ಕಣಚೂರು ಆಸ್ಪತ್ರೆಯಲ್ಲಿ ಮಕ್ಕಳ ದಿನಾಚರಣೆ
ಕೊಣಾಜೆ, ನ.15: ಮಕ್ಕಳ ಆರೋಗ್ಯದ ಕಾಳಜಿಯಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದ್ದು, ಬಾಲ್ಯದಿಂದಲೇ ಮಕ್ಕಳಲ್ಲಿ ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದಾಗ ಸಮಾಜಕ್ಕೆ ಆರೋಗ್ಯಯುತ ಯುವ ಪೀಳಿಗೆಯನ್ನು ಬೆಳೆಸಲು ಸಾಧ್ಯ ಎಂದು ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಅಬ್ದುಲ್ ರಹ್ಮಾನ್ ಅಭಿಪ್ರಾಯಪಟ್ಟರು.
ಕಣಚೂರು ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಮಕ್ಕಳ ಚಿಕಿತ್ಸಾ ವಿಭಾಗ ಮತ್ತು ಕಣಚೂರು ಕಾಲೇಜ್ ಆಫ್ ನರ್ಸಿಂಗ್ ಸಾಯನ್ಸಸ್ ವಿಭಾಗದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ನೂರುಲ್ಲಾ ಮಾಹಿತಿ ನೀಡಿ ಮಕ್ಕಳಿಗೆ ಸ್ವಚ್ಛತೆಯ ಪಾಠ ಅಗತ್ಯ. ಮುಖ್ಯವಾಗಿ ಮಕ್ಕಳು ಆಟವಾಡುವಾಗ ಮತ್ತು ಆಹಾರ ಸೇವನೆಯ ಸಂದರ್ಭದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಹೆತ್ತವರು ಮಾರ್ಗದರ್ಶನ ನೀಡಬೇಕು ಎಂದರು.
ಕಣಚೂರು ಮೆಡಿಕಲ್ ಕಾಲೇಜಿನ ಡೀನ್ ಡಾ ವಿರೂಪಾಕ್ಷ ಅಧ್ಯಕ್ಷತೆ ವಹಿಸಿದ್ದರು. ವೈದ್ಯಕೀಯ ಅಧೀಕ್ಷಕ ಡಾ ದೇವಿಪ್ರಸಾದ್ ಶೆಟ್ಟಿ, ಮುಖ್ಯ ಆಡಳಿತಾಧಿಕಾರಿ ಡಾ ರೋಹನ್ ಮೋನಿಸ್ , ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಕರ್ನಲ್ ಡಾ ಕಿರಣ್ ಕೆ.ಜಿ., ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ ಅಶೋಕ್ ನಾಯಕ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಶಾಂತಿ ಲೋಬೊ ಉಪಸ್ಥಿತರಿದ್ದರು.
ನರ್ಸಿಂಗ್ ಕಾಲೇಜಿನ ಉಪನ್ಯಾಸಕಿ ಮಾಲತಿ ಕೆ.ಸ್ವಾಗತಿಸಿದರು.