ಈ ರಾಜ್ಯದಲ್ಲಿ ಕಾಂಗ್ರೆಸ್ ಜತೆ ಚುನಾವಣೋತ್ತರ ಮೈತ್ರಿಗೆ ಮುಂದಾದ ಬಿಜೆಪಿ!
![ಈ ರಾಜ್ಯದಲ್ಲಿ ಕಾಂಗ್ರೆಸ್ ಜತೆ ಚುನಾವಣೋತ್ತರ ಮೈತ್ರಿಗೆ ಮುಂದಾದ ಬಿಜೆಪಿ! ಈ ರಾಜ್ಯದಲ್ಲಿ ಕಾಂಗ್ರೆಸ್ ಜತೆ ಚುನಾವಣೋತ್ತರ ಮೈತ್ರಿಗೆ ಮುಂದಾದ ಬಿಜೆಪಿ!](https://www.varthabharati.in/sites/default/files/images/articles/2018/11/20/164085.gif)
ಹಿಮಾಂತ ಬಿಸ್ವ ಶರ್ಮಾ
ಐಜ್ವಾಲ್, ನ.20: ಪುಟ್ಟ ಬೆಟ್ಟ ರಾಜ್ಯವಾದ ಮಿಝೋರಾಂನಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರಮುಖ ವಿರೋಧ ಪಕ್ಷವಾದ ಮಿಝೋ ನ್ಯಾಷನಲ್ ಫ್ರಂಟ್, ತಮ್ಮ ಬಿಜೆಪಿ ವಿರೋಧಿ ನೀತಿಯನ್ನು ದೃಢಪಡಿಸಲು ಪ್ರಯತ್ನಿಸುತ್ತಿದ್ದರೆ, ಬಿಜೆಪಿ ಮಾತ್ರ ಕಾಂಗ್ರೆಸ್ ಸೇರಿದಂತೆ ಉಭಯ ಪಕ್ಷಗಳ ಜತೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂದು ಘೋಷಿಸಿದೆ.
ಬಿಜೆಪಿ ಮಿಝೋರಾಂ ಇತಿಹಾಸದಲ್ಲೇ ಒಂದೂ ವಿಧಾನಸಭಾ ಕ್ಷೇತ್ರವನ್ನು ಗೆದ್ದಿಲ್ಲ. ಸುಮಾರು 10 ಲಕ್ಷ ಜನಸಂಖ್ಯೆ ಹೊಂದಿರುವ ಈ ರಾಜ್ಯದಲ್ಲಿ 7.68 ಲಕ್ಷ ಮತದಾರರಿದ್ದಾರೆ. ಈ ಭಾಗದ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಸ್ವಂತ ಬಲದಲ್ಲಿ ಅಥವಾ ಪ್ರಾದೇಶಿಕ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡು ಅಧಿಕಾರದಲ್ಲಿದ್ದು, ಬಿಜೆಪಿ ಭೇದಿಸಬೇಕಾಗಿರುವ ಏಕೈಕ ಕೋಟೆ ಇದಾಗಿದೆ.
ಕ್ರಿಶ್ಚಿಯನ್ನರ ಪ್ರಾಬಲ್ಯವಿರುವ ಈ ರಾಜ್ಯದಲ್ಲಿ, ಈ ಬಾರಿ ಬಿಜೆಪಿ ಆಡಳಿತದಲ್ಲಿ ಕ್ರಿಸ್ಮಸ್ ಆಚರಿಸಲಿದ್ದೇವೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಇತ್ತೀಚೆಗೆ ಘೋಷಿಸಿದ್ದರು.
ಅಸ್ಸಾಂನ ಹಣಕಾಸು ಸಚಿವ ಹಿಮಾಂತ ಬಿಸ್ವ ಶರ್ಮಾ, ಮಿಝೋರಾಂನಲ್ಲಿ ಬಿಜೆಪಿ ಉಸ್ತುವಾರಿ ಹೊಣೆ ಹೊಂದಿದ್ದು, ತಮ್ಮ ಪಕ್ಷ ಎಲ್ಲ ಆಯ್ಕೆಗಳನ್ನು ಮುಕ್ತವಾಗಿ ಇರಿಸಿಕೊಂಡಿರುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದರೂ, ಮುಖ್ಯಮಂತ್ರಿ ಲಾಲ್ ತಾನ್ವಾಲಾ ಅವರೊಂದಿಗೆ ಚುನಾವಣೋತ್ತರ ಮೈತ್ರಿ ಸಾಧ್ಯತೆಯನ್ನು ಪರಿಶೀಲಿಸುತ್ತಿರುವುದಾಗಿ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಚುನಾವಣೋತ್ತರ ಮೈತ್ರಿಕೆ ಎಂಎನ್ಎಫ್ ಮಾತ್ರ ತಮ್ಮ ಆಯ್ಕೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
"ಮಿಝೋರಾಂನಲ್ಲಿ ಕಾಂಗ್ರೆಸ್ ಪ್ರತ್ಯೇಕ ಸಂವಿಧಾನವನ್ನು ಹೊಂದಿದೆ. ಇದಕ್ಕೆ ವಿಶಿಷ್ಟ ಇತಿಹಾಸವಿದೆ. ಒಂದು ಪಕ್ಷವಾಗಿ, ದೇಶದ ಇತರ ಭಾಗಗಳಿಗಿಂತ ಇಲ್ಲಿನ ಸಂವಿಧಾನ ಭಿನ್ನ. ಲಾಲ್ ತಾನ್ವಾಲಾ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ವೈಯಕ್ತಿಕವಾಗಿ ಮುಖ್ಯಮಂತ್ರಿ ಜತೆ ಸೌಹಾರ್ದ ಸಂಬಂಧ ಹೊಂದಿದ್ದೇವೆ" ಎಂದು ಹೇಳಿದ್ದಾರೆ.