ನಿರ್ವಹಣೆ ಇಲ್ಲದೆ ಸೊರಗುತ್ತಿರುವ ಮಣಿಪಾಲ ಟ್ರೀ ಪಾರ್ಕ್

ಉಡುಪಿ, ನ.12: ಮಣಿಪಾಲ ಸಮೀಪದ 80ಬಡಗಬೆಟ್ಟು ಗ್ರಾಪಂ ವ್ಯಾಪ್ತಿಯ ಮೀಸಲು ಅರಣ್ಯದಲ್ಲಿ ನಿರ್ಮಿಸಲಾಗಿರುವ ಜಿಲ್ಲೆಯ ಮೊದಲ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನ(ಟ್ರೀ ಪಾರ್ಕ್) ಉದ್ಘಾಟನೆಗೊಂಡ ಒಂಭತ್ತೆ ತಿಂಗಳಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿದೆ.
ಅರಣ್ಯ ಇಲಾಖೆ ಕುಂದಾಪುರ ವಿಭಾಗ ಉಡುಪಿ ವಲಯದ ವತಿಯಿಂದ ಸುಮಾರು ಆರು ಎಕರೆ ಪ್ರದೇಶದಲ್ಲಿ 1.25ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸ ಲಾದ ಈ ಉದ್ಯಾನವನವನ್ನು ಈ ವರ್ಷದ ಫೆ.24ರಂದು ಆಗಿನ ಅರಣ್ಯ ಸಚಿವ ರಮಾನಾಥ ರೈ ಉದ್ಘಾಟಿಸಿದ್ದರು.
ಇಲ್ಲಿ ಹಿರಿಯರು, ಕಿರಿಯರು ಹಾಗೂ ಮಹಿಳೆಯರು ಸೇರಿದಂತೆ ಎಲ್ಲ ವರ್ಗದವರಿಗೆ ಅನುಕೂಲಕರವಾಗುವ ರೀತಿಯಲ್ಲಿ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ವಾಕಿಂಗ್ ಟ್ರಾಕ್, ಪರಿಸರ ಹಾಗೂ ವಿವಿಧ ಬಗೆಯ ವೃಕ್ಷ, ಔಷಧ ಸಸ್ಯ, ಪ್ರಾಣಿ, ಸರಿಸೃಪ, ಚಿಟ್ಟೆ, ಪಕ್ಷಿಗಳ ಸಂಪೂರ್ಣ ಮಾಹಿತಿ ಹೊಂದಿರುವ ಫಲಕ ಗಳನ್ನು ಆಳವಡಿಸಲಾಗಿದೆ. ಮರದ ಹಟ್, ಜೋಕಾಲಿ, ಕರಾವಳಿಯ ಕಲೆಯನ್ನು ಬಿಂಬಿಸುವ ಯಕ್ಷಗಾನ, ಹುಲಿ ಕುಣಿತ, ಭೂತಕೋಲ, ತಟ್ಟಿರಾಯ, ಕಂಬಳ, ಎತ್ತಿನಗಾಡಿಗಳ ಕಲಾಕೃತಿಗಳನ್ನು ಇಲ್ಲಿ ನಿರ್ಮಿಸಲಾಗಿದೆ.
ಅಲ್ಲದೆ ಶೌಚಾಲಯ, ಬಾತ್ರೂಂ, ಕುಡಿಯುವ ನೀರಿನ ಪೂರೈಕೆ, ಕ್ಯಾಂಟಿನ್ ಸೌಲಭ್ಯಗಳನ್ನು ಕೂಡ ಒದಗಿಸಲಾಗಿದೆ. ಇದರ ಸಂಪೂರ್ಣ ಜವಾ ಬ್ದಾರಿ ವಹಿಸಿಕೊಂಡಿರುವ ಅರಣ್ಯ ಇಲಾಖೆ ಈ ಪಾರ್ಕ್ಗೆ ಪ್ರವೇಶ ಶುಲ್ಕವಾಗಿ ಮಕ್ಕಳಿಂದ ಐದು ರೂ. ಹಾಗೂ ಹಿರಿಯರಿಂದ 10ರೂ. ಸಂಗ್ರಹಿಸುತ್ತಿದೆ. ಸಂಪೂರ್ಣ ಮರಗಳಿಂದ ಕೂಡಿದ ಬಹು ಆಕರ್ಷಣೀಯವಾಗಿರುವ ಈ ಟ್ರೀ ಪಾರ್ಕ್ಗೆ ಆಗಮಿಸುವ ಸಾರ್ವಜನಿಕರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.
