12 ವರ್ಷಗಳ ಬಳಿಕ ಮುರ್ಶಿದಾಬಾದ್ ನಲ್ಲಿರುವ ಮನೆ ಸೇರಿದ ಅಸ್ಗರ್
ಸ್ನೇಹಾಲಯದಿಂದ ಶುಶ್ರೂಷೆ

ಮಂಗಳೂರು, ನ. 20: ಕುರುಚಲು ಗಡ್ಡವಿಟ್ಟು ಮಾನಸಿಕ ಅಸ್ವಸ್ಥತೆಯಿಂದ ಗುಂಡ್ಯ ಚೆಕ್ ಪೋಸ್ಟ್ ಬಳಿ ತಿಪ್ಪೆಗುಂಡಿಯಲ್ಲಿ ಕಸ ತಿಂದು ಕಾಲ ಕಳೆಯುತ್ತಿದ್ದ 35ರ ಹರೆಯದ ಯುವಕ ಆರೋಗ್ಯ ಸುಧಾರಿಸಿ ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ನಲ್ಲಿರುವ ತನ್ನ ಮನೆಗೆ ತಲುಪಿ ಕುಟುಂಬಿಕರ ಜೊತೆ ಮೀಲಾದುನ್ನಬಿ ಆಚರಿಸಿಕೊಂಡ ಅಪರೂಪದ ಘಟನೆ ಮಂಗಳವಾರ ನಡೆದಿದೆ.
ಅಸ್ಗರ್ (35) ಮಂಗಳೂರು-ಬೆಂಗಳೂರು ಹೆದ್ದಾರಿಯ ಗುಂಡ್ಯ ಚೆಕ್ ಪೋಸ್ಟ್ ಬಳಿ ಮಾನಸಿಕ ಅಸ್ವಸ್ಥತೆಯಿಂದ ಇರುವುದನ್ನು ಮನಗಂಡ ಸ್ಥಳೀಯ ಯುವಕರು ಬ್ರದರ್ ಜೋಸೆಫ್ ಸಾರಥ್ಯದ ತಲಪಾಡಿಯ "ಸ್ನೇಹಾಲಯ"ಕ್ಕೆ ಕಳೆದ ಮಾರ್ಚ್ ನಲ್ಲಿ ದಾಖಲಿಸಿದ್ದರು. ಸ್ನೇಹಾಲಯದ ಶುಶ್ರೂಷೆಯನ್ನು ಪಡೆದ ಅಸ್ಗರ್ ನಂತರ ಮಾನಸಿಕವಾಗಿ ಸದೃಢರಾದರು. ತಾನು ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ನಿವಾಸಿಯೆಂದು ಅಸ್ಗರ್ ಗೆ ಮನವರಿಕೆಯಾಯಿತು. ಅವರು 12 ವರ್ಷಗಳ ಹಿಂದೆ ಕುಟುಂಬವನ್ನು ಬೇರ್ಪಟ್ಟಿದ್ದರು.
ಆರೋಗ್ಯ ಸುಧಾರಣೆಗೊಂಡ ಅಸ್ಗರ್ ರನ್ನು ಸ್ನೇಹಾಲಯ ಸಂಸ್ಥೆ ಮುಂಬೈಯ ಶ್ರದ್ಧಾ ಪುನರ್ವಸತಿ ಕೇಂದ್ರಕ್ಕೆ ಇತ್ತೀಚೆಗೆ ವರ್ಗಾಯಿಸಿತು. ಶ್ರದ್ಧಾ ಕೇಂದ್ರದವರು ಅಸ್ಗರ್ ರನ್ನು ಪಶ್ಚಿಮ ಬಂಗಾಳದ ಅವರ ಮನೆಗೆ ಕರೆದುಕೊಂಡು ಹೋಗಿ ಇಂದು ಕುಟುಂಬಿಕರೊಂದಿಗೆ ಪುನರ್ಮಿಲನಗೊಳಿಸಿ, ಅಸ್ಗರ್ ಅವರ ಔಷಧಿ, ಊಟೋಪಚಾರಕ್ಕೆ ಬೇಕಾದ ವ್ಯವಸ್ಥೆಯನ್ನೂ ಮಾಡಿದೆ.