ಸೊಹ್ರಾಬುದ್ದೀನ್ ಎನ್ಕೌಂಟರ್ ಪ್ರಕರಣದಿಂದ ಅಮಿತ್ ಶಾಗೆ ಲಾಭ: ನ್ಯಾಯಾಲಯಕ್ಕೆ ತಿಳಿಸಿದ ಮಾಜಿ ಸಿಬಿಐ ಅಧಿಕಾರಿ
![ಸೊಹ್ರಾಬುದ್ದೀನ್ ಎನ್ಕೌಂಟರ್ ಪ್ರಕರಣದಿಂದ ಅಮಿತ್ ಶಾಗೆ ಲಾಭ: ನ್ಯಾಯಾಲಯಕ್ಕೆ ತಿಳಿಸಿದ ಮಾಜಿ ಸಿಬಿಐ ಅಧಿಕಾರಿ ಸೊಹ್ರಾಬುದ್ದೀನ್ ಎನ್ಕೌಂಟರ್ ಪ್ರಕರಣದಿಂದ ಅಮಿತ್ ಶಾಗೆ ಲಾಭ: ನ್ಯಾಯಾಲಯಕ್ಕೆ ತಿಳಿಸಿದ ಮಾಜಿ ಸಿಬಿಐ ಅಧಿಕಾರಿ](https://www.varthabharati.in/sites/default/files/images/articles/2018/11/20/164094.jpeg)
ಹೊಸದಿಲ್ಲಿ, ನ.20: ಗುಜರಾತ್ ರಾಜ್ಯದ ಅಂದಿನ ಗೃಹ ಸಚಿವರಾಗಿದ್ದ ಅಮಿತ್ ಶಾ ಅವರು ನವೆಂಬರ್ 2005ರ ಸೊಹ್ರಾಬುದ್ದೀನ್ ಶೇಖ್ `ನಕಲಿ' ಎನ್ಕೌಂಟರ್ ಪ್ರಕರಣದಿಂದ ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಲಾಭ ಗಳಿಸಿದ್ದರೆಂದು ಈ ಪ್ರಕರಣದ ಮುಖ್ಯ ತನಿಖಾಧಿಕಾರಿಯಾಗಿದ್ದ ಸಿಬಿಐ ಗಾಂಧಿನಗರ ಘಟಕದ ಮಾಜಿ ಎಸ್ಪಿ ಅಮಿತಾಭ್ ಠಾಕುರ್ ಸೋಮವಾರ ಸಿಬಿಐ ನ್ಯಾಯಾಲಯದ ಮುಂದೆ ಹೇಳಿದ್ದಾರೆ ಎಂದು thehindu.com ವರದಿ ಮಾಡಿದೆ.
ಅಮಿತ್ ಶಾ ಹೊರತಾಗಿ ಎಟಿಎಸ್ನ ಮಾಜಿ ಡಿಐಜಿ ಡಿ ಜಿ ವಂಝಾರ, ಉದಯಪುರದ ಮಾಜಿ ಎಸ್ಪಿ ದಿನೇಶ್ ಎಂ ಎನ್, ಅಹ್ಮದಾಬಾದ್ನ ಮಾಜಿ ಎಸ್ಪಿ ರಾಜಕುಮಾರ್ ಪಾಂಡ್ಯನ್, ಅಹ್ಮದಾಬಾದ್ನ ಮಾಜಿ ಡಿವೈಎಸ್ಪಿ ಅಭಯ್ ಚುಡಾಸ್ಮ ಕೂಡ ಈ ಪ್ರಕರಣದಿಂದ ರಾಜಕೀಯ ಲಾಭ ಪಡೆದಿದ್ದರೆಂದು, ಠಾಕುರ್ ಬಹಿರಂಗಪಡಿಸಿದ್ದಾರೆ.
