ನ.19: ಬೀಡಿ ಕಾರ್ಮಿಕರ ಪ್ರತಿಭಟನೆ
ಉಡುಪಿ, ನ.14: ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಷನ್, ಸಿಐಟಿಯು ಮತ್ತು ಉಡುಪಿ ತಾಲೂಕು ಬೀಡಿ ಲೇಬರ್ ಯೂನಿಯನ್ ಎಐಟಿಯುಸಿ ಜಂಟಿಯಾಗಿ ನ.19ರ ಸೋಮವಾರ ಬೆಳಗ್ಗೆ 10:30ಕ್ಕೆ ಕಲ್ಯಾಣಪುರ ಸಂತೆಕಟ್ಟೆಯ ಗಣೇಶ್ ಬೀಡಿ ಡಿಪೋ ಎದುರು ಬೀಡಿ ಕಾರ್ಮಿಕರ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ಕಳೆದ ಎಪ್ರಿಲ್ ಒಂದರಿಂದ ಒಂದು ಸಾವಿರ ಬೀಡಿಗೆ ನೀಡಬೇಕಿದ್ದ ರೂ.210 ಕನಿಷ್ಠ ಕೂಲಿಯನ್ನು ಬೀಡಿ ಕಂಪೆನಿಗಳ ಮಾಲಕರು ಈವರೆಗೂ ನೀಡಿಲ್ಲ. ಅಲ್ಲದೇ 2015ರ ತುಟ್ಟಿಭತ್ಯೆ ಒಂದು ಸಾವಿರ ಬೀಡಿಗೆ ರೂ.12.75ನ್ನು ಸಹ ನೀಡದೇ ಮಾಲಕರು ಬೀಡಿ ಕಾರ್ಮಿಕರಿಗೆ ವಂಚನೆ ಮಾಡಿದ್ದಾರೆ ಎಂದು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಷನ್ನ ಕಾರ್ಯದರ್ಶಿ ಉಮೇಶ್ ಕುಂದರ್ ಹಾಗೂ ಎಸ್.ಕೆ.ಬೀಡಿ ಫೆಡರೇಷನ್ ಜಿಲ್ಲಾಧ್ಯಕ್ಷ ಕೆ.ವಿ.ಭಟ್ ತಿಳಿಸಿದ್ದಾರೆ.
ಆದುದರಿಂದ ಬೀಡಿ ಕಾರ್ಮಿಕರಿಗೆ ಸಿಗಬೇಕಿರುವ ಕನಿಷ್ಠ ಕೂಲಿ ಹಾಗೂ ತುಟ್ಟಿಭತ್ಯೆಯನ್ನು ಕೂಡಲೇ ನೀಡುವಂತೆ ಒತ್ತಾಯಿಸಿ ನ.19ರಂದು ಬೆಳಗ್ಗೆ 10ಕ್ಕೆ ಸಂತೆಕಟ್ಟೆಯಿಂದ ಬೀಡಿ ಕಾರ್ಮಿಕರು ಮೆರವಣಿಗೆಯಲ್ಲಿ ಸಾಗಿ ಗಣೇಶ್ ಬೀಡಿ ಡಿಪೋದ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.