ಕಳೆದ ನಾಲ್ಕೂವರೆ ವರ್ಷದಲ್ಲಿ ರೈತನಾಗಿ 60 ಲಕ್ಷ ಸಂಪಾದಿಸಿದ ತೆಲಂಗಾಣ ಸಿಎಂ ಪುತ್ರ!
![ಕಳೆದ ನಾಲ್ಕೂವರೆ ವರ್ಷದಲ್ಲಿ ರೈತನಾಗಿ 60 ಲಕ್ಷ ಸಂಪಾದಿಸಿದ ತೆಲಂಗಾಣ ಸಿಎಂ ಪುತ್ರ! ಕಳೆದ ನಾಲ್ಕೂವರೆ ವರ್ಷದಲ್ಲಿ ರೈತನಾಗಿ 60 ಲಕ್ಷ ಸಂಪಾದಿಸಿದ ತೆಲಂಗಾಣ ಸಿಎಂ ಪುತ್ರ!](https://www.varthabharati.in/sites/default/files/images/articles/2018/11/20/164100.jpg)
ಸಿರ್ಸಿಲಾ, ನ.20: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಪುತ್ರ ಕೆಟಿ ರಾಮರಾವ್ ಕಳೆದ ನಾಲ್ಕೂವರೆ ವರ್ಷಗಳಲ್ಲಿ ರೈತನಾಗಿ ಪರಿವರ್ತಿತನಾಗಿದ್ದಾರೆ. ಮಾತ್ರವಲ್ಲ ಈ ವೇಳೆ ಅವರು 60 ಲಕ್ಷ ರೂ. ಸಂಪಾದಿಸಿದ್ದಾರಂತೆ!
ಸೋಮವಾರ ಮುಂಬರುವ ವಿಧಾನಸಭಾ ಚುನಾವಣೆಗೆ ಸಿರ್ಸಿಲ್ಲಾ ಕ್ಷೇತ್ರಕ್ಕೆ ಟಿಆರ್ಎಸ್ ಅಭ್ಯರ್ಥಿಯಾಗಿ ನಾಮಪತ್ರಗಳ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಾನೊಬ್ಬ ರೈತ ಹಾಗೂ ಮಾಜಿ ಸಚಿವ ಎಂದು ನಮೂದಿಸಿದ್ದಾರೆ. ಕೃಷಿ ಮೂಲಕ ಸುಮಾರು 60 ಲಕ್ಷ ರೂ. ಸಂಪಾದಿಸಿದ್ದಾಗಿ ಹೇಳಿಕೊಂಡಿದ್ದಾರೆ. 2017-18ರಲ್ಲಿ ಇತರ ಮೂಲಗಳ ಆದಾಯದಿಂದ 14.54 ಲಕ್ಷ ರೂ. ಗಳಿಸಿದ್ದಾಗಿ ಹೇಳಿದ್ದಾರೆ.
ಕೆಟಿಆರ್ 2014ರ ಚುನಾವಣೆಯಲ್ಲಿ ತಾನೊಬ್ಬ ಶಾಸಕ ಎಂದು ಘೋಷಿಸಿಕೊಂಡಿದ್ದರು. ಕಳೆದ 2 ಅಸೆಂಬ್ಲಿ ಚುನಾವಣೆಯ ನಡುವೆ ಟಿಆರ್ಎಸ್ ಅಭ್ಯರ್ಥಿಯ ಆದಾಯ 40 ಶೇ. ಹೆಚ್ಚಳವಾಗಿದೆ. ಕೆಟಿಆರ್ 2014ರ ಚುನಾವಣೆಯ ವೇಳೆ 4 ಕೋ.ರೂ. ಆದಾಯ ಘೋಷಿಸಿಕೊಂಡಿದ್ದರು. ಇದೀಗ ಅವರ ಆಸ್ತಿ ಹಾಗೂ ಆದಾಯ 5.67 ಕೋ.ರೂ.ಗೆ ಏರಿದೆ.
ಕೆಟಿಆರ್ ಅವರ ಪತ್ನಿ ಹಾಗೂ ಉದ್ಯಮಿ ಶೈಲಿಮಾ ಅವರ ಆಸ್ತಿ ಕಳೆದ ನಾಲ್ಕೂವರೆ ವರ್ಷದಲ್ಲಿ 10 ಪಟ್ಟು ಏರಿಕೆಯಾಗಿದೆ. 2014ರಲ್ಲಿ ಶೈಲಿಮಾ ಆಸ್ತಿಯ ವೌಲ್ಯ 4.20 ಕೋ.ರೂ. ಇತ್ತು.ಇದೀಗ ಅದು 46 ಕೋ.ರೂ.ಗೆ ಏರಿಕೆಯಾಗಿದೆ.