ಆಳ್ವಾಸ್ನಲ್ಲಿ ವಿಜ್ಞಾನಸಿರಿ-2018 ಕಾರ್ಯಕ್ರಮ
ಮೂಡುಬಿದಿರೆ, ನ.15: ಆಳ್ವಾಸ್ ನುಡಿಸಿರಿ ವತಿಯಿಂದ ನಡೆಯುವ ದ್ವಿತೀಯ ವರ್ಷದ ಆಳ್ವಾಸ್ ವಿಜ್ಞಾನ ಸಿರಿ 2018 ಕಾರ್ಯಕ್ರಮವನ್ನು ಡಾ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಖ್ಯಾತ ಬಹುಭಾಷಾ ನಟಿ ವಿನಯ ಪ್ರಸಾದ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಯುವಜನರಲ್ಲಿ ವೈಜ್ಞಾನಿಕ ಅರಿವು, ವಿಜ್ಞಾನದ ಆಗುಹೋಗುಗಳ ಮೇಲೆ ಒಲವು ಬೆಳೆಸುವ ಉದ್ದೇಶದಿಂದ ಆಳ್ವಾಸ್ ವಿಜ್ಞಾನಸಿರಿಯಲ್ಲಿ ಮಾರ್ಸೋ ಒರ್ಬಿಟರ್, ಐ.ಆರ್.ಎನ್.ಸ್.ಸ್. 1ಎ, ಆಸ್ಟ್ರೋ, ಐ.ಎನ್.ಎಸ್.ಎ.ಟಿ 3ಡಿ, ಐ.ಎಸ್.ಎ.ಟಿ. 4ಎ, ಪಿ.ಎಸ್.ಎಲ್.ವಿ., ಜಿ.ಎಸ್.ಎಲ್.ವಿ.ಎಮ್.ಕೆ. 11 ಹೀಗೆ ಹಲವು ಉಪಗ್ರಹಗಳ ಮಾದರಿಯನ್ನು ಪ್ರದರ್ಶಶಿಸಲಾಯಿತು.
ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿವಿಧ ಉಪಗ್ರಹ ಮಾದರಿಗಳು, ಬೆಂಗಳೂರು ನೆಹರು ತಾರಾಲಯದ ವಿಶೇಷ ಮಾದರಿಗಳು, ಆಕಾಶ ವೀಕ್ಷಣೆಗೆ ಸಿದ್ಧಗೊಂಡಿರುವ ದೂರದರ್ಶಕ, ಮಾನವ ಶರೀರ ರಚನೆಯನ್ನು ಅರ್ಥಮಾಡಿಕೊಳ್ಳುವ ಮಾದರಿಗಳು, ವಿವಿಧ ಕೃಷಿ ಉಪಕರಣಗಳ ಪ್ರದರ್ಶನ, ಸಾವಯವ ಕೃಷಿಯ ಕುರಿತು ಮಾಹಿತಿ ಮತ್ತು ಪ್ರದರ್ಶನ, ಜೀವವಿಜ್ಞಾನ ಮತ್ತು ರಾಸಾಯನಿಕ ವಿಜ್ಞಾನ ವಿವಿಧ ಮಾದರಿಗಳು, ಮೂಲಭೂತ ವಿಜ್ಞಾನ ಸಿದ್ಧಾಂತಗಳನ್ನು ಅರ್ಥಮಾಡಿಕೊಳ್ಳುವ ಅಗಸ್ತ್ಯ ಫೌಂಡೇಶನ್ನ ವತಿಯಿಂದ ರೂಪಿತವಾದ ಮಾದರಿಗಳನ್ನು ಪ್ರದರ್ಶನದಲ್ಲಿ ಮುಖ್ಯವಾಗಿವೆ. ಬೆಳುವಾಯಿಯ ಸಮ್ಮಿಲನ ಶೆಟ್ಟಿಯವರ ಚಿಟ್ಟೆ ಪಾರ್ಕ್ ಕೂಡ ಪ್ರದರ್ಶನದಲ್ಲಿದೆ. ಖ್ಯಾತ ವಿಜ್ಞಾನಿಗಳೊಂದಿಗೆ ಸಂವಾದ ನಡೆಸುವ ಅವಕಾಶವಿದ್ದು ಶಾಲಾ ಕಾಲೇಜು ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಈ ಮೇಳದಲ್ಲಿ ಭಾಗವಹಿಸುತ್ತಿದ್ದಾರೆ.
ಉದ್ಘಾಟನಾ ಸಮಾರಂಭದ ತರುವಾಯ ವಿವಿಧ ಸಂಸ್ಥೆಗಳ ಕಿರಿಯ ಮತ್ತು ಹಿರಿಯ ವಿಭಾಗದವರಿಗೆ ವಿಜ್ಞಾನ ಮಾದರಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕಿರಿಯರ ವಿಭಾಗದಲ್ಲಿ 75, ಪದವಿ ವಿಭಾಗದಲ್ಲಿ 15, ತಾಂತ್ರಿಕ ಕಾಲೇಜು ವಿಭಾಗದಲ್ಲಿ 35 ಸಂಸ್ಥೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಜೇತರಿಗೆ ಆಳ್ವಾಸ್ ನುಡಿಸಿರಿಯ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಆಳ್ವಾಸ್ ಸಂಸ್ಥೆ ತಿಳಿಸಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಮಧುಸೂಧನ್, ಇಸ್ರೋ ವಿಜ್ಞಾನಿಗಳಾದ ಶ್ರೀನಿವಾಸ್, ಡಾ. ರಾಮಚಂದ್ರ, ಡಾ. ಇಸ್ರೊದ ಸಾರ್ವಜನಿಕ ಸಂಪರ್ಕಾಧಿಕಾರಿ ಗುರುಪ್ರಸಾದ್, ಬಸವರಾಜ್ ಡಿ.ಆರ್.ಡಿ.ಒ., ಡಾ. ಗೋಪಿಕೃಷ್ಣಾ ಡಿ.ಆರ್.ಡಿ.ಒ., ಡಾ. ಪ್ರಮೋದ್ ಬೆಳ್ರಂಗಡಿ ಉಪಸ್ಥಿತರಿದ್ದರು.