ಎಂ. ಸ್ಯಾಂಡ್ ಹೆಸರಿನಲ್ಲಿ ಕೃಷಿ ಭೂಮಿ ಬರಡು: ರೈತ ಮುಖಂಡ ಆರೋಪ
ಬಂಟ್ವಾಳ, ನ. 12: ಪುಣಚ ಗ್ರಾಮದ ಮೂಡಂಬೈಲು ಗೊಳಿತ್ತಡಿ ಎಂಬಲ್ಲಿ ಕೃಷಿ ಭೂಮಿಯನ್ನು ಎಂ. ಸ್ಯಾಂಡ್ ಹೆಸರಿನಲ್ಲಿ ಬರಡು ಮಾಡುವ ಕಾರ್ಯ ನಡೆಯುತ್ತಿದೆ. ಕಳೆದ 6 ತಿಂಗಳಿಂದ ಕಾರ್ಯಾಚರಿಸುತ್ತಿರುವ ಕಲ್ಲಿನ ಕೋರೆಯಲ್ಲಿ ಅಳವಡಿಸಲಾದ ಯಂತ್ರಗಳ ಶಬ್ದ ಹಾಗೂ ಕಲ್ಲಿನ ಹುಡಿಯಿಂದ ಆಸುಪಾಸಿನ ಮನೆಯವರು ವಾಸಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯ ನಿವಾಸಿ ರೈತ ಮುಖಂಡ ಮಹಾಬಲ ಶೆಟ್ಟಿ ಆರೋಪಿಸಿದ್ದಾರೆ.
ಅವರು ಸೋಮವಾರ ವಿಟ್ಲ ಪ್ರೆಸ್ಕ್ಲಬ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಳೆಗಾಲದಲ್ಲಿ ಆರಂಭವಾದ ಘಟಕದಲ್ಲಿ ಅಷ್ಟೊಂದು ಧೂಳು ಇರಲಿಲ್ಲವಾದರೂ, ಸದ್ಯ ತೀವ್ರವಾದ ರೀತಿಯಲ್ಲಿ ಹೊರ ಹೊಮ್ಮುತ್ತಿದೆ. ಇದರಿಂದ ಸುತ್ತಮುತ್ತಲ ಕೃಷಿ ಭೂಮಿಯಲ್ಲಿ ಸೂಕ್ತ ರೀತಿಯಲ್ಲಿ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಅದಲ್ಲದೆ, ಸ್ಥಳೀಯ ನಿವಾಸಿಗಳು ಅಸ್ತಮಾ, ಕೆಮ್ಮು, ಶೀತ ಸಹಿತ ಬೇರೆ ಬೇರೆ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಕಗ್ಗಲ್ಲಿನ ಕೋರೆಯನ್ನು ನಿಷೇಧಿಸುವಂತೆ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತ, ತಹಸೀಲ್ದಾರ್, ಭೂ ಮತ್ತು ಗಣಿ ಇಲಾಖೆ, ಸ್ಥಳೀಯ ಪಂಚಾಯತ್ ಆಡಳಿತಕ್ಕೆ ಮನವಿಯನ್ನು ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ವಿಟ್ಲ ತಾಲೂಕು ಸಮಿತಿ ಕಾರ್ಯದರ್ಶಿ ಸುದೇಶ್ ಭಂಡಾರಿ, ರೈತ ಮುಖಂಡರಾದ ಶ್ರೀನಿವಾಸ ರೈ, ಪದ್ಮನಾಭ ಎಂ., ಚಂದ್ರಹಾಸ ರೈ, ಮುಹಮ್ಮದ್ ಶರೀಫ್ ಮತ್ತಿತರರು ಉಪಸ್ಥಿತರಿದ್ದರು.