಯಲ್ಲ. ಪ್ರಧಾನಿ ನರೇಂದ್ರಮೋದಿ ಭೇಟಿಗೆ ಅವಕಾಶ ಕೋರಿದ್ದೆವು. ಆದರೂ, ನಮಗೆ ಅವಕಾಶ ಸಿಕ್ಕಿಲ್ಲ. ನಮ್ಮ ವಿರುದ್ಧ ಇಲ್ಲಸಲ್ಲದ ಪ್ರಕರಣಗಳನ್ನು ಹಾಕುವುದನ್ನು ಬಿಡಬೇಕು ಎಂದು ಸುರೇಶ್ ಒತ್ತಾಯಿಸಿದರು.
ಅಧಿಕಾರಿಗಳು ಕಾನೂನಿನ ಚೌಕಟ್ಟಿನಡಿ ಕೆಲಸ ಮಾಡಬೇಕು. ಯಾವುದೋ ಒಂದು ಪಕ್ಷದ ಪರ ಕೆಲಸ ಮಾಡುವುದು ಸರಿಯಲ್ಲ. ಈ ಸಂಬಂಧ ಮನವಿ ಸಲ್ಲಿಸಲು ಜಾರಿ ನಿರ್ದೇಶನಾಲಯದ ನಿದೇರ್ಶಕರ ಭೇಟಿಗೆ ಅವಕಾಶ ಕೇಳಿದ್ದೆವು. ಆದರೆ, ಒಂದೂವರೆ ತಿಂಗಳಾದರೂ ಅವಕಾಶ ಸಿಕ್ಕಿಲ್ಲ ಎಂದು ಅವರು ಹೇಳಿದರು.
ನಾವು ಕಾಂಗ್ರೆಸ್ ಪಕ್ಷದ ಕಟ್ಟಾಳುಗಳು, ನಾವು ಯಾವ ಬೆದರಿಕೆಗಳಿಗೂ ಮಣಿಯಲ್ಲ. ಬೇಕಾದರೆ ಅವರು ನಮ್ಮನ್ನು ಜೈಲಿಗೆ ಹಾಕಲಿ, ಚಿಂತೆಯಿಲ್ಲ. ನಮಗೆ ಯಾವ ಭಯವೂ ಇಲ್ಲ. ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ಮಾಡುತ್ತೇವೆ ಎಂದು ಸುರೇಶ್ ತಿಳಿಸಿದರು.
ಸಂಸದ ಧ್ರುವ ನಾರಾಯಣ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಶಾಸಕರ ಮೇಲೆ ಐಟಿ ದಾಳಿಯಾಗಿದೆ. ನಮ್ಮ ರಾಜ್ಯದಲ್ಲೂ ಸಾಕಷ್ಟು ದಾಳಿಗಳು ನಡೆದಿವೆ. ಇಷ್ಟೇ ಅಲ್ಲದೇ, ಬೇರೆ ಬೇರೆ ರಾಜ್ಯಗಳಲ್ಲೂ ದಾಳಿಗಳು ನಡೆದಿವೆ. ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳನ್ನು ಹಣಿಯಲು ಮುಂದಾಗಿದ್ದಾರೆ ಎಂದು ದೂರಿದರು.
ನಮ್ಮ ರಾಜ್ಯದಲ್ಲಿ ಡಿ.ಕೆ.ಸಹೋದರರನ್ನು ಹಣಿಯಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಇದೊಂದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾದ ನಡೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಆದರೆ, ಕಾನೂನುಗಳನ್ನು ಮೀರಿ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವುದು ಸರಿಯಲ್ಲ ಎಂದು ಅವರು ಹೇಳಿದರು.
ಇದೊಂದು ಗಂಭೀರವಾದ ಅಪರಾಧವಾಗಿದ್ದು, ಬಿಜೆಪಿ ನಾಯಕರು ಈ ಕೆಟ್ಟ ಪರಂಪರೆ ಬಿಡಬೇಕು. ಆಂಧ್ರಪ್ರದೇಶ, ತೆಲಂಗಾಣ, ದಿಲ್ಲಿಯಲ್ಲೂ ದಾಳಿಗಳು ನಡೆಯುತ್ತಿವೆ. ಇದೇ ರೀತಿ ಪ್ರತಿಪಕ್ಷಗಳ ಮುಖಂಡರ ಮೇಲೆ ದಾಳಿಗಳು ಮುಂದುವರೆದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಧ್ರುವನಾರಾಯಣ್ ಎಚ್ಚರಿಕೆ ನೀಡಿದರು.
ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಮಾತನಾಡಿ, ಸಾಂವಿಧಾನಿಕ ಸಂಸ್ಥೆಗಳನ್ನು ಕೇಂದ್ರ ಸರಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ. ನಾಯಕರನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದ್ದಾರೆ. ಒಂದು ಅವರ ಪರವಾಗಿ ಹೋಗಬೇಕು. ಇಲ್ಲವೇ ಜೈಲಿಗೆ ಹೋಗಬೇಕು. ಇದು ಬಿಜೆಪಿ ನಾಯಕರ ಕುತಂತ್ರ ಎಂದು ದೂರಿದರು.
ಐಟಿ, ಇಡಿ, ಸಿಬಿಐ, ಚುನಾವಣಾ ಆಯೋಗವನ್ನು ಉಪ ಚುನಾವಣೆಯಲ್ಲೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಇನ್ನು ಸಾರ್ವತ್ರಿಕ ಚುನಾವಣೆಯಲ್ಲಿ ಯಾವ ರೀತಿ ಕೆಲಸ ಮಾಡಬಹುದು ಎಂದು ಚಂದ್ರಶೇಖರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದ ಚಂದ್ರಪ್ಪ, ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಉಪಸ್ಥಿತರಿದ್ದರು.







