ಕಸಬ್ ವಿಚಾರಣಾ ತಂಡದಲ್ಲಿದ್ದ ಆಸಿಫ್ ಮುಲಾನಿ ಆತನಿಗೆ ಹೇಳಿದ್ದೇನು ?
![ಕಸಬ್ ವಿಚಾರಣಾ ತಂಡದಲ್ಲಿದ್ದ ಆಸಿಫ್ ಮುಲಾನಿ ಆತನಿಗೆ ಹೇಳಿದ್ದೇನು ? ಕಸಬ್ ವಿಚಾರಣಾ ತಂಡದಲ್ಲಿದ್ದ ಆಸಿಫ್ ಮುಲಾನಿ ಆತನಿಗೆ ಹೇಳಿದ್ದೇನು ?](https://www.varthabharati.in/sites/default/files/images/articles/2018/11/17/163564.jpg)
ಆಸಿಫ್ ಮುಲಾನಿ (ಚಿತ್ರ ಕೃಪೆ : HT)
ಮುಂಬೈ,ನ.17 : ಮುಂಬೈಯ ಮಾಜಿ ಪೊಲೀಸ್ ಕಮಾಂಡೊ, ಈಗ ಮಹಾರಾಷ್ಟ್ರ ರಾಜ್ಯ ಪೊಲೀಸ್ ಗೃಹ ನಿಗಮದ ಸೇವೆಯಲ್ಲಿರುವ ಆಸಿಫ್ ಮುಲಾನಿ ಮುಂಬೈ ದಾಳಿ ಪ್ರಕರಣಲ್ಲಿ ಸೆರೆ ಹಿಡಿಯಲ್ಪಟ್ಟಿದ್ದ ಹಾಗೂ ನಂತರ ಗಲ್ಲಿಗೇರಿಸಲ್ಪಟ್ಟಿದ್ದ ಉಗ್ರ ಅಜ್ಮಲ್ ಕಸಬ್ ವಿಚಾರಣಾ ತಂಡದಲ್ಲಿದ್ದವರಲ್ಲದೆ ನಂತರ ಕಸಬ್ ಜೈಲಿನಲ್ಲಿರುವಾಗ ಆತನ ಮೇಲೆ ಕಣ್ಗಾವಲು ಇಡುವ ತಂಡದಲ್ಲೂ ಇದ್ದವರು.
"ನಾವೆಲ್ಲರೂ ದಿನದ 24 ಗಂಟೆ ಕರ್ತವ್ಯದಲ್ಲಿರಬೇಕಿತ್ತು. ಒಂದು ತಿಂಗಳು ಮನೆಗೆ ಹೋಗಿರಲಿಲ್ಲ'' ಎಂದು ಹೇಳುವ ಮುಲಾನಿ ತಾವು ಮತ್ತು ಕೆಲ ಇತರ ಅಧಿಕಾರಿಗಳು ಮುಸ್ಲಿಮರೆಂದು ತಿಳಿದ ನಂತರ ಕಸಬ್ ಕೆಲವರ ಜತೆ ಮಾತನಾಡಲು ಆರಂಭಿಸಿದ್ದನೆಂದು ಹೇಳುತ್ತಾರೆ.
"ತಂಡದಲ್ಲಿದ್ದ ನಾವೆಲ್ಲರೂ (ಹಿಂದುಗಳು ಮತ್ತು ಮುಸ್ಲಿಮರು) ಜತೆಯಾಗಿಯೇ ಕುಳಿತು ಊಟ ಮಾಡುವುದು ನೋಡಿ ಆತನಿಗೆ ಅಚ್ಚರಿಯಾಗುತ್ತಿತ್ತು. ನಾವು ನಮ್ಮ ದೇಶದಲ್ಲಿ ಶಾಂತಿಯಿಂದ ಸಂತೋಷದಿಂದ ಇದ್ದೇವೆ ಎಂಬುದನ್ನು ನಂಬಲು ಆತನಿಗೆ ಕಷ್ಟವಾಗಿತ್ತು,'' ಎನ್ನುತ್ತಾರೆ ಮುಲಾನಿ.
"ಭಾರತದಲ್ಲಿ ಮುಸ್ಲಿಮರಿಗೆ ಕಿರುಕುಳ ನಿಡಲಾಗುತ್ತಿದೆ ಹಾಗೂ ಅವರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ತನಗೆ ಹೇಳಲಾಗಿತ್ತು,'' ಎಂದು ಒಂದು ದಿನ ಮುಲಾನಿ ಬಳಿ ಕಸಬ್ ಹೇಳಿಕೊಂಡಿದ್ದನಲ್ಲದೆ ಭಾರತದ ವಿರುದ್ಧ ಜಿಹಾದ್ ನಡೆಸಲು ಲಷ್ಕರ್-ಇ-ತೊಯ್ಬಾದ ಎರಡನೇ ಅತ್ಯುನ್ನತ ನಾಯಕ ಝಕೀವುರ್ ರೆಹಮಾನ್ ಲಖ್ವಿ ತನ್ನನು ಆರಿಸಿದ್ದ ಎಂದು ಹೇಳಿದ್ದ. "ಧರ್ಮ ನಿಂದಕರನ್ನು ಕೊಂದರೆ ನಾನು ಸ್ವರ್ಗಕ್ಕೆ ಹೋಗುತ್ತೇನೆ ಎಂದು ತನಗೆ ಹೇಳಲಾಗಿತ್ತು ಎಂದು ಆತ ಹೇಳಿದ್ದ,'' ಎಂದು ಮುಲಾನಿ ನೆನಪಿಸುತ್ತಾರೆ.
ಆಗ ಅವರು ಕಸಬ್ ಮೇಲೆ ಕಿಡಿ ಕಾರಿ "ನೀನು ಮಾಡಿದ ಕಾರ್ಯಕ್ಕೆ ಸ್ವರ್ಗ ಕೂಡ ನಿನ್ನನ್ನು ಕ್ಷಮಿಸದು, ಅಮಾಯಕರ ನೆತ್ತರು ಹರಿಸಿದ್ದಕ್ಕಾಗಿ ನಿನಗೆ ಶಿಕ್ಷೆಯಾಗಲೇಬೇಕು,'' ಎಂದು ಹೇಳಿದ್ದರು.
"ಆತ ನನ್ನ ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ನನ್ನ ಗುರುವಂತಿದ್ದ ಕಾಮ್ಟೆ ಸಾಹೇಬ್ ಅವರ ಹತ್ಯೆ ನಡೆಸಿದ್ದಕ್ಕೆ ಆತನನ್ನು ಕೊಲ್ಲಬೇಕೆಂದು ನನಗನಿಸಿತ್ತು. ನನ್ನ ಭಾವನೆಗಳನ್ನು ಅದುಮಿಡುವುದು ಬಹಳ ಕಷ್ಟವಾಗಿತ್ತು'' ಎಂದು ಮುಲಾನಿ ಹೇಳುತ್ತಾರೆ.