ಅಹ್ಮದಾಬಾದ್ನ ಪಾಪ್ಯುಲರ್ ಬಿಲ್ಡರ್ಸ್ ಮಾಲಕರಾದ ಪಟೇಲ್ ಸೋದರರು ಅಮಿತ್ ಶಾಗೆ 70 ಲಕ್ಷ ರೂ. ಪಾವತಿಸಿದ್ದರೆಂದೂ ಅವರು ತಿಳಿಸಿದ್ದಾರೆ. ಹಣ ನೀಡದೇ ಇದ್ದರೆ ಗಂಭೀರ ಪರಿಣಾಮ ಎದುರಿಸಬೇಕಾದೀತೆಂದು ಅವರನ್ನು ಎಚ್ಚರಿಸಲಾಗಿತ್ತು, ಮಾಜಿ ಡಿಐಜಿ ವಂಝಾರ ಅವರಿಗೂ ಪಟೇಲ್ ಸೋದರರು ರೂ 60 ಲಕ್ಷ ನೀಡಿದ್ದರೆಂದು ಠಾಕುರ್ ಹೇಳಿದ್ದಾರೆ.
ಆದರೆ ವಿಚಾರಣೆ ಎದುರಿಸುತ್ತಿರುವ ಯಾವುದೇ ಪೊಲೀಸ್ ಅಧಿಕಾರಿ ಎನ್ಕೌಂಟರ್ ನಿಂದ ಯಾವುದೇ ಲಾಭ ಪಡೆದಿಲ್ಲ. ಇಪ್ಪತ್ತು ಆರೋಪಿಗಳು ವಂಝಾರ, ಪಾಂಡ್ಯನ್, ದಿನೇಶ್ ಮತ್ತು ಚುಡಾಸ್ಮ ಅವರ ಅಣತಿಯಂತೆ ಕಾರ್ಯಾಚರಿಸಿದ್ದರು. ಇವರೆಲ್ಲರೂ ಆರೋಪಮುಕ್ತಗೊಂಡಿದ್ದಾರೆಂದು ಅವರು ಹೇಳಿದರು.
ಸೊಹ್ರಾಬುದ್ದೀನ್ ಮೈಮೇಲಿದ್ದ 92 ಕರೆನ್ಸಿ ನೋಟುಗಳ ವಿಚಾರದಲ್ಲಿ ಯಾವುದೇ ತನಿಖೆ ನಡೆಸಲಾಗಿಲ್ಲ, ಅಹ್ಮದಾಬಾದ್ ಎಟಿಎಸ್ನ ಮಾಜಿ ಎಸ್ಐ ಬಾಲಕೃಷ್ಣನ್ ಚೌಬೆ ಅವರು ಆರೋಪಿಯಾಗಿದ್ದರೂ ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಯಾವುದೇ ಸಾಕ್ಷ್ಯವಿರಲಿಲ್ಲ ಎಂದು ಅವರು ಹೇಳಿದರು.
ಸೊಹ್ರಾಬುದ್ದೀನ್ ದೇಹದಲ್ಲಿ ಎಂಟು ಬುಲೆಟ್ಗಳಿದ್ದವು ಎಂದು ಆತನ ಸೋದರ ರುಬಾಬುದ್ದೀನ್ ಹೇಳಿಕೆ ನಿರಾಕರಿಸಿದ ಠಾಕುರ್, ಕೇವಲ ಒಂದು ಬುಲೆಟ್ ಆತನ ದೇಹದಲ್ಲಿ ಪತ್ತೆಯಾಗಿತ್ತು, ಎರಡು ಮೂರು ಬುಲೆಟ್ಗಳು ದೇಹದ ಮೂಲಕ ಹಾದು ಹೋಗಿದ್ದರೂ ಆ ಬುಲೆಟ್ಗಳು ಸ್ಥಳದಲ್ಲಿ ಪತ್ತೆಯಾಗಿರಲಿಲ್ಲ ಎಂದು ಅವರು ತಿಳಿಸಿದರು. ಈ ನಕಲಿ ಎನ್ಕೌಂಟರ್ಗೆ ಯಾವುದೇ ಪ್ರತ್ಯಕ್ಷ ಸಾಕ್ಷಿ ಇಲ್ಲವೆಂದೂ ಅವರು ಇದೇ ಸಂದರ್ಭ ಹೇಳಿದರು.