ಸಂಸದ ನಳಿನ್ ಕೀಳುಮಟ್ಟದ ಹೇಳಿಕೆ: ಜೆಡಿಎಸ್ ಖಂಡನೆ
ಮಂಗಳೂರು, ನ.9: ‘ರಾಜ್ಯದ ಮುಖ್ಯಮಂತ್ರಿ ಗಂಡಸು ಅಲ್ಲ, ಹೆಂಗಸೂ ಅಲ್ಲ’ ಎಂದು ಕೀಳಾಗಿ ಪ್ರತಿಕ್ರಿಯಿಸುವುದರ ಮೂಲಕ ದ.ಕ. ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ತಮ್ಮ ಕೀಳುಮಟ್ಟದ ಸಂಸ್ಕೃತಿಯನ್ನು ಪ್ರದರ್ಶಿಸಿರುವುದು ಖಂಡನೀಯ ಎಂದು ದ.ಕ. ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ್ ಅಕ್ಷಿತ್ ಸುವರ್ಣ ತಿಳಿಸಿದ್ದಾರೆ.
ಟಿಪ್ಪು ಜಯಂತಿ ಆಚರಣೆಯನ್ನು ಹಿಂದಿನ ಕಾಂಗ್ರೆಸ್ ನೇತೃತ್ವದ ಸರಕಾರ ಆರಂಭಿಸಿದ್ದಾಗಲೂ ಕೂಡ ಮುಖ್ಯಮಂತ್ರಿ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿರಲಿಲ್ಲ. ಹಿಂದಿನ ಸರಕಾರ ಆರಂಭಿಸಿದ ಸರಕಾರಿ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗುವ ಕೆಲಸವನ್ನು ಈಗಿನ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರ ಮಾಡುತ್ತಿದ್ದು, ಇದೊಂದು ಸಂಪೂರ್ಣ ಸರಕಾರಿ ಕಾರ್ಯಕ್ರಮವಾಗಿದೆ ಎಂದರು.
ಬಿಜೆಪಿಯ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಅಶೋಕ್ ಟಿಪ್ಪು ವೇಷ ಹಾಗೂ ಕತ್ತಿ ಹಿಡಿದು ಸಂಭ್ರಮಿಸಿದಾಗ ನಳಿನ್ಕುಮಾರ್ ಕಟೀಲ್ ಅವರು ಎಲ್ಲಿ ಹೋಗಿದ್ದರು ? ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಆರೋಗ್ಯ ಸಮಸ್ಯೆಯ ಕಾರಣದಿಂದಾಗಿ ಮಾತ್ರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ವಾದರೂ ತಮ್ಮ ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದಾರೆ. ಬಿಜೆಪಿ ಸಂಸದರು ಅದನ್ನೇ ವಿಷಯವಾಗಿಸಿಕೊಂಡು ಕೀಳುಮಟ್ಟದಲ್ಲಿ ಓರ್ವ ರಾಜ್ಯದ ಮುಖ್ಯಮಂತ್ರಿಯನ್ನು ಅವಹೇಳನ ಮಾಡಿರುವುದು ಖಂಡನೀಯ ಎಂದರು.
ಕಳೆದ ಎರಡು ಅವಧಿಗಳಲ್ಲಿ ಜಿಲ್ಲೆಯ ಸಂಸದರಾಗಿ ತಮ್ಮ ಕ್ಷೇತ್ರಕ್ಕೆ ಯಾವುದೇ ರೀತಿಯ ಕೊಡುಗೆ ತೋರದ ಸಂಸದ ನಳಿನ್ಕುಮಾರ್ ಜಿಲ್ಲೆಗೆ ಬೆಂಕಿ ಇಡುವ ಕೆಲಸವನ್ನು ಮಾಡ ಹೊರಟವರಿಂದ ಯಾವುದೇ ಪಾಠ ಕಲಿಯುವ ಅಗತ್ಯ ಮುಖ್ಯಮಂತ್ರಿ ಕುಮಾರಸ್ವಾಮಿಗಿಲ್ಲ ಎಂದು ಹೇಳಿದರು.
ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯನ್ನು ಹಲವು ವರ್ಷಗಳಾದರೂ ಕೊನೆಗೊಳಿಸುವ ಕನಿಷ್ಠ ಕೆಲಸ ಸಂಸದರಿಂದ ಸಾಧ್ಯವಾಗಿಲ್ಲ. ಮೊದಲು ಸಂಸದರು ಇಂತಹ ಕೆಲಸಗಳನ್ನು ಸರಿಯಾದ ಸಮಯದಲ್ಲಿ ಮಾಡಿ ಮುಗಿಸುವುದರ ಮೂಲಕ ತಮ್ಮ ಗಂಡಸ್ತನವನ್ನು ಪ್ರದರ್ಶಿಸಬೇಕೇ ಹೊರತು, ಇಂತಹ ಕೀಳುಮಟ್ಟದ ರಾಜಕೀಯ ಹೇಳಿಕೆ ನೀಡುವುದರ ಮೂಲಕ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ಸಂಸದರಾಗಿ ಜಿಲ್ಲೆಗೆ ಯಾವುದೇ ಕೊಡುಗೆ ನೀಡದ ನಳಿನ್ಕುಮಾರ್ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯಿಂದ ಕಲಿಯಲು ಹಲವು ವಿಚಾರಗಳಿವೆ. ಸದಾ ರಾಜ್ಯದ ಬಡ ರೈತರ ಬಗ್ಗೆ ಹಾಗೂ ನೊಂದವರ ಬಗ್ಗೆ ಕಾಳಜಿ ಹೊಂದಿರುವ ಕುಮಾರಸ್ವಾಮಿಯ ವಿರುದ್ಧ ಇಂತಹ ಹೇಳಿಕೆ ನೀಡಿರುವ ಸಂಸದ ನಳಿನ್ಕುಮಾರ್ ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಲೇಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅವರ ವಿರುದ್ಧ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುವುದು ಎಂದು ಅಕ್ಷಿತ್ ಸುವರ್ಣ ಪ್ರಕಟನೆಯಲ್ಲಿ ಎಚ್ಚರಿಸಿದ್ದಾರೆ.