ಸರಿಯಾದ ನಿರ್ವಹಣೆ ಇಲ್ಲದೆ ಪಾರ್ಕ್ನಲ್ಲಿರುವ ಕೆಲವೊಂದು ಸೌಲಭ್ಯಗಳು ಹಾಗೂ ಮಕ್ಕಳ ಪಾರ್ಕ್ನಲ್ಲಿರುವ ಕೆಲವೊಂದು ಸಾಮಾಗ್ರಿಗಳು ಪಾಳು ಬೀಳುವಂತಾಗಿದೆ ಎಂಬುದು ಸಾರ್ವಜನಿಕರ ಆರೋಪ.
ಮಕ್ಕಳಿಗೆ ನಿರ್ಮಿಸಲಾದ ಅಡ್ವೆಂಚರ್ ಪಾರ್ಕ್ನಲ್ಲಿರುವ ರೋಪ್ಗಳು, ಟಯರ್ಗಳು, ಮರದ ವೀಲ್ ಟ್ರಾಕ್ಗಳು ಉದ್ಘಾಟನೆಗೊಂಡ ಕೇವಲ ಒಂಭತ್ತೇ ತಿಂಗಳಲ್ಲಿ ಮುರಿದು ಬಿದ್ದಿವೆ. ಇದರಲ್ಲಿ ಮಕ್ಕಳು ಆಡುವುದು ಕೂಡ ಅಪಾಯಕಾರಿ ಎನಿಸಿದೆ. ಅದೇ ರೀತಿ ಚಿಟ್ಟೆಯ ಮಾಹಿತಿ ಕುರಿತು ಅಳವಡಿಸಲಾದ ಮರದ ಕಲಾ ಕೃತಿಗಳು ಕಿತ್ತು ಕೆಳಗೆ ಬಿದ್ದಿವೆ. ಇದನ್ನು ಮತ್ತೆ ಜೋಡಿಸಿ ಇಡುವ ಕೆಲಸ ಕೂಡ ಈವರೆಗೆ ನಡೆದಿಲ್ಲ. ಈ ಹಿಂದೆ ಹುಲಿ ಕುಣಿತ ಕಲಾಕೃತಿಯೊಂದು ಮುರಿದು ಬಿದ್ದಿದ್ದು, ಅದನ್ನು ಮತ್ತೆ ಜೋಡಿಸಲಾಗಿದೆ. ಇದೇ ರೀತಿ ಇಲ್ಲಿರುವ ಹಲವು ಕಲಾಕೃತಿಗಳಿಗೆ ಹಾನಿಯಾಗಿದ್ದು, ಅದನ್ನು ಕೂಡಲೇ ದುರಸ್ತಿಗೊಳಿಸಬೇಕು ಎಂಬುದು ಪ್ರವಾಸಿಗರ ಒತ್ತಾಯ. ಇಲ್ಲಿರುವ ಶೌಚಾಲಯಗಳಲ್ಲಿ ಶುಚಿತ್ವವೇ ಇಲ್ಲವಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಆರಂಭಿಸಲಾದ ಕ್ಯಾಂಟೀನ್ ಈವರೆಗೆ ತೆರೆದಿಲ್ಲ. ಇದರಿಂದ ಬಾಟಲಿ ನೀರಿಗೂ ಪರದಾಡುವ ಸ್ಥಿತಿ ಇಲ್ಲಿದೆ.
ಎರಡನೆ ಹಂತದ ಕಾಮಗಾರಿ ಆರಂಭ
ಟ್ರೀ ಪಾರ್ಕ್ನಲ್ಲಿ ಮತ್ತಷ್ಟು ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಎರಡನೆ ಹಂತದ ಕಾಮಗಾರಿಯನ್ನು ಡಿಸೆಂಬರ್ ತಿಂಗಳೊಳಗೆ ಪೂರ್ಣಗೊಳಿಸಲು ಅರಣ್ಯ ಇಲಾಖೆ ಉದ್ದೇಶಿಸಿದೆ.
