ಒಂಟಿ ಮಹಿಳೆಯ ಕೊಲೆ ಪ್ರಕರಣ: ಆರೋಪಿ ಬಂಧನ
ಬೆಂಗಳೂರು, ನ.17: ಒಂಟಿ ಮಹಿಳೆಯನ್ನು ಕೊಲೆಗೈದಿದ್ದ ಪ್ರಕರಣ ಸಂಬಂಧ ವ್ಯಕ್ತಿಯೋರ್ವನನ್ನು ಇಲ್ಲಿನ ಆರ್ಎಂಸಿ ಯಾರ್ಡ್ ಠಾಣಾ ಪೊಲೀಸರು ಬಂಧಿಸಿ ದ್ದಾರೆ.
ಕೊಡಗು ಜಿಲ್ಲೆಯ ಸೋಮವಾರ ಪೇಟೆಯ ರಮೇಶ್(48)ಬಂಧಿತ ಆರೋಪಿಯಾಗಿದ್ದು, ಈತ ಬೆಂಗಳೂರಿನ ಲಗ್ಗೆರೆಯ ಚೌಡೇಶ್ವರಿನಗರದಲ್ಲಿ ನೆಲೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅ.25ರಂದು ನಗರದ ಗೊರಗುಂಟೆಪಾಳ್ಯದ 4ನೆ ಕ್ರಾಸ್, 4ನೇ ಬ್ಲಾಕ್ನ ಮನೆಯಲ್ಲಿ ವಾಸವಿದ್ದ ರುಕ್ಮೀಣಮ್ಮ ಎಂಬಾಕೆಯನ್ನು ಯಾರೋ ಅಪರಿಚಿತರು ತಲೆಯ ಹಿಂಬದಿಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು. ಈ ಸಂಬಂಧ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ.
ತನಿಖೆ ಕೈಗೊಂಡ ಪೊಲೀಸರು, ಆರೋಪಿ ರಮೇಶ್ ಅನ್ನು ವಿಚಾರಣೆಗೊಳಪಡಿಸಿದಾಗ, ರುಕ್ಮಿಣಮ್ಮ ಜೊತೆ ಕೆಲವು ತಿಂಗಳಿಂದ ಅನೈತಿಕ ಸಂಬಂಧ ಹೊಂದಿ ಆಕೆಯ ಜೊತೆಯಲ್ಲಿ ಹಣದ ವ್ಯವಹಾರ ಮಾಡಿದ್ದ. ಆದರೆ, ಹಣಕ್ಕಾಗಿ ಆಕೆಯನ್ನು ಕೊಲೆಗೈದು ಚಿನ್ನಾಭರಣ ಮತ್ತು ಮೊಬೈಲ್ ದೋಚಿ ಪರಾರಿಯಾಗಿದ್ದ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.