ರಾಮಮಂದಿರ ನಿರ್ಮಾಣಕ್ಕೆ ತುರ್ತು ಮಸೂದೆ ಮಂಡನೆಯಾಗಲಿ: ಪಲಿಮಾರು ಶ್ರೀ
ಉಡುಪಿ, ನ.14: ರಾಮಮಂದಿರ ನಿರ್ಮಾಣ ಕುರಿತಂತೆ ಸಂಸತ್ತಿನಲ್ಲಿ ತುರ್ತು ಮಸೂದೆ ಮಂಡನೆಯಾಗಬೇಕು ಮತ್ತು ಕಾನೂನಿನ ಮೂಲಕವೇ ಮಂದಿರ ನಿರ್ಮಾಣ ಮಾಡಬೇಕು ಎಂದು ಪರ್ಯಾಯ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸ್ವಾಮೀಜಿ, ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ರಾಮಮಂದಿರ ನಿರ್ಮಾಣ ಮಾಡ ಬೇಕೆಂದು ಒತ್ತಾಯ ಮಾಡುತ್ತೇನೆ. ಜನರ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಅಯೋಧ್ಯೆಯ ರಾಮಮಂದಿರ ದೇಗುಲ ಜೀರ್ಣೋದ್ಧಾರದ ಅಪೇಕ್ಷೆ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಯಾರ ವಿವಾದ ಇಲ್ಲದಿರುವ ಈ ಜಾಗದಲ್ಲಿ ಎಲ್ಲ ಹಿಂದೂಗಳು ತಮ್ಮ ಅನಿಸಿಕೆಗಳನ್ನು ಸರಕಾರಕ್ಕೆ ಮುಟ್ಟಿಸುವ ಮೂಲಕ ರಾಮಮಂದಿರ ನಿರ್ಮಾಣ ಸಾಧ್ಯ ಎಂದರು.
ನಮ್ಮದು ಪ್ರಜಾಪ್ರಭುತ್ವ ಸರಕಾರ. ಇಲ್ಲಿ ಪ್ರಜೆಗಳೇ ಪ್ರಭುಗಳು. ದೇಶವನ್ನು ಆಳುವವರು ಕೂಡ ಪ್ರಜೆಗಳೇ. ಹೀಗಾಗಿ ಜನರ ಮನಸ್ಸಿನಲ್ಲಿ ಏನಿದೆಯೋ ಅದನ್ನು ಸಂಸತ್ತಿನಲ್ಲಿ ಮಂಡನೆಯಾಗಬೇಕು. ಸಂಸತ್ತಿಗೆ ಮುಟ್ಟಿಸಬೇಕಾದರೆ ಸಹಿ ಅಭಿಯಾನ ಆಗಲೇಬೇಕು ಎಂದು ಸ್ವಾಮೀಜಿ ತಿಳಿಸಿದರು.