ಎರಡನೆ ಹಂತದಲ್ಲಿ ಮರದಿಂದ ಮರಕ್ಕೆ ಹೋಗುವ ರೋಪ್ ಅಡ್ವೆಂಚರ್, ನೈಸರ್ಗಿಕವಾದ ಜಲಪಾತವನ್ನು ನಿರ್ಮಿಸಲಾಗುತ್ತದೆ. ಅಲ್ಲದೆ ದೇಶದ ರಾಷ್ಟ್ರೀಯ ಹಾಗೂ ರಾಜ್ಯ ಪ್ರಾಣಿ ಮತ್ತು ಪಕ್ಷಿಗಳ ಕುರಿತ ಮಾಹಿತಿಗಳ ಫಲಕಗಳನ್ನು ಅಳವಡಿಸಲಾಗುತ್ತದೆ ಎಂದು ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಢ್ ಲೋಬೊ ತಿಳಿಸಿದ್ದಾರೆ.
ಟ್ರೀ ಪಾರ್ಕ್ ನಿರ್ಮಾಣದ ನಂತರ ಈ ಬಾರಿಯ ಮಳೆಗಾಲ ಪ್ರಥಮ ವಾಗಿದ್ದು, ಮಳೆಯಿಂದ ಯಾವುದೆಲ್ಲ ಪರಿಕರಗಳಿಗೆ ಹಾನಿಯಾಗಿವೆ ಎಂಬು ದನ್ನು ಗಮನಿಸಲಾಗಿದೆ. ಮುಂದೆ ಮಳೆಗಾಲದಲ್ಲಿ ಅವುಗಳನ್ನು ಪ್ಲಾಸ್ಟಿಕ್ ಮೂಲಕ ಮುಚ್ಚಿ ಇಡುವ ಕಾರ್ಯ ಮಾಡಲಾಗುವುದು. ಈಗಾಗಲೇ ಹಾಳಾ ಗಿರುವ ಮಕ್ಕಳ ಆಟ ಪರಿಕರ ಹಾಗೂ ಮಾಹಿತಿ ಫಲಕಗಳನ್ನು ದುರಸ್ತಿ ಮಾಡುವ ಕೆಲಸ ಮಾಡಲಾಗುತ್ತಿದೆ.
-ಕ್ಲಿಫರ್ಡ್ ಲೋಬೊ, ಅರಣ್ಯಾಧಿಕಾರಿ, ಉಡುಪಿ ವಲಯ
ಮಕ್ಕಳಿಗೆ ಆಡಲು ಹಾಗೂ ಹಿರಿಯರಿಗೆ ವಿಹರಿಸಲು, ನಡೆದಾಡಲು ಅನುಕೂಲಕರವಾದ ಈ ಟ್ರೀ ಪಾರ್ಕಿನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕಾಗಿದೆ. ಮಕ್ಕಳ ಆಟದ ಪಾರ್ಕ್ನ ಸಾಮಾಗ್ರಿಗಳು ಕಿತ್ತುಹೋಗಿದ್ದು, ಕೂಡಲೇ ದುರಸ್ತಿ ಮಾಡಬೇಕು. ಅಲ್ಲದೆ ಶೌಚಾಲಯದಲ್ಲಿ ಶುಚಿತ್ವ ಕಾಪಾಡ ಬೇಕು. ಇಲ್ಲಿನ ಅಕೇಶಿಯಾ ಮರಗಳ ಬದಲು ಬೇರೆ ಮರಗಳನ್ನು ನೆಡಬೇಕು. ಇನ್ನಷ್ಟು ಅಭಿವೃದ್ಧಿ ಕಾರ್ಯಗಳೊಂದಿಗೆ ಪಾರ್ಕನ್ನು ಆಕರ್ಷಣೀಯವಾಗಿ ಮಾಡಬೇಕು.
-ಸವಿತಾ ಮಣಿಪಾಲ







