"ಲಾಲೂ ವಿರುದ್ಧ ಅಸ್ತಾನಾ, ಸುಶೀಲ್ ಮೋದಿ, ಪ್ರಧಾನಿ ಕಚೇರಿ ಸಂಘಟಿತ ಯತ್ನ"
![ಲಾಲೂ ವಿರುದ್ಧ ಅಸ್ತಾನಾ, ಸುಶೀಲ್ ಮೋದಿ, ಪ್ರಧಾನಿ ಕಚೇರಿ ಸಂಘಟಿತ ಯತ್ನ ಲಾಲೂ ವಿರುದ್ಧ ಅಸ್ತಾನಾ, ಸುಶೀಲ್ ಮೋದಿ, ಪ್ರಧಾನಿ ಕಚೇರಿ ಸಂಘಟಿತ ಯತ್ನ](https://www.varthabharati.in/sites/default/files/images/articles/2018/11/18/163772.jpg)
ಹೊಸದಿಲ್ಲಿ,ನ.18: ಸಿಬಿಐ ಜಂಟಿ ನಿರ್ದೇಶಕರಾಗಿದ್ದ ರಾಕೇಶ್ ಅಸ್ತಾನಾ, ಪ್ರಧಾನಿ ಕಚೇರಿಯ ಉನ್ನತ ಅಧಿಕಾರಿಗಳು ಮತ್ತು ಬಿಜೆಪಿ ಮುಖಂಡ ಸುಶೀಲ್ ಮೋದಿಯವರು ರಾಷ್ಟ್ರೀಯ ಜನತಾದಳ ಮುಖಂಡ ಲಾಲು ಪ್ರಸಾದ್ ಯಾದವ್ ವಿರುದ್ಧ ಐಆರ್ಸಿಟಿಸಿ ಹಗರಣದಲ್ಲಿ ಪ್ರಕರಣ ದಾಖಲಿಸಲು ಒಟ್ಟಾಗಿ ಪ್ರಯತ್ನಿಸಿದ್ದರು ಎಂಬ ಅಂಶವನ್ನು ಸಿಬಿಐ ನಿದೇರ್ಶಕ ಅಲೋಕ್ ವರ್ಮಾ ಅವರು ಕೇಂದ್ರೀಯ ವಿಚಕ್ಷಣಾ ಆಯೋಗದ ಪ್ರಶ್ನಾವಳಿಗೆ ನೀಡಿದ ಉತ್ತರದಲ್ಲಿ ಆರೋಪಿಸಿದ್ದಾರೆ.
ವರ್ಮಾ ಹಾಗೂ ಅಸ್ತಾನಾ ನಡುವೆ ನಡೆಯುತ್ತಿದ್ದ ಸಮರದಲ್ಲಿ ಮಧ್ಯಪ್ರವೇಶಿಸಿದ ಸುಪ್ರೀಂಕೋರ್ಟ್, ವರ್ಮಾ ವಿರುದ್ಧದ ವಿಧಿವಿಧಾನ ಅವ್ಯವಹಾರ ಆರೋಪದ ಬಗ್ಗೆ ತನಿಖೆ ನಡೆಸಲು ಸಿವಿಸಿಗೆ ಆದೇಶ ನೀಡಿತ್ತು. ಸಿವಿಸಿ ಈಗಾಗಲೇ ವರದಿಯನ್ನು ಸುಪ್ರೀಂಕೋರ್ಟ್ ಪೀಠಕ್ಕೆ ಸಲ್ಲಿಸಿದ್ದು, ಇದರ ಪ್ರತಿಯನ್ನು ಸಿಬಿಐ ನಿರ್ದೇಶಕರಿಗೂ ಸಲ್ಲಿಸಿ, ಅದನ್ನು ಪ್ರಶ್ನಿಸಲು ಅವಕಾಶ ಮಾಡಿಕೊಡುವಂತೆ ಸೂಚಿಸಿದೆ.
ಅಸ್ತಾನಾ ಮಾಡಿರುವ ಎಲ್ಲ ಆರೋಪಗಳನ್ನು ವರ್ಮಾ ನಿರಾಕರಿಸಿರುವುದು ಮಾತ್ರವಲ್ಲದೇ, ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಲ್ಲಿ ಉದ್ಭವಿಸಿರುವ ಸಂಘರ್ಷಕ್ಕೆ ಮೋದಿ ಸರ್ಕಾರವೇ ನೇರ ಹೊಣೆ ಎಂದು ಆಪಾದಿಸಿದ್ದಾರೆ. ಲಾಲೂ ವಿರುದ್ಧದ ಪ್ರಕರಣವನ್ನು ದುರ್ಬಲಗೊಳಿಸಲು ವರ್ಮಾ ಪ್ರಯತ್ನಿಸಿದ್ದಾರೆ ಎಂಬ ಅಸ್ತಾನಾ ಆರೋಪವನ್ನು ಅಲ್ಲಗಳೆದಿರುವ ನಿರ್ದೇಶಕರು, ರಾಕೇಶ್ ಕ್ರಮ